ಸೂರ್ಯಕುಮಾರ್ ಯಾದವ್ ಬಿಟ್ಟು ಬಿಡದಂತೆ ನನಗೆ ಮೆಸೇಜ್ ಮಾಡ್ತಿದ್ರು ; SKY ಮೇಲೆ ಮಾತಿನ ಬಾಂಬ್ ಎಸೆದ ನಟಿ
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್ವರೆಗೆ..
ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.

ಆದರೆ ಇಲ್ಲಿಯೂ ಕೂಡ ಕೆಲವರು ಚಪಲ ಚನ್ನಿಗರಾಯರು ಇದ್ದಾರೆ. ಅವಕಾಶ ಸಿಕ್ಕರೆ ಸಾಕು ಚೆಲುವೆಯರ ಹಿಂದೆ ಓಡಾಡುತ್ತಾರೆ. ಬಿಟ್ಟು ಬಿಡದಂತೆ ಮೆಸೇಜ್ ಕೂಡ ಮಾಡುತ್ತಾರೆ. ಆ ಪೈಕಿ ಭಾರತ ಟಿ20 ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಕೂಡ ಒಬ್ಬರು. ಇಂತಹದ್ದೊಂದು ಬಾಂಬ್ನ್ನು ಸದ್ಯ ಖುಷಿ ಮುಖರ್ಜಿ ಎಸೆದಿದ್ದಾರೆ.
ಹೌದು.. ಖುಷಿ ಮುಖರ್ಜಿ .. ಅಂಗಾಗ ಪ್ರದರ್ಶನ ಮಾಡುವುದನ್ನೇ ಅಭಿನಯ ಎಂದುಕೊಂಡಿರುವ ಚೆಲುವೆ. ಉರ್ಫಿ ಜಾವೇದ್ಗೆ ಸೆಡ್ಡು ಹೊಡೆಯುವಂತೆ ಬಟ್ಟೆಗಳನ್ನು ಧರಿಸಿಕೊಂಡು ಮುಂಬೈನ ಬೀದಿ ಬೀದಿಗಳಲ್ಲಿ ಓಡಾಡುವ ಖುಷಿ ಮುಖರ್ಜಿ ಸದ್ಯ ಟ್ರೋಲಿಗರ ಪಾಲಿನ ತಾಂಬೂಲವು ಹೌದು.
ತಮ್ಮ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಚಿತ್ರವನ್ನು ಮಾಡದ ಖುಷಿ ಮುಖರ್ಜಿ ಬಿ ಗ್ರೇಡ್ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. 2013ರಲ್ಲಿ ಒಂದು ತಮಿಳು ಮತ್ತು 2014ರಲ್ಲೊಂದು ತೆಲುಗು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ದಕ್ಷಿಣದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ. ಇನ್ನೂ ಟಿವಿ ಚಾನಲ್ ಒಂದರ ಲೈವ್ ಶೋನಲ್ಲಿ ಒಬ್ಬ ಹುಡುಗನ ಕಪಾಳಕ್ಕೆ ಹೊಡೆದು ಧಮಕಿ ಹಾಕಿದ ಹೆಗ್ಗಳಿಕೆ ಕೂಡ ಇವರಿಗಿದೆ.
ಇದಲ್ಲದೇ MTV ಯ ''ಸ್ಪ್ಲಿಟ್ಸ್ವಿಲ್ಲಾ 10'' ಮತ್ತು ''ಲವ್ ಸ್ಕೂಲ್ 3'' ನಲ್ಲಿ ಕೂಡ ಕಾಣಿಸಿಕೊಂಡಿದ್ದ ಖುಷಿ ಮುಖರ್ಜಿ, ''ಬಾಲ್ವೀರ್ ರಿಟರ್ನ್ಸ್''ನಲ್ಲಿಯೂ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇಂಥಾ ಖುಷಿ ಮುಖರ್ಜಿ ಸದ್ಯ ಸೂರ್ಯ ಕುಮಾರ್ ಯಾದವ್ ಕುರಿತು ಕೆಲ ಮಾತುಗಳನ್ನು ಆಡಿದ್ದಾರೆ. ನನಗೆ ನಿರಂತರವಾಗಿ ಮೆಸೇಜ್ ಮಾಡುತ್ತಿದ್ದರು ಎಂದಿದ್ದಾರೆ. ಈ ಕುರಿತು ವೈರಲ್ ಆದ ವಿಡಿಯೋದಲ್ಲಿ ಮಾತನಾಡಿರುವ ಖುಷಿ ಮುಖರ್ಜಿ, ಹಲವು ಕ್ರಿಕೆಟಿಗರು ನನ್ನ ಹಿಂದೆ ಬಿದ್ದಿದ್ದರು. ಆ ಪೈಕಿ ಸೂರ್ಯಕುಮಾರ್ ಯಾದವ್ ನನಗೆ ಬಿಟ್ಟು ಬಿಡದಂತೆ ಮೆಸೇಜ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಮುಂದುವರೆದು ಸಡನ್ ಜ್ಞಾನೋದಯವಾದಂತೆ ನಮ್ಮಿಬ್ಬರ ನಡುವೆ ಹೆಚ್ಚಿನ ಮಾತುಕತೆ ನಡೆದಿಲ್ಲ. ನಾನು ಅವರ ಜತೆ ಸಂಪರ್ಕ ಹೊಂದಲು ಬಯಸಲಿಲ್ಲ ಎಂದು ಹೇಳಿರುವ ಖುಷಿ ಮುಖರ್ಜಿ ಯಾರೊಂದಿಗೂ ಲಿಂಕ್ ಆಗುವುದು ನನಗೆ ಇಷ್ಟವಿಲ್ಲ. ಹೀಗಾಗಿ ನಮ್ಮ ನಡುವೆ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿದ್ದಾರೆ.
ಸದ್ಯ ಖುಷಿ ಮುಖರ್ಜಿ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಮುನ್ನುಡಿಯನ್ನು ಬರೆದಿವೆ. ಕ್ರಿಕೆಟ್ ವಲಯದಲ್ಲಿ ಕೂಡ ಈ ಮಾತುಗಳು ಸಂಚಲನ ಮೂಡಿಸಿವೆ. ಖುಷಿ ಮುಖರ್ಜಿ ಅವರ ಈ ಹೇಳಿಕೆ ಕುರಿತು ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಗೆದ್ದ ನಂತರ ವಿಶ್ರಾಂತಿ ಪಡೆಯುತ್ತಿರುವ ಸೂರ್ಯ ಕುಮಾರ್ ಯಾದವ್ ಇಂದು ( ಡಿಸೆಂಬರ್ 30) ವೈಕುಂಠ ಏಕಾದಶಿ ಪ್ರಯುಕ್ತ ತಮ್ಮ ಪತ್ನಿ ದೇವೀಶಾ ಶೆಟ್ಟಿ ಅವರ ಜೊತೆ ತಿರುಪತಿಗೆ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸೂರ್ಯ ಕುಮಾರ್ ಯಾದವ್ ಈ ಕುರಿತು ಪ್ರತಿಕ್ರಿಯೆ ನೀಡುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











