ಪಾತ್ರಕ್ಕಾಗಿ ಪಲ್ಲಂಗ ; ನಟಿಯರು ಕಾಫಿ ಶಾಪ್ಗೆ ಹೋಗುವುದನ್ನು ಮೊದಲು ನಿಲ್ಲಿಸಬೇಕೆಂದ ಬಾಲಿವುಡ್ ಸ್ಟಾರ್...!
ಬಣ್ಣದ ಪ್ರಪಂಚದಲ್ಲಿ ನಡೆದ ಲೈಂಗಿಕ ಪ್ರಕರಣ.. ಕಿರುಕುಳ.. ದೌರ್ಜನ್ಯದ ಕುರಿತು ವಾರಕ್ಕೊಮ್ಮೆಯಾದರು ನಾವೆಲ್ಲರೂ ಸುದ್ದಿಯನ್ನ ಕೇಳುತ್ತಲೇ ಇರುತ್ತೇವೆ. ಅದರಲ್ಲಿಯೂ ಕಳೆದ ಐದಾರು ವರ್ಷದಲ್ಲಿ ಅನೇಕ ಪ್ರಜ್ಞಾವಂತ ನಟಿಯರು ದಿಟ್ಟತನದಿಂದ ಸಾಕಷ್ಟು ತೆರೆ ಮರೆಯ ಕಳ್ಳಾಟಗಳನ್ನು ಇಲ್ಲಿಯವರೆಗೆ ಬಹಿರಂಗಪಡಿಸಿದ್ದಾರೆ. ಕಾಮುಕರ ಮುಖವಾಡವನ್ನು ಕಳಚಿದ್ದಾರೆ. ಭಾಷೆಯ ಭೇದ ಭಾವ ಇಲ್ಲದೇ ನಿರ್ಮಾಪಕರು ನಿರ್ದೇಶಕರಿಂದ ಹಿಡಿದು ಸ್ಟಾರ್ಗಳ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.
ಆದರೂ ಕೂಡ ಕಾಮಾಂಧರ ಧೈರ್ಯ ಕಡಿಮೆಯಾಗಿಲ್ಲ. ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಮುಕ್ತಾಯವಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ಸುತ್ತಿನ ಮೀಟೂ ಅಲೆ ಎದ್ದಿದೆ. ಹೇಮಾ ಆಯೋಗದ ವರದಿಯಿಂದ ಅಲ್ಲೋಲ.. ಕಲ್ಲೋಲದ ವಾತಾವರಣ ನಿರ್ಮಾಣವಾಗಿದೆ. ನಿವಿನ್ ಪೌಲಿ ಅವರಿಂದ ಹಿಡಿದು ಅನೇಕರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವನ್ನೂ ಮಾಡಲಾಗಿದೆ. ಇದರ ನಡುವೆ ಈಗ ಇದೆಲ್ಲವೂ ಇಂದು ನಿನ್ನೆಯದಲ್ಲ, ವರ್ಷಾನುವರ್ಷಗಳ ಹಿಂದಿನಿಂದ ಕೂಡ ಚಿತ್ರರಂಗದಲ್ಲಿ ಚಿತ್ರ ಮತ್ತು ಪಾತ್ರದ ಹೆಸರಿನಲ್ಲಿ ನಡೆಯಬಾರದ್ದೆಲ್ಲ ನಡೆಯುತ್ತಾನೇ ಬಂದಿದೆ ಎಂದು ಬಾಲಿವುಡ್ನ ನಟ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಹೌದು, ಕಳೆದ 17-18 ವರ್ಷಗಳಿಂದ ಬಾಲಿವುಡ್ನಲ್ಲಿ ಸೈಕಲ್ ಹೊಡೆದವರು ಅಭಿಷೇಕ್ ಬ್ಯಾನರ್ಜಿ. ರಂಗ್ ದೇ ಬಸಂತಿ.. ನೋ ಓನ್ ಕಿಲ್ಲಡ್ ಜೆಸ್ಸಿಕಾ.. ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡಿದ್ದ ಅಭಿಷೇಕ್ ಬ್ಯಾನರ್ಜಿ, ಸ್ತ್ರೀ ಚಿತ್ರದ ಮೂಲಕ ಜನಮನ್ನಣೆ ಗಳಿಸಿದರು. ಪಾತಾಲ್ ಲೋಕ್ ವೆಬ್ ಸರಣಿ ಮೂಲಕ ಜಗದ್ವಿಖ್ಯಾತಿಯನ್ನೂ ಗಳಿಸಿದರು. ಸದ್ಯ ಅಭಿಷೇಕ್ ಬ್ಯಾನರ್ಜಿ ಅಭಿನಯದ ಸ್ತ್ರೀ 2 ಬಾಲಿವುಡ್ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಇನ್ನೂ ಅಭಿಷೇಕ್ ಬ್ಯಾನರ್ಜಿ ಕೇವಲ ಆಕ್ಟರ್ ಮಾತ್ರ ಅಲ್ಲ ಖುದ್ದು ಕಾಸ್ಟಿಂಗ್ ಡೈರೆಕ್ಟರ್ ಕೂಡ ಹೌದು. 2006ರಿಂದ ಹತ್ತಾರು 2020ರವರೆಗೆ ಹತ್ತಾರು ಜನರಿಗೆ ಬಾಲಿವುಡ್ನಲ್ಲಿ ಅವಕಾಶವನ್ನು ಕೊಡಿಸಿದವರು ಅಭಿಷೇಕ್ ಬ್ಯಾನರ್ಜಿ.
ಇಂಥಾ ಅಭಿಷೇಕ್ ಬ್ಯಾನರ್ಜಿ ಇದೀಗ ಅವಕಾಶದ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಕೇವಲ ಮಲಯಾಳಂ ಚಿತ್ರರಂಗ ಮಾತ್ರ ಅಲ್ಲ ಹಿಂದಿಯಲ್ಲಿ ಕೂಡ ಪಾತ್ರಕ್ಕೆ ಹಲವರು ಪಲ್ಲಂಗ ಹತ್ತಿ ಇಳಿದಿದ್ದಾರೆ ಎಂದಿದ್ದಾರೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ತೀರಾ ಹಳೆಯ ಸಮಸ್ಯೆ ಇದು, ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ವಿಫಲವಾಗುತ್ತಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.

ಹೌದು, ಫಸ್ಟ್ ಫೋಸ್ಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಭಿಷೇಕ್ ಬ್ಯಾನರ್ಜಿ, ''ನಾನು ಹೇಮಾ ಕಮಿಟಿ ವರದಿಯನ್ನು ಓದಿದ್ದೇನೆ. ಅಲ್ಲಿರುವ ಕತ್ತಲಿನ ವಾತಾವರಣ ಇಲ್ಲಿಯೂ ಇದೆ. ಆದರೆ ಈ ತರಹದ ಸುದ್ದಿಗಳಿಗೆ ನಾವು ನ್ಯಾಯ ಸಲ್ಲಿಸಬೇಕು, ಕ್ರಮ ಕೈಗೊಳ್ಳಬೇಕು ಆದರೆ ಅದರ ಬದಲು ನಾವು ಈ ಪ್ರಕರಣಗಳನ್ನು ಕ್ರೈಂ ಡ್ರಾಮಾ ರೀತಿಯಲ್ಲಿ ವೈಭವಿಕರಣ ಮಾಡಿ ಕೈ ತೊಳೆದುಕೊಳ್ಳುತ್ತಿದ್ದೇವೆ ಅಷ್ಟೇ'' ಎಂದು ಹೇಳಿದ್ದಾರೆ.
ಇನ್ನೂ ಖುದ್ದು ಕಾಸ್ಟಿಂಗ್ ಡೈರೆಕ್ಟರ್ ಆಗಿ ತಮ್ಮ ಅನುಭವ ಹಂಚಿಕೊಂಡಿರುವ ಅಭಿಷೇಕ್ ಬ್ಯಾನರ್ಜಿ ನಿರ್ಮಾಪಕ ಮತ್ತು ನಿರ್ದೇಶಕರನ್ನು ನಟಿಯರು ಕಾಫಿ ಶಾಪ್ನಲ್ಲಿ ಭೇಟಿಯಾಗುವುದನ್ನು ಮೊದಲು ನಿಲ್ಲಿಸಬೇಕು ಎಂದಿದ್ದಾರೆ. ಕೆಲಸಕ್ಕೆ ಸಂಬಂಧಿಸಿದ ವಿಚಾರಗಳನ್ನು ಕೆಲಸದ ವಾತಾವರಣ ಇರುವ ಸ್ಥಳದಲ್ಲಿಯೇ ಚರ್ಚೆ ಮಾತನಾಡಬೇಕು ಎಂದಿರುವ ಅಭಿಷೇಕ್ ಬ್ಯಾನರ್ಜಿ ಅವಕಾಶ ಸಿಗುತ್ತೆ ಎಂದು ರಾಜಿ ಮಾಡಿಕೊಳ್ಳದೇ ನಟಿಯರು ಆರಂಭಿಕ ಹಂತದಲ್ಲಿ ನಿರ್ಮಾಪಕ ಅಥವಾ ನಿರ್ದೇಶಕರ ಕಚೇರಿಯಲ್ಲಿಯೇ ಅವರನ್ನು ಭೇಟಿ ಮಾಡಬೇಕು ಎಂದಿದ್ದಾರೆ. ನಾನು ಕಂಡಂತೆ ಮುಂಬೈನಲ್ಲಿ ಬಹುತೇಕ ಯುವ ನಿರ್ದೇಶಕರು ನಟಿಯರನ್ನು ಕಾಫಿ ಶಾಪ್ಗೆ ಬರುವಂತೆ ಹೇಳುತ್ತಾರೆ ಇದಕ್ಕೆ ಕಡಿವಾಣ ಹಾಕಿದರೆ ಅರ್ಧ ಸಮಸ್ಯೆ ಬಗೆಹರಿದಂತೆ ಎಂದು ಕೂಡ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.


Click it and Unblock the Notifications











