ಇಲ್ಲಿ ಕನ್ನಡ ಚಿತ್ರಗಳಿಗೆ ಜನ ಬರ್ತಿಲ್ಲ, ಅಲ್ಲಿ ಯಾವ ಸ್ಟಾರ್ ಹೀರೋ ಇರದ 'ಮುಂಜ್ಯ'ಗೆ ಟಿಕೆಟ್ ಸಿಕ್ತಿಲ್ಲ..!
ಕನ್ನಡದಲ್ಲಿ ಸ್ಟಾರ್ಗಳ ಸಿನಿಮಾ ತೆರೆಗೆ ಬರುತ್ತಿಲ್ಲ. ಹೊಸಬರ ಚಿತ್ರ ಬಂದು ಹೋಗಿದ್ದು ಗೊತ್ತಾಗುತ್ತಿಲ್ಲ. ಗೊತ್ತಾದರೂ ಕೂಡ ಕೆಲ ನಿರೀಕ್ಷಿತ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ಆದರೆ.. ಅಕ್ಕ-ಪಕ್ಕದ ರಾಜ್ಯದಲ್ಲಿ ಮಾತ್ರ ವಾತಾವರಣ ಭಿನ್ನವಾಗಿದೆ. ಅಲ್ಲಿ ಸ್ಟಾರ್ ಸಿನಿಮಾಗಳು ಬರುತ್ತಿವೆ. ಹೊಸಬರಿಗೆ ಪ್ರೇಕ್ಷಕರ ಪ್ರೀತಿಯೂ ಸಿಕ್ತಿದೆ.ನಿರ್ಮಾಪಕರ ಮೇಲೆ ಹಣದ ಮಳೆಯೂ ಬೀಳುತ್ತಿದೆ. ಉದಾಹರಣೆಗೆ 'ಮುಂಜ್ಯ'.
ಹೌದು, ನಿಮಗೆ ಗೊತ್ತು.. ಸದ್ಯಕ್ಕೆ ಎಲ್ಲೆಡೆ 'ಕಲ್ಕಿ 2898 ಎಡಿ' ಅಬ್ಬರ ಶುರುವಾಗಿದೆ. ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ 'ಕಲ್ಕಿ' ಎಲ್ಲರನ್ನೂ ಚುಂಬಕದಂತೆ ಸೆಳೆಯುತ್ತಿದೆ. ಆದರೆ.. ಈ ಅಲೆಯ ನಡುವೆ ಸಾಧಾರಣ ಬಜೆಟ್ ನಲ್ಲಿ ನಿರ್ಮಾಣವಾದ, ಯಾವ ಸೂಪರ್ ಸ್ಟಾರ್ಗಳಿರದ.. 'ಮುಂಜ್ಯ' ಅಸಾಧಾರಣ ಸಾಧನೆಯನ್ನು ಮಾಡಿದೆ. 100 ಕೋಟಿಯ ಗಡಿಯನ್ನೂ ದಾಟಿದೆ. ಈ ಮೂಲಕ ಹೊಸ ಇತಿಹಾಸವನ್ನೂ ಬರೆದಿದೆ.

ಹಾಗೇ ನೋಡಿದರೆ 'ಮುಂಜ್ಯ' ತೆರೆಗೆ ಬರುವ ಮುನ್ನ ಇಂತಹದ್ದೊಂದು ಪವಾಡ ನಡೆಯುತ್ತೆ ಎನ್ನುನ ನಂಬಿಕೆ ಯಾರಲ್ಲಿಯೂ ಇರಲಿಲ್ಲ. ಯಾಕೆಂದರೆ.. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ಗಳಿಗೆ ಇತ್ತೀಚಿನ ದಿನದಲ್ಲಿ ನೂರು ಕೋಟಿ ಅನ್ನುವುದು ಮರಿಚೀಕೆಯಾಗಿದೆ. ಹೀಗಿರುವಾಗ ಯಾವ ಸ್ಟಾರ್ ಇರದ 'ಮುಂಜ್ಯ' ಗೆಲ್ಲುವುದು ದೂರದ ಮಾತು, ಚಿತ್ರಮಂದಿರದಲ್ಲಿ ಮೂರು ದಿನ ಉಳಿಯುವುದು ಕೂಡ ಕಷ್ಟ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಈ ಎಲ್ಲ ಲೆಕ್ಕಾಚಾರವನ್ನು ಪ್ರೇಕ್ಷಕರು ಬುಡಮೇಲಾಗಿಸಿದ್ದಾರೆ. 'ಮುಂಜ್ಯ' ಕೊರಳಿಗೆ ನೂರು ಕೋಟಿಯ ಹಾರವನ್ನು ಹಾಕಿದ್ದಾರೆ.
ಕಳೆದ ಜೂನ್ 07ರಂದು ತೆರೆಗೆ ಬಂದ 'ಮುಂಜ್ಯ' ಮೊದಲ ದಿನ 4.21 ಕೋಟಿಯನ್ನು ಗಳಿಸಿತ್ತು. ಪ್ರೇಕ್ಷಕರ ಹೃದಯವನ್ನೂ ಗೆದ್ದಿತ್ತು. ಹೀಗಾಗಿಯೇ ಖುದ್ದು ಪ್ರೇಕ್ಷಕರೇ ಈ ಚಿತ್ರದ ಪ್ರಚಾರ ಮಾಡಲು ಶುರು ಮಾಡಿದರು. ಬಾಯ್ತುಂಬ ಚಿತ್ರವನ್ನು ಹೊಗಳಿದರು. ಪರಿಣಾಮ.. ಎರಡನೇ ದಿನದ ಗಳಿಕೆಯಲ್ಲಿ ಏರಿಕೆ ಆಯಿತು. 7.40 ಕೋಟಿ ರೂಪಾಯಿಗಳನ್ನು ಚಿತ್ರ ಗಳಿಸಿತು. ಮೂರನೇ ದಿನ 8.43 ಕೋಟಿ ರೂಪಾಯಿ ಹರಿದುಬಂತು. ಹೀಗೆ ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಏರುತ್ತಲೇ ಹೋಯ್ತು. ಈಗ ಈ ಚಿತ್ರ 25 ದಿನಗಳನ್ನು ಪೂರೈಸಿದೆ. ಚಿತ್ರದ ಗಳಿಕೆ ನೂರು ಕೋಟಿಯ ಗಡಿಯನ್ನೂ ದಾಟಿದೆ.

ಅಂದ್ಹಾಗೇ ಆದಿತ್ಯ ಸರ್ಪೋತದಾರ್ 'ಮುಂಜ್ಯ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಾರ್ವರಿ, ಅಭಯ್ ವರ್ಮಾ ಮತ್ತು ಮೋನಾ ಸಿಂಗ್ ಚಿತ್ರದಲ್ಲಿನ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇನ್ನೂ ಈಗಾಗಲೇ 'ಸ್ತ್ರೀ'.. 'ಸ್ತ್ರೀ 2'.. 'ಬೇಡಿಯಾ'ನಂತಹ ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದು, ಹಾರರ್ ವಿಭಾಗದಲ್ಲಿ ತಮ್ಮದೇ ಯುನಿವರ್ಸ್ನ ಸೃಷ್ಟಿಸುತ್ತಿರುವ ದಿನೇಶ್ ವಿಜ್ಜನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದರೆ 'ಮುಂಜ್ಯ' ಚಿತ್ರದ ಈ ಅಭೂತಪೂರ್ವ ಗೆಲುವಿನ ನಂತರ ದಿನೇಶ್ ವಿಜ್ಜನ್ ಮತ್ತು ನಿರ್ದೇಶಕ ಆದಿತ್ಯ ಸರ್ಪೋತದಾರ್ ಮತ್ತೊಂದು ಚಿತ್ರಕ್ಕೆ ಜೊತೆಯಾಗಿದ್ದಾರೆ. 'ವ್ಯಾಂಪೈರ್ಸ್ ಆಫ್ ವಿಜಯ್ ನಗರ' ಎಂಬ ಈ ಚಿತ್ರದಲ್ಲಿ ಆಯುಷ್ಮಾನ್ ಕುರಾನಾ ಮತ್ತು ರಶ್ಮಿಕಾ ಮಂದಣ್ಣ ನಾಯಕ-ನಾಯಕಿ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
ಒಟ್ನಲ್ಲಿ 'ಮುಂಜ್ಯ' ಸದ್ಯಕ್ಕೆ ಬಾಲಿವುಡ್ನಲ್ಲಿ ಹೊಸ ದಾಖಲೆ ಬರೆದಿದೆ. ಕಲ್ಕಿ ಚಿತ್ರದ ಅಬ್ಬರದ ನಡುವೆ 'ಮುಂಜ್ಯ' ಮೋಡಿ ನಿಧಾನಕ್ಕೆ ಕಡಿಮೆಯಾಗುತ್ತಿದೆ. 120 ಕೋಟಿಯವರೆಗೆ ಈ ಚಿತ್ರ ಗಳಿಸಬಹುದು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.


Click it and Unblock the Notifications










