ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಹಿಂದಿ ಹೇರಿಕೆ ಸರಿಯಲ್ಲ: ಕಿಚ್ಚನಿಗೆ ಸಾಥ್ ನೀಡಿದ ಸೋನು ನಿಗಮ್
ಹಿಂದಿ ರಾಷ್ಟ್ರ ಭಾಷೆ ವಿಚಾರವಾಗಿ ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ನಡುವೆ ಭಾಷಾ ಸಮರವೇ ನಡೆದು ಹೋಗಿತ್ತು. ಇತ್ತೀಚಿಗಷ್ಟೇ ಕರುನಾಡ ಚಕ್ರವರ್ತಿ ಸುದೀಪ್ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದ ಮೇಲೆ ನಿಮ್ಮ ಸಿನಿಮಾಗಳನ್ನು ಹಿಂದಿಗೆ ಏಕೆ ಡಬ್ ಮಾಡುತ್ತಿರಾ ಎಂದು ಪ್ರಶ್ನೆ ಮಾಡಿ ಕ್ಯಾತೆ ತೆಗೆದಿದ್ದರು. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿ ಅನೇಕ ರಾಜಕೀಯ ಗಣ್ಯರು ಹಾಗೂ ಸಿನಿ ಕಲಾವಿದರು ಪರ ವಿರೋಧದ ಚರ್ಚೆ ಕೂಡ ನಡೆದು ಹೋಗಿತ್ತು. ಕೊನೆಗೆ ನಟ ಅಜಯ್ ದೇವಗನ್ ತಾನು ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ ಸರಿಪಡಿಸಿದ್ದಕ್ಕಾಗಿ ಧನ್ಯವಾದ ಅಂತ ಸುದೀಪ್ ಟ್ವೀಟ್ ಗೆ ಮರು ಟ್ವೀಟ್ ಮಾಡಿ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದರು. ಆದರೆ, ಈ ವಿಚಾರ ಆಗಲೇ ಎಲ್ಲೆಡೆ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು.
ಸದ್ಯ ಈಗ ಇದೇ ವಿಚಾರವಾಗಿ ಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ಮಾತನಾಡಿದ್ದಾರೆ. "ನಟ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. ಸಂವಿಧಾನದಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ಉಲ್ಲೇಖಿಸಿಲ್ಲ. ದೇಶದಲ್ಲಿ ಹಿಂದಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಆದರೆ, ಇದರಿಂದ ಹಿಂದಿ ಮಾತನಾಡದೇ ಇರುವವರ ಮೇಲೆ ಹಿಂದಿಯೇ ರಾಷ್ಟ್ರ ಭಾಷೆ ಎಂದು ಹೇರಿಕೆ ಮಾಡಲು ಸಾಧ್ಯವಿಲ್ಲ. ನನ್ನ ತಿಳುವಳಿಕೆಯ ಪ್ರಕಾರ, ಹಿಂದಿ ರಾಷ್ಟ್ರ ಭಾಷೆಯಲ್ಲ, ನಾನು ಈ ಬಗ್ಗೆ ತಜ್ಞರನ್ನು ಸಂಪರ್ಕಿಸಿದ್ದೇನೆ. ಹಿಂದಿಯನ್ನು ದೇಶದಲ್ಲಿ ಹೆಚ್ಚು ಜನ ಮಾತನಾಡುತ್ತಾರೆ. ಅದು ನನಗೆ ತಿಳಿದಿದೆ. ನನಗೆ ತಮಿಳು ಕೂಡ ಬರುತ್ತದೆ. ಜಗತ್ತಿನ ಅತ್ಯಂತ ಪುರಾತನ ಭಾಷೆಯೇ? ಸಂಸ್ಕೃತ ಮತ್ತು ತಮಿಳು ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ಇಡೀ ಪ್ರಪಂಚದಲ್ಲಿ ತಮಿಳು ಅತ್ಯಂತ ಹಳೆಯ ಭಾಷೆ ಎಂದು ಜನರು ಹೇಳುತ್ತಾರೆ." ಎಂದು ಸೋನು ನಿಗಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದೇಶವು ಹಲವು ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ನಡುವೆಯೇ ಈ ವಿವಾದವು ಅನಗತ್ಯ ಉದ್ವಿಗ್ನತೆಯನ್ನು ಉಂಟು ಮಾಡುತ್ತಿದೆ. ಹೀಗಾಗಿ ನೀವು ತಮಿಳಿಗರು, ನೀವು ಹಿಂದಿಯಲ್ಲಿ ಮಾತನಾಡಬೇಕು ಎಂದು ಇತರರ ಮೇಲೆ ಭಾಷೆಯನ್ನು ಹೇರುವ ಮೂಲಕ ನಾವು ದೇಶದಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದೇವೆ. ಪ್ರತಿಯೊಬ್ಬರಿಗೂ ಅವರ ಮಾತೃ ಭಾಷೆಯಲ್ಲೇ ಮಾತನಾಡುವ ಹಕ್ಕು ಇರಬೇಕು ಎಂದು ಬೀಸ್ಟ್ ಸ್ಟುಡಿಯೋ ಸ್ಥಾಪಕ ಮತ್ತು ಸಿಇಒ ಸುಶಾಂತ್ ಮೆಹ್ತಾ ಅವರ ಜೊತೆ ನಡೆದ ಸಂವಾದದಲ್ಲಿ ಸೋನು ನಿಗಮ್ ಹೇಳಿಕೊಂಡಿದ್ದಾರೆ.

"ಇದನ್ನೆಲ್ಲಾ ಬಿಡಿ. ಈ ವಿವಾದ ತಣ್ಣಗಾಗಲಿ. ಪಂಜಾಬಿಗಳು ಪಂಜಾಬಿ ಮಾತನಾಡಲಿ. ತಮಿಳರು ತಮಿಳಿನಲ್ಲಿ ಮಾತನಾಡಲಿ. ಇಂಗ್ಲಿಷ್ನಲ್ಲಿ ಮಾತನಾಡ ಬಯಸುವವರು ಅವರ ಇಚ್ಚೆಗೆ ತಕ್ಕಂತೆ ಮಾತನಾಡಲಿ. ಪ್ರತಿಯೊಬ್ಬರಿಗೂ ಅವರದೇ ಭಾಷಾ ಹಕ್ಕು ಇರುತ್ತದೆ. ಪ್ರತ್ಯೇಕವಾಗಿ ಈ ಭಾಷೆಯನ್ನೇ ಮಾತನಾಡಬೇಕು ಎಂಬ ನೀತಿ ಇಲ್ಲ," ಎಂದು ಸೋನು ನಿಗಮ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಕಳೆದ ವಾರ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ನಡುವೆ ಭಾಷಾ ವಿಚಾರವಾಗಿ ಟ್ವೀಟ್ ವಾರ್ ನಡೆದಿತ್ತು. ಹಿಂದಿ ರಾಷ್ಟ್ರೀಯ ಭಾಷೆ ಎಂದಿದ್ದ ಅಜಯ್ ದೇವಗನ್ಗೆ ಹಲವು ಮಂದಿ ಮಾತಿನಲ್ಲಿ ಬಿಸಿ ಮುಟ್ಟಿಸಿದ್ದರು. ಸ್ಯಾಂಡಲ್ವುಡ್ ನಟ ನಟಿಯರು ಮಾತ್ರವಲ್ಲದೆ ಕಾಲಿವುಡ್, ಟಾಲಿವುಡ್ಗಳಲ್ಲೂ ಈ ವಿವಾದ ಭಾರೀ ಸದ್ದು ಮಾಡಿತ್ತು. ಅಜಯ್ ದೇವಗನ್ ಹೇಳಿಕೆ ವಿರುದ್ಧ ವ್ಯಾಪಕ ಟೀಕೆಗಳು ಕೂಡ ವ್ಯಕ್ತವಾಗಿತ್ತು.
ಈ ಭಾಷಾ ವಿವಾದ ಈಗಿನಿಂದಲ್ಲಾ ಮೊದಲಿನಿಂದಲೂ ಇದೆ. ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ವಿವಾದಕ್ಕೆ ಈಗ ಕಿಡಿ ಹೊತ್ತಿದ್ದು, ಎಲ್ಲೆಡೆ ಧಗಧಗಿಸುತ್ತಿದೆ. ಈ ವಿವಾದ ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಹಿಂದೆ ಅಮಿತ್ ಶಾ ಕೂಡ ಹಿಂದಿ ರಾಷ್ಟ್ರ ಭಾಷೆ ಎಲ್ಲರೂ ಹಿಂದಿ ಕಲಿಯಿರಿ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ದಕ್ಷಿಣ ಭಾರತದ ನಾಯಕರು ಕೇಂದ್ರ ಸಚಿವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದರು. ಅಲ್ಲದೆ 'ವಿವಿಧತೆಯಲ್ಲಿ ಏಕತೆ' ಇದು ಭಾರತದ ಶಕ್ತಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತೆಲಂಗಾಣದ ಸಚಿವ ಕೆ.ಟಿ ರಾಮರಾವ್ ಒತ್ತಿ ಹೇಳಿದ್ದರು. ಆದರೂ, ಸಹ ಹಿಂದಿ ರಾಷ್ಟ್ರ ಭಾಷೆ ಅಂತ ಉತ್ತರ ಭಾರತದ ನಾಯಕರು ಹೇಳಿಕೊಂಡೆ ಬರುತ್ತಿದ್ದರು.
ಸದ್ಯ ಇದೇ ವಿವಾದ ಈಗ ಚಿತ್ರರಂಗದಲ್ಲೂ ಜನ್ಮ ತಾಳಿದ್ದು, ಎಲ್ಲಾ ಭಾರತೀಯ ಸಿನಿಮಾಗಳು ಭಾರತದ್ದೇ. ಎಲ್ಲಾ ಭಾಷೆಯೂ ಕೂಡ ಭಾರತೀಯ ಭಾಷೆಗಳೇ. ಹಿಂದಿ ಒಂದೇ ರಾಷ್ಟ್ರೀಯ ಭಾಷೆಯಲ್ಲ ಅಂತ ದಕ್ಷಿಣ ಭಾರತದ ನಟ ನಟಿಯರು, ರಾಜಕಾರಣಿಗಳು ಒತ್ತಿ ಹೇಳುತ್ತಿದ್ದಾರೆ. ಸದ್ಯ ಭಾಷಾ ಸಮರಕ್ಕೆ ಯಾವಾಗ ಅಂತ್ಯ ಬರುತ್ತೋ ಕಾದು ನೋಡಬೇಕಿದೆ.


Click it and Unblock the Notifications











