ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ, ನೇಣಿಗೇರಿಸಿ: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಗುಡುಗು
ಹೈದರಾಬಾದ್ ಮೂಲದ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಇಡೀ ದೇಶವನ್ನೇ ಅಕ್ಷರಶಃ ಬೆಚ್ಚಿಬೀಳಿಸಿದೆ. ಸ್ವಾತಂತ್ರ್ಯ ಸಿಕ್ಕಿ ದಶಕಗಳೇ ಉರುಳಿದರೂ, ಹೆಣ್ಣು ಮಕ್ಕಳಿಗೆ ಭಾರತ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ.!
ಅತ್ಯಾಚಾರಿಗಳನ್ನು ಗಲ್ಲಿಗೇರಿಸುವವರೆಗೂ ಇಂತಹ ಘಟನೆಗಳಿಗೆ ಪೂರ್ಣ ವಿರಾಮ ಬೀಳಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇತ್ತ ಸಿನಿಮಾ ನಟ-ನಟಿಯರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಕೂಡ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಒತ್ತಾಯ ಮಾಡುತ್ತಿದ್ದಾರೆ.
ಈ ನಡುವೆ ಇದೇ ಪ್ರಕರಣ ಇಂದು ರಾಜ್ಯಸಭೆಯಲ್ಲೂ ಸದ್ದು ಮಾಡಿತು. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ವಿಚಾರದ ಬಗ್ಗೆ ರಾಜ್ಯಸಭೆಯಲ್ಲಿ ಇವತ್ತು ಚರ್ಚೆ ನಡೆಯುತ್ತಿತ್ತು. ಆಗ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಮಾತನಾಡಿದ ಜಯಾ ಬಚ್ಚನ್ ತಮ್ಮ ಬೇಸರವನ್ನ ಹೊರಹಾಕಿದರು. ಮುಂದೆ ಓದಿರಿ...

ನೇಣಿಗೇರಿಸಿ ಎಂದು ಗುಡುಗಿದ ಜಯಾ ಬಚ್ಚನ್
ಹೈದರಾಬಾದ್ ಮೂಲದ ಯುವತಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಪ್ರಕರಣವನ್ನು ಪ್ರಸ್ತಾಪಿಸಿ, ''ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ, ನೇಣಿಗೇರಿಸಬೇಕು'' ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಇವತ್ತು ರಾಜ್ಯಸಭೆಯಲ್ಲಿ ಗುಡುಗಿದರು.

ಆಕ್ರೋಶಗೊಂಡ ಜಯಾ ಬಚ್ಚನ್
''ಇದೇ ಸರಿಯಾದ ಸಮಯ. ಸರ್ಕಾರದಿಂದ ಸರಿಯಾದ ಕ್ರಮಕ್ಕೆ ಜನ ಎದುರು ನೋಡುತ್ತಿದ್ದಾರೆ. ನಿರ್ಭಯ ಪ್ರಕರಣವಾಗಲಿ, ಕಟುವಾ ಕೇಸ್ ಆಗಲಿ ಅಥವಾ ಈಗಿನ ಹೈದರಾಬಾದ್ ಪ್ರಕರಣ ಆಗಿರಲಿ.. ಇಂತಹ ಹೇಯ ಕೃತ್ಯಗಳು ನಡೆದ ಬಳಿಕ ನಾನು ದನಿ ಎತ್ತಿದ್ದೇನೆ. ಆದರೆ ಸರ್ಕಾರ ಏನು ಮಾಡಿದೆ.? ಈ ಪ್ರಕರಣಗಳನ್ನು ಹೇಗೆ ನಿಭಾಯಿಸಿದೆ.? ಸಂತ್ರಸ್ತರಿಗೆ ನ್ಯಾಯ ಸಿಕ್ಕಿದ್ಯಾ.?'' ಎಂದು ಜಯಾ ಬಚ್ಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಸರಿಸಿ, ಅವಮಾನ ಪಡಿಸಿ..
ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಇಂತಹ ನೀಚ ಕೃತ್ಯಗಳಿಂದ ಪಾರು ಮಾಡದವರನ್ನು ಹೆಸರಿಸಿ ಮತ್ತು ಅವಮಾನ ಪಡಿಸಬೇಕೆಂದು ಜಯಾ ಬಚ್ಚನ್ ಆಗ್ರಹಿಸಿದ್ದಾರೆ.

ಪಶು ವೈದ್ಯೆ ಪ್ರಕರಣದ ಕುರಿತು..
ವೃತ್ತಿಯಲ್ಲಿ ಪಶು ವೈದ್ಯೆ ಆಗಿರುವ 26 ವರ್ಷದ ಹೈದರಾಬಾದ್ ಮೂಲದ ಯುವತಿ ಕಳೆದ ಬುಧವಾರ ರಾತ್ರಿ ನಾಪತ್ತೆಯಾದವರು, ಗುರುವಾರ ಬೆಳಗ್ಗೆ ಹೆಣವಾಗಿ ಪತ್ತೆಯಾದರು. ಆಕೆ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಬಳಿಕ ಗುರುತು ಸಿಗಬಾರದೆಂದು ಸುಟ್ಟು ಹಾಕಿದ್ದರು. ಪ್ರಕರಣವನ್ನು ಭೇದಿಸಿರುವ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.


Click it and Unblock the Notifications











