ಮೌನ ತಾಳಿದ ಚಿನ್ನದ ಕಂಠ ; ಹಿನ್ನೆಲೆ ಗಾಯನಕ್ಕೆ ವಿದಾಯ, ದಣಿದಿದ್ದೇನೆ ಎಂದ ಅರಿಜಿತ್ ಸಿಂಗ್-ಅಭಿಮಾನಿಗಳಿಗೆ ಆಘಾತ
ಒಮ್ಮೊಮ್ಮೆ ಯಶಸ್ಸು ಹೇಗೆ ಸ್ವೀಕರಿಸಬೇಕೆನ್ನುವುದೇ ಗೊತ್ತಾಗುವುದಿಲ್ಲ. ಜಾತಕದಲ್ಲಿ ರಾಜಯೋಗ ಇದ್ದರೂ ಕೂಡ ಇಂತಹದ್ದೊಂದು ಕರ್ಮಕ್ಕಾಗಿ ರಾಜಯೋಗ ಬರಬೇಕಿತ್ತಾ ಎಂದು ನಮಗೆ ಅನಿಸುವ ರೀತಿಯಲ್ಲಿ ಯಶಸ್ಸು ದಾರುಣತೆಗಳನ್ನು ನಿರ್ಮಾಣ ಮಾಡಿರುತ್ತೆ. ಬದುಕಿನ ಪ್ರಯಾಣದಲ್ಲಿ ಸಿಕ್ಕ ಗೆಲುವು ಬಂಗಾರದ ಪಂಜರದಂತೆ ಭಾಸವಾಗುತ್ತೆ. ಒತ್ತಡ ಮತ್ತು ಬೇಡಿಕೆ ಕಂಗಾಲಾಗಿಸುತ್ತೆ. ಇದಕ್ಕೆ ಅರಿಜಿತ್ ಸಿಂಗ್ ಬದುಕು ಸದ್ಯದ ಉದಾಹರಣೆ.
ಹೌದು. ಅರಿಜಿತ್ ಸಿಂಗ್.. ನೊಂದ ಹೃದಯಕ್ಕೆ ಸಾಂತ್ವಾನದಂತೆ ಇದ್ದ ಚಿನ್ನದ ಕಂಠ. ''ಆಶಿಕಿ 2'' ಚಿತ್ರದ ''ತುಮ್ ಹೀ ಹೋ''.. ''ಏ ದಿಲ್ ಹೈ ಮುಷ್ಕೀಲ್'' ಚಿತ್ರದ ''ಚನ್ನಾ ಮೇರೆಯಾ''.. ''ತಮಾಷಾ'' ಚಿತ್ರದ ''ಅಗರ್ ತುಮ್ ಸಾಥ್ ಹೋ''.. ''ಬ್ರಹ್ಮಾಸ್ತ್ರ'' ಚಿತ್ರದ ''ಕೇಸರಿಯಾ''.. ''ಅನಿಮಲ್'' ಚಿತ್ರದ ''ಸತರಂಗಾ''.. ''ಬರ್ಫಿ'' ಚಿತ್ರದ ''ಫಿರ್ ಲೇ ಆಯಾ ದಿಲ್''.. ''ಗೋಲಿಯೋ ಕೀ ರಾಸ್ಲೀಲಾ ರಾಮ್ಲೀಲಾ'' ಚಿತ್ರದ ''ಲಾಲ್ ಇಷ್ಕ್''.. ''ಡುಂಕಿ'' ಚಿತ್ರದ ''ಓ ಮಾಹಿ''.. ''ರಹೀಸ್'' ಚಿತ್ರದ ''ಜಾಲೀಮಾ''.. ಮೊನ್ನೆ ಮೊನ್ನೆ ಬಿಡುಗಡೆಯಾದ ''ಬಾರ್ಡರ್ 2'' ಚಿತ್ರದ ''ಘರ್ ಕಬ್ ಆವೋಗೇ''.. ''ಬ್ಯಾಟಲ್ ಆಫ್ ಗಲ್ವಾನ್'' ಚಿತ್ರದ ''ಮಾತೃಭೂಮಿ''..

ಹೀಗೆ ಒಂದಾ ಎರಡಾ.. 825ಕ್ಕೂ ಅಧಿಕ ಹಾಡನ್ನು ಹಾಡಿರುವ ಅರಿಜಿತ್ ಸಿಂಗ್ ಅವರನ್ನು ಕೆಲವರು ಮೆಲೋಡಿ ಕಿಂಗ್ ಅಂದರೆ ಇನ್ನೂ ಕೆಲವರು ವಿರಹ ಗೀತೆಗಳ ಸರದಾರ ಎಂದೇ ಕರೆಯುತ್ತಾರೆ. ಇನ್ನು ಹನ್ನೊಂದು ವರ್ಷಗಳ ಹಿಂದೆ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ''ನಿನ್ನಿಂದಲೇ'' ಚಿತ್ರ ಬಂದಿತ್ತು. ಈ ಚಿತ್ರದ ಎಲ್ಲ ಹಾಡುಗಳು ಇವತ್ತು ಕೂಡ ಜನಪ್ರಿಯ. ಆ ಪೈಕಿ ''ಮೌನ ತಾಳಿತೇ'' ಹಾಡು ಕೂಡ ಒಂದು. ಜಯಂತ್ ಕಾಯ್ಕಿಣಿ ಅವರು ಬರೆದಿದ್ದ ಈ ಹಾಡನ್ನು ಹಾಡಿದ್ದು ಕೂಡ ಇದೇ ಅರಿಜಿತ್ ಸಿಂಗ್. ಅರಿಜಿತ್ ಸಿಂಗ್ ಹಾಡಿದ ಮೊದಲ ಮತ್ತು ಕೊನೆಯ ಕನ್ನಡದ ಹಾಡು ಇದು.
ಇಂಥಾ ಅರಿಜಿತ್ ಸಿಂಗ್ ಸದ್ಯ ದಣಿದಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಇನ್ಮುಂದೆ ನಾನು ಹಾಡಲಾರೆ ಎಂದು ಹೇಳಿದ್ದಾರೆ. ತಮ್ಮ ಅಸಂಖ್ಯಾತ.. ಅಗಣಿತ ಅಭಿಮಾನಿಗಳಿಗೆ ಈ ಮೂಲಕ ಆಘಾತವನ್ನುಂಟು ಮಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅರಿಜಿತ್ ಸಿಂಗ್ ಇಷ್ಟು ವರ್ಷಗಳ ಕಾಲ ನನಗೆ ಪ್ರೀತಿ ನೀಡಿದ ನಿಮ್ಮೆಲ್ಲರಿಗೆ ಧನ್ಯವಾದ ಎಂದು ಹೇಳಿದ್ದಾರೆ. ಇನ್ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿರುವ ಅರಿಜಿತ್ ಸಿಂಗ್ ಇಲ್ಲಿಗೆ ಗಾಯಕನಾಗಿ ನನ್ನ ವೃತ್ತಿ ಜೀವನ ಅಂತ್ಯಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದೊಂದು ಅದ್ಭುತ ಪ್ರಯಾಣವಾಗಿತ್ತು ಅಂದಿದ್ದಾರೆ.
ಮುಂದುವರೆದು ನನ್ನ ವಿಚಾರದಲ್ಲಿ ದೇವರು ತುಂಬಾನೇ ಕರುಣಾಮಯನಾಗಿದ್ದ ಎಂದು ಹೇಳಿರುವ ಅರಿಜಿತ್ ಸಿಂಗ್, ನಾನು ಒಬ್ಬ ಸಂಗೀತದ ಅಭಿಮಾನಿ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಕಲಿಯುವ ಆಸೆ ಇದೆ ಎಂದಿದ್ದಾರೆ. ಹಾಡಷ್ಟೇ ನಿಲ್ಲಿಸಿದ್ದೇನೆ ಸಂಗೀತದ ಕೆಲಸವನ್ನು ನಾನು ನಿಲ್ಲಿಸಿಲ್ಲ ಎಂದು ಕೂಡ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಒಪ್ಪಿಕೊಂಡ ಕೆಲಸ ಮುಗಿಸಬೇಕಿದೆ ಎಂದು ಹೇಳಿರುವ ಅರಿಜಿತ್ ಸಿಂಗ್ ಕೆಲ ಹಾಡುಗಳು ಇನ್ನೂ ಬಿಡುಗಡೆಯಾಗಬೇಕಿವೆ ಎಂದಿದ್ದಾರೆ.
ಒಟ್ನಲ್ಲಿ ಇನ್ಮುಂದೆ ರೆಕಾರ್ಡಿಂಗ್ ಸ್ಟುಡಿಯೋದ ಮೈಕ್ ಮುಂದೆ ಅರಿಜಿತ್ ಕಾಣಿಸುವುದಿಲ್ಲ. ವೇದಿಕೆಗಳಲ್ಲಿ ತಮ್ಮ ಚಿನ್ನದ ಕಂಠವನ್ನು ಕುಣಿಸುವುದಿಲ್ಲ. ಸ್ಟುಡಿಯೋದ ದೀಪಗಳು ಆರಿವೆ. ಅರಿಜಿತ್ ಸಿಂಗ್ ಸ್ಟುಡಿಯೋದಿಂದ ಹೊರಬಂದು ಮುಕ್ತವಾದ ಸೂರ್ಯನ ಬೆಳಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಮತ್ತೊಬ್ಬ ಅರಿಜಿತ್ ಸಿಂಗ್ ಬರಲಾರ. ಬಂದರೂ ಅದಕ್ಕೆ ಇನ್ನೂ ದಶಕಗಳು ಬೇಕಾಗಬಹುದು. ಹಾಡುಗಳ ಮೂಲಕ ಪ್ರೀತಿಸುವುದು ಹೇಗೆ ಮತ್ತು ನೋವನ್ನು ಮರೆಯುವುದು ಹೇಗೆ ಎಂದು ಕಲಿಸಿದ ಅರಿಜಿತ್ ಸಿಂಗ್ ಖ್ಯಾತಿಯ ತುತ್ತ ತುದಿಯಲ್ಲಿದ್ದಾಗಲೇ ವಿದಾಯ ಹೇಳಿದ್ದು ಹಲವರ ಪಾಲಿಗೆ ಅಚ್ಚರಿ ಮತ್ತೂ ಕೆಲವರ ಪಾಲಿಗೆ ಆಘಾತ.


Click it and Unblock the Notifications











