ಅಗ್ನಿಪರೀಕ್ಷೆ ನೀಡಲು ನಾನು ಸೀತೆಯಲ್ಲ; ಧರ್ಮದ ಹಾದಿಗೆ ಗುಡ್ ಬೈ-ಮಾಡೆಲಿಂಗ್ ಲೋಕಕ್ಕೆ ಮರಳಿದ ಮಹಾಕುಂಭದ ವೈರಲ್ ಸಾಧ್ವಿ
ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು ಎಳೆಯಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಉದಾಹರಣೆಗೆ ಹರ್ಷ ರಿಚಾರಿಯಾ.
ಹೌದು, ಹರ್ಷ ರಿಚಾರಿಯಾ, ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್. ಕೇವಲ 30ರ ಹರೆಯದ ಈ ಚೆಲುವೆ ಯಾವ ಬಾಲಿವುಡ್ ನಾಯಕಿಗಿಂತ ಕಡಿಮೆ ಇಲ್ಲ. ಸೌಂದರ್ಯದ ಗಣಿಯಂತೆ ಇರುವ ಹರ್ಷ ನಿರೂಪಕಿ ಕೂಡ ಹೌದು.

ಇಂಥಾ ಹರ್ಷಾ ರಿಚಾರಿಯಾ ಕಳೆದ ವರ್ಷ ಇದೇ ಸಮಯದಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಕಣ್ಣು ಕುಕ್ಕಿದ್ದರು. ಭಾರತದೆಲ್ಲೆಡೆ ಚರ್ಚೆಗೀಡಾಗಿದ್ದರು. ಅತ್ಯಂತ ಸುಂದರ ಸಾಧ್ವಿಯೆಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದರು.
ಆದರೆ ಈಗ ಹರ್ಷ ಮೊಗದಲ್ಲಿ ಕಳೆದ ವರ್ಷ ಕಾಣಿಸಿದ್ದ ಹರ್ಷ ಕಾಣಿಸುತ್ತಿಲ್ಲ. ನೆಮ್ಮದಿಗೆ ಸಂಪೂರ್ಣ ಕೊಳ್ಳಿ ಬಿದ್ದಿದೆ. ಇದಕ್ಕೆ ಕೈಗನ್ನಡಿಯೇ ಹರ್ಷ ತೆಗೆದುಕೊಂಡ ನಿರ್ಧಾರ ಮತ್ತು ಮಾತುಗಳು.
ಹೌದು,ಮಹಾಕುಂಭ ಮೇಳ ನಡೆದು ಹೆಚ್ಚು ಕಡಿಮೆ ಒಂದು ವರ್ಷದ ನಂತರ ಹರ್ಷ ರಿಚಾರಿಯಾ ತಮ್ಮ ಮನದ ನೋವು ಹೊರ ಹಾಕಿದ್ದಾರೆ. ತಮ್ಮ ಮೇಲೆ ನಡೆಯುತ್ತಿರುವ ಸೈಬರ್ ದಾಳಿಯಿಂದ ಹೈರಾಣಾಗಿ ಕಣ್ಣೀರಾಗಿದ್ದಾರೆ. ನಿಮ್ಮ ಧರ್ಮವನ್ನ ನಿಮ್ಮ ಬಳಿಯೇ ಇಟ್ಕೊಳ್ಳಿ ಎಂದು ಹೇಳಿ ಧರ್ಮದ ಹಾದಿಗೆ ಗುಡ್ ಬೈ ಹೇಳಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಹರ್ಷ ರಿಚಾರಿಯಾ ಮಹಾಕುಂಭ ಮೇಳ 2025ರಿಂದ ಶುರುವಾದ ಕಥೆಯೊಂದು ಈಗ ಅಂತ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಈ ಒಂದು ವರ್ಷದಲ್ಲಿ ನನಗೆ ಸಿಕ್ಕಿದ್ದು ಕೇವಲ ವಿರೋಧ ಮಾತ್ರ ಎಂದು ಹೇಳಿರುವ ಹರ್ಷ ರಿಚಾರಿಯಾ ನಾನು ತಪ್ಪು ಮಾಡದಿದ್ದರೂ, ಧರ್ಮದ ಹಾದಿಯಲ್ಲಿ ಮುನ್ನಡೆಯುವ ಪ್ರಯತ್ನವನ್ನು ಮಾಡಿದರು ಕೂಡ ನನ್ನನ್ನು ತಡೆಯಲಾಯ್ತು ಎಂದು ಹೇಳಿದ್ದಾರೆ.

ನಾನು ನನ್ನ ಧರ್ಮ ಆಯ್ಕೆ ಮಾಡಿಕೊಳ್ಳುವ ಮುನ್ನ ಆಂಕರಿಂಗ್ ಮಾಡುತ್ತಿದ್ದೆ,ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದೆ, ಆಗ ನನಗೆ ಕೈತುಂಭಾ ಹಣ ಸಿಗುತ್ತಿತ್ತು ಎಂದು ಹೇಳಿರುವ ಹರ್ಷ ರಿಚಾರಿಯಾ ಧರ್ಮದ ಮಾರ್ಗವನ್ನು ನಾನು ಆಯ್ಕೆ ಮಾಡಿಕೊಂಡ ನಂತರ ನನ್ನ ಕೈ ಬರಿದಾಯ್ತು ಎಂದು ಹೇಳಿದ್ದಾರೆ. ಸಾಲ ಹೆಚ್ಚಾಯ್ತು ಅದನ್ನು ಹೊರತು ಪಡಿಸಿದರೆ ಬೇರೆ ಏನೂ ಪ್ರಯೋಜನವಾಗಲಿಲ್ಲ ಎಂದಿದ್ದಾರೆ.
ಮುಂದುವರೆದು ಓರ್ವ ಮಹಿಳೆ ಕುಗ್ಗದೇ ಇದ್ದಾಗ, ಬಗ್ಗದೇ ಇದ್ದಾಗ, ಆ ಮಹಿಳೆಯ ಚಾರಿತ್ರ್ಯದ ಮೇಲೆ ನಮ್ಮ ಸಮಾಜ ಬೆರಳೆತ್ತುತ್ತೆ ಎಂದು ಹೇಳಿರುವ ಹರ್ಷ ರಿಚಾರಿಯಾ ನಿಮ್ಮ ಧರ್ಮ ನಿಮ್ಮಲ್ಲೇ ಇರಲಿ ಎಂದು ಹೇಳಿದ್ದಾರೆ. ಪದೇ ಪದೇ ಅಗ್ನಿಪರೀಕ್ಷೆ ನೀಡಲು ನಾನು ಸೀತಾಮಾತೆ ಅಲ್ಲ ಕೊಡಬೇಕಾದ ಎಲ್ಲ ಅಗ್ನಿ ಪರೀಕ್ಷೆಗಳನ್ನು ಕೂಡ ನಾನು ನೀಡಿದ್ದೇನೆ ಎಂದು ಕೂಡ ಹೇಳಿದ್ದಾರೆ.
ಇಷ್ಟೇ ಅಲ್ಲದೇ ಉತ್ತರ ಪ್ರದೇಶದ ಪ್ರಯಾಗರಾಜ್ದ ತ್ರಿವೇಣಿ ಸಂಗಮದಲ್ಲಿ ಮಾಘ ಮೇಳ ನಡೆಯುವ ಸಮಯದಲ್ಲಿ ನಾನು ಅಲ್ಲಿ ಸ್ನಾನ ಮಾಡಿ ಆ ನಂತರ ನನ್ನ ಧರ್ಮದ ಪಥವನ್ನು ಬದಲಿಸುತ್ತೇನೆ, ನನ್ನ ಸಂಕಲ್ಪ ತ್ಯಜಿಸಿ ನಾನು ನನ್ನ ಹಳೆಯ ಕೆಲಸಕ್ಕೆ ಮರಳುತ್ತೇನೆ ಎಂದು ಹೇಳಿರುವ ಹರ್ಷ ರಿಚಾರಿಯಾ ಮನೆಯಲ್ಲಿದ್ದು ನನ್ನ ತಂದೆ ತಾಯಿಯ ಸೇವೆ ಮಾಡುವುದೇ ನನ್ನ ಪಾಲಿಗೆ ಈಗ ನಿಜವಾದ ಧರ್ಮ ಎಂದು ಹೇಳಿದ್ದಾರೆ. ಧರ್ಮದಿಂದ ನನ್ನ ಈ ನಿರ್ಗಮನ ಬಂಡಾಯ ಮನೋಭಾವದ ಪ್ರತೀಕ ಎಂದು ಕೂಡ ಹೇಳಿದ್ದಾರೆ.
ಸದ್ಯ ಹರ್ಷ ರಿಚಾರಿಯಾ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಹಲವರ ಕೆಂಗಣ್ಣಿಗೆ ಕೂಡ ಈ ವಿಡಿಯೋ ಗುರಿಯಾಗಿದೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











