ಕೆಜಿಎಫ್ ಗಾಯಕಿ ಬದುಕಲ್ಲಿ ಬಿರುಗಾಳಿ ? ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ ಎಂದ ನೇಹಾ ಕಕ್ಕರ್
ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ. ಇದೆಲ್ಲದರ ಪರಿಣಾಮ ಎಂಬಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ''ಮಾನಸಿಕ ಖಿನ್ನತೆ''ಗೆ ಮೊದಲ ಸ್ಥಾನ ಇದೆ.
ಇನ್ನು ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ. ಹೀಗೆ ಖಿನ್ನತೆಗೊಳಗಾದವರು ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನು ಕೂಡ ಮಾಡುತ್ತಾರೆ. ಇಂತಹ ಮಾನಸಿಕ ಖಿನ್ನತೆಯಿಂದ ನೇಕಾ ಕಕ್ಕರ್ ಕೂಡ ಒದ್ದಾಡುತ್ತಿದ್ದಾರಾ..? ಗೊತ್ತಿಲ್ಲ. ಆದರೆ ನೇಹಾ ಕಕ್ಕರ್ ಅವರ ನಡೆ ಇಂತಹದ್ದೊಂದು ಅನುಮಾನದ ಬೀಜವನ್ನು ಎಲ್ಲರಲ್ಲಿಯೂ ಬಿತ್ತಿದೆ.

ಹೌದು, ನೇಹಾ ಕಕ್ಕರ್ ಜನಪ್ರಿಯ ಗಾಯಕಿ. ಹೊಟ್ಟೆ ಪಾಡಿಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಭಜನೆಗಳನ್ನು ಹಾಡುತ್ತಿದ್ದ ನೇಹಾ ಆ ನಂತರ ''ಇಂಡಿಯನ್ ಐಡಲ್''ಗೆ ಬಂದರು. ಜನ ಮನ ಗೆದ್ದರು. ಹತ್ತನೇ ಸ್ಥಾನ ಪಡೆದರೂ ಕೂಡ ಚಿತ್ರರಂಗದ ಗಮನ ಸೆಳೆದರು.
''ಮೀರಾಬಾಯಿ ನಾಟ್ ಔಟ್'' ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಬಂದ ನೇಹಾ 2010ರಲ್ಲಿ ಬಿಡುಗಡೆಯಾದ ಶಿವರಾಜ್ ಕುಮಾರ್ ಅಭಿನಯದ ''ತಮಸ್ಸು'' ಚಿತ್ರದ ಹಾಡನ್ನು ಕೂಡ ಹಾಡಿದರು. ''ಕೆಜಿಎಫ್'' ಚಿತ್ರದ ಹಿಂದಿ ಅವತರಣಿಕೆಯ'' ಗಲ್ಲಿ ಗಲ್ಲಿ ಮೇ'' ಹಾಡಿಗೆ ತಮ್ಮ ಕಂಠವನ್ನು ಕುಣಿಸಿದರು
2012ರಲ್ಲಿ ಬಂದ ''ಕಾಕ್ಟೈಲ್'' ಇವರ ವೃತ್ತಿ ಜೀವನಕ್ಕೆ ಬೇಕಿದ್ದ ವೇಗವನ್ನು ತಂದು ಕೊಡ್ತು. ಇಲ್ಲಿಂದ ''ಕಾಲಾ ಚಷ್ಮಾ''.. ''ದಿಲಬರ್''.. ''ಆಂಖ್ ಮಾರೆ''.. ''ಓ ಸಾಕಿ ಸಾಕಿ''.. ''ಗರ್ಮಿ''.. ಹೀಗೆ ಒಂದಾದ ಮೇಲೊಂದು ಚಾರ್ಟ್ಬಸ್ಟರ್ ಹಾಡುಗಳನ್ನು ನೀಡಿದ ನೇಹಾ ಹಲವಾರು ಆಲ್ಬಂ ಹಾಡುಗಳನ್ನು ಕೂಡ ಹೊರ ತಂದರು. ಹಾಡುವುದಲ್ಲದೇ ಆಲ್ಬಂ ಹಾಡುಗಳಲ್ಲಿ ತಾವೇ ನಾಯಕಿಯಾಗಿ ಕೂಡ ಕಾಣಿಸಿಕೊಂಡರು. ಆ ಪೈಕಿ ''ತಾರೋ ಕೇ ಶೆಹರ್'' ಹಾಡು ಇಂದಿಗೂ ಜನಪ್ರಿಯ.
ಇಂಥಾ ನೇಹಾ ಕಕ್ಕರ್ ಇಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಾಂಬ್ ಸಿಡಿಸಿದ್ದಾರೆ. ಎಲ್ಲದರಿಂದ ದೂರವಾಗುತ್ತಿರುವುದಾಗಿ ಹೇಳಿದ್ದಾರೆ. ಮರಳಿ ಬರ್ತಿನಾ, ಇಲ್ವಾ ಅನ್ನುವುದು ಖಾತ್ರಿ ಇಲ್ಲ ಎಂದಿದ್ದಾರೆ. ಆ ನಂತರ ತಾವು ಹಂಚಿಕೊಂಡಿದ್ದ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ.

ಈ ಕುರಿತು ಬರೆದುಕೊಂಡಿದ್ದ ನೇಹಾ ಕಕ್ಕರ್ ಜವಾಬ್ದಾರಿಗಳಿಂದ.. ಸಂಬಂಧಗಳಿಂದ..ಕೆಲಸ ಮತ್ತು ನಾನು ಯೋಚಿಸಬಹುದಾದ ಎಲ್ಲದರಿಂದಲೂ ಕೂಡ ವಿರಾಮ ತೆಗೆದುಕೊಳ್ಳುವ ಸಮಯ ಇದು ಎಂದು ಹೇಳಿದ್ದಾರೆ. ನಾನು ಮತ್ತೆ ಮರಳಿ ಬರ್ತಿನಾ ಇಲ್ವಾ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಮುಂದುವರೆದು ಸದಾ ತಮ್ಮನ್ನು ಸುತ್ತುವರೆಯುವ ಪಾಪರಾಜಿಗಳಲ್ಲಿ ಕೂಡ ಮನವಿಯನ್ನು ಮಾಡಿಕೊಂಡಿರುವ ನೇಹಾ ಪಾಪರಾಜಿಗಳು ಮತ್ತು ಅಭಿಮಾನಿಗಳು ನನ್ನನ್ನು ಕ್ಯಾಮರಾದಲ್ಲಿ ಮೊಬೈಲ್ನಲ್ಲಿ ಸೆರೆ ಹಿಡಿಯಬೇಡಿ ಎಂದಿದ್ದಾರೆ. ನನ್ನ ಖಾಸಗಿತನವನ್ನು ಗೌರವಿಸಿ, ನಾನು ಈ ಜಗತ್ತಿನಲ್ಲಿ ಮುಕ್ತವಾಗಿ ಬದುಕಲು ಅವಕಾಶ ನೀಡಿ ಎಂದು ಹೇಳಿರುವ ನೇಹಾ ಕಕ್ಕರ್ ಕ್ಯಾಮೆರಾ ಬೇಡ ಇದು ನನ್ನ ಶಾಂತಿಗಾಗಿ ನೀವು ನೀಡಬಹುದಾದ ಕನಿಷ್ಠ ಕೊಡುಗೆ ಎಂದು ಬರೆದುಕೊಂಡಿದ್ದಾರೆ.
ಹೀಗೆ ಬರೆದುಕೊಂಡು ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಡಿಲೀಟ್ ಮಾಡಿದ್ದಾರೆ. ನೇಹಾ ಅವರ ಈ ಪೋಸ್ಟ್ನಿಂದಾಗಿ ಇವರ ಅಭಿಮಾನಿಗಳಲ್ಲಿ ಈಗ ಆತಂಕ ಮನೆ ಮಾಡಿದೆ. ಹಲವರು ನಿಮ್ಮ ಮಾನಸಿಕ ಆರೋಗ್ಯದತ್ತ ಗಮನ ಕೊಡಿ ಎಂದು ಸದ್ಯ ನೇಹಾಗೆ ಹೇಳುತ್ತಿದ್ದಾರೆ. ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ನೇಹಾ ಕಕ್ಕರ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ನೇಹಾ ಕಕ್ಕರ್ ಕೆಲ ದಿನಗಳ ಹಿಂದೆ ''ಕ್ಯಾಂಡಿ ಶಾಪ್'' ಎಂಬ ಆಲ್ಬಂ ಹಾಡನ್ನು ಹೊರ ತಂದಿದ್ದರು. ಈ ಹಾಡಿಗೆ ಇವರ ಸಹೋದರ ಟೋನಿ ಕಕ್ಕರ್ ಅವರ ಸಂಗೀತ ಇತ್ತು. ಈ ಹಾಡು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಹಾಡಿನಲ್ಲಿ ನೇಹಾ ಕಕ್ಕರ್ ಅವರ ಹಾವ ಭಾವ ವೇಷ ಭೂಷಣ ಮತ್ತು ಹಾಡಿನ ಸಾಹಿತ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹೀನಾ ಮಾನವಾಗಿ ನೇಹಾ ಕಕ್ಕರ್ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು.

ಈ ಹಿನ್ನೆಲೆ ತಮ್ಮ ಮೇಲೆ ಏಕಾಏಕಿ ನಡೆದ ಈ ಸೈಬರ್ ದಾಳಿ ಮತ್ತು ವ್ಯಕ್ತವಾದ ಆಕ್ರೋಶದಿಂದಾಗಿ ನೇಹಾ ಕಕ್ಕರ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಸ್ಪಷ್ಟವಾದ ಉತ್ತರ ನೇಹಾ ಕಕ್ಕರ್ ಅವರೇ ಕೊಡಬೇಕು.


Click it and Unblock the Notifications











