ನಾನು ಬೇಡವಾದ ಹೆಣ್ಣು ಮಗುವಾಗಿದ್ದೆ: ಕಂಗನಾ ಹೇಳಿದ ಯಶಸ್ಸಿನ ಕತೆ
ನಟಿ ಕಂಗನಾ ರನೌತ್ ಬಾಲಿವುಡ್ನ ಅತ್ಯಂತ ಭಿನ್ನ ನಟಿ. 'ಭಿನ್ನ' ಕೇವಲ ನಟನೆಯ ಕಾರಣಕ್ಕೆ ಮಾತ್ರವಲ್ಲ, ವ್ಯಕ್ತಿತ್ವದ ಕಾರಣಕ್ಕೆ ಸಹ. ವಾಚಾಳಿ, ಅತಿ ನಿಷ್ಠುರಿ, ಪರ ನಿಂದಕಿ, ಹೋರಾಟಗಾರ್ತಿ, ಶ್ರಮಜೀವಿ, ಅಪಾರ ಪ್ರತಿಭಾವಂತೆ ಹೀಗೆ ಹಲವಾರು ಮಿಶ್ರ ವಿಶೇಷಣಗಳು ಕಂಗನಾಗೆ ಅಂಟಿಕೊಂಡಿವೆ.
ಇದೀಗ ನಟಿ ಕಂಗನಾ ತಾವು ಬಾಲ್ಯದಲ್ಲಿ ಅನುಭವಿಸಿದ ನಿರಾಕರಣೆಯ ಬಗ್ಗೆ ಹೇಳಿಕೊಂಡಿದ್ದಾರೆ. 'ನಾನೊಬ್ಬ ಬೇಡವಾದ ಹೆಣ್ಣು ಮಗುವಾಗಿದ್ದೆ' ಎಂದಿದ್ದಾರೆ ಕಂಗನಾ.
ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಂಗನಾ ಕುರಿತು ಟ್ವೀಟ್ ಮಾಡಿ, 'ಕಂಗನಾರ ದಣಿವರಿಯದ ಶ್ರಮಕ್ಕೆ, ಸತತ ದುಡಿಮೆಗೆ ಅವರಿಗೆ ವಿಶೇಷ ಪ್ರಶಸ್ತಿ ನೀಡಬೇಕು. ಈ ಕೊರೊನಾ ಸಮಯದಲ್ಲಿಯೂ ಒಂದರ ಹಿಂದೊಂದರಂತೆ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಿದ್ದಾರೆ ಕಂಗನಾ. 'ಜಯಲಲಿತಾ' ಬಳಿಕ ಈಗ ಏರ್ಫೋರ್ಸ್ ಸಂಬಂಧಿತ 'ತೇಜಸ್' ಸಿನಿಮಾ ಮಾಡುತ್ತಿದ್ದಾರೆ. ಯುವ ನಟ-ನಟಿಯರು ಅವರನ್ನು ನೋಡಿ ಕಲಿಯಬೇಕು' ಎಂದು ಟ್ವೀಟ್ ಮಾಡಿದ್ದಾರೆ.

ಅಗ್ನಿಹೋತ್ರಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಂಗನಾ, 'ನಾನು ಬೇಡವಾದ ಹೆಣ್ಣು ಮಗುವಾಗಿದ್ದೆ. ಆದರೆ ಈಗ ಅದ್ಭುತವಾದ ಸಿನಿಮಾ ಪ್ರೇಮಿ, ಶ್ರಮಜೀವಿ ತಂಡದೊಟ್ಟಿಗೆ ಕೆಲಸ ಮಾಡುತ್ತಿದ್ದೇನೆ. ನಾನು ಕೆಲಸದ ಮೇಲಿನ ಪ್ರೀತಿಗಾಗಿ ಕೆಲಸ ಮಾಡುತ್ತೇನೆ, ಹಣಕ್ಕಾಗಿ ಅಲ್ಲ. ಜಗತ್ತಿನ ಜನ 'ಕೇವಲ ನೀನು ಮಾತ್ರ ಇದನ್ನು ಮಾಡಬಲ್ಲೆ' ಎಂದು ಹೊಗಳಿದಾಗ, ನಾನೊಬ್ಬ ಬೇಡವಾದ ಹೆಣ್ಣುಮಗುವಾಗಿದ್ದಿರಬಹುದು ಆದರೆ ನನ್ನ ಅವಶ್ಯಕತೆ ಇತ್ತು, ಹೆಚ್ಚಿಗೆ ಇತ್ತು ಎನಿಸುತ್ತದೆ' ಎಂದಿದ್ದಾರೆ.
ನಟಿ ಕಂಗನಾ ತಮ್ಮ ಹದಿನಾರನೇಯ ವಯಸ್ಸಿನಲ್ಲಿಯೇ ಕುಟುಂಬದವರೊಟ್ಟಿಗೆ ಜಗಳ ಮಾಡಿಕೊಂಡು ನಟಿಯಾಗುವ ಉಮೇದಿನಿಂದ ಮನೆ ಬಿಟ್ಟು ಹೊರಗೆ ಬಂದು ಬಿಟ್ಟಿದ್ದರು. ಬಹಳ ಕಷ್ಟಪಟ್ಟು ನಟಿಯಾದ ಕಂಗನಾ ಈಗ ನಾಲ್ಕು ರಾಷ್ಟ್ರಪ್ರಶಸ್ತಿ ಪಡೆದಿರುವ ಬಹುಬೇಡಿಕೆಯ, ಪ್ರತಿಭಾವಂತ ನಟಿ.
Recommended Video
ಕಂಗನಾ ನಟಿಸಿರುವ 'ತಲೈವಿ' ಹಾಗೂ 'ದಾಖಡ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಪ್ರಸ್ತುತ 'ತೇಜಸ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಂತರ 'ಮಣಿಕರ್ಣಿಕಾ'ದ ಎರಡನೇ ಭಾಗವನ್ನು ಅವರೇ ನಿರ್ದೇಶಿಸಿ ನಟಿಸಲಿದ್ದಾರೆ. ನಂತರ 'ಇಮ್ಲಿ' ಹೆಸರಿನ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಕಂಗನಾ.


Click it and Unblock the Notifications











