ಕಾಂಗ್ರೆಸ್ ಸೇರಿದ ಸಹೋದರಿ ಪರ ಪ್ರಚಾರ ಮಾಡಲ್ಲವೆಂದ ಸೋನು ಸೂದ್
ಘೋಷಣೆಯಾಗಿರುವ ಪಂಚ ರಾಜ್ಯ ಚುನಾವಣೆ ದೇಶದ ಗಮನ ಸೆಳೆದಿದೆ. ಅದರಲ್ಲಿಯೂ ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳು ಬಹುವಾಗಿ ಗಮನ ಸೆಳೆದಿದ್ದು, ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆಯೂ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ.
ನಟ ಸೋನು ಸೂದ್ ಪಂಜಾಬ್ನವರೇ ಆಗಿದ್ದು, ಕೊರೊನಾ ಲಾಕ್ಡೌನ್ ಆರಂಭವಾದಾಗಿನಿಂದಲೂ ದೇಶದೆಲ್ಲೆಡೆ ಕಷ್ಟದಲ್ಲಿರುವವರಿಗೆ ತಮ್ಮ ಶಕ್ತಿಮೀರಿ ಸಹಾಯ ಮಾಡುವುದರಲ್ಲಿ ನಿರತರಾಗಿದ್ದಾರೆ. ಸರ್ಕಾರದ ಸಚಿವರೊಬ್ಬರು ಮಾಡಬಹುದಾದ ಸೇವೆಗಿಂತಲೂ ಹೆಚ್ಚಿನ ಕಾರ್ಯವನ್ನು ಸೋನು ಸೂದ್ ಮಾಡಿದ್ದು, ಇದಕ್ಕಾಗಿಯೇ ಅವರಿಗೆ 'ಮಸೀಯಾ' (ದೇವರು) ಎಂಬ ಬಿರುದು ನೀಡಲಾಗಿದೆ.
ಸೋನು ಸೂದ್ರ ಪರೋಪಕಾರ, ಜನ ಸೇವೆ ಗುರುತಿಸಿ ಅವರನ್ನು ಪಂಜಾಬ್ ರಾಜ್ಯದ ಯೂತ್ ಐಕಾನ್ ಎಂಬ ಗೌರವ ಹುದ್ದೆಯನ್ನು ಚುನಾವಣಾ ಆಯೋಗ ನೀಡಿತ್ತು. ಆದರೆ ಕೆಲ ದಿನಗಳ ಹಿಂದೆ ಆ ಗೌರವ ಹುದ್ದೆಯಿಂದ ಸೋನು ಸೂದ್ ಕೆಳಗಿಳಿದರು. ಸೋನು ಸೂದ್ರ ಸಹೋದರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಕಾರಣ ಸೋನು ಸೂದ್ ಈ ನಿರ್ಣಯ ತೆಗೆದುಕೊಂಡರು. ಆದರೆ ಇದೀಗ ಸೋನು ಸೂದ್ ತಾವು ತಮ್ಮ ಸಹೋದರಿಯ ಪರವಾಗಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಆಶ್ಚರ್ಯಕ್ಕೆ ಕಾರಣರಾಗಿದ್ದಾರೆ.

ಎಎಪಿ ಬದಲಿಗೆ ಕಾಂಗ್ರೆಸ್ ಸೇರ್ಪಡೆ
ಸೋನು ಸೂದ್ ಸಹೋದರಿ ಮಾಳವಿಕ ಸೂದ್ ಎಎಪಿ ಪಕ್ಷ ಸೇರ್ಪಡೆಗೊಂಡು ಆ ಪಕ್ಷದ ಮೂಲಕವೇ ಚುನಾವಣೆ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಮಾಳವಿಕ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದು, ಟಿಕೆಟ್ ಸಹ ಗಿಟ್ಟಿಸಿಕೊಂಡಿದ್ದಾರೆ. ಈ ಮೊದಲು ತಮ್ಮ ಸಹೋದರಿ ಚುನಾವಣೆಗೆ ಸ್ಪರ್ಧಿಸಲಿರುವ ವಿಷಯವನ್ನು ತಾವೇ ಸುದ್ದಿಗೋಷ್ಠಿ ನಡೆಸಿ ಹೇಳಿದ್ದ ಸೋನು ಸೂದ್ ಈಗ ಹಠಾತ್ತನೆ ತಾವು ಸಹೋದರಿಯ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದಿದ್ದು, ಇದು ಆಶ್ಚರ್ಯಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಸೇರ್ಪಡೆ ಸಮಯದಲ್ಲಿ ಹಾಜರಿದ್ದ ಸೋನು ಸೂದ್!
ಕೆಲವು ತಿಂಗಳ ಮುಂಚೆಯೇ ಸುದ್ದಿಗೋಷ್ಠಿ ನಡೆಸಿದ್ದ ಸೋನು ಸೂದ್, ''ಸಹೋದರಿ ಮಾಳವಿಕ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ನಾನು ನನ್ನ ಸಹೋದರಿಗೆ ಬೆಂಬಲವಾಗಿ ಇರಲಿದ್ದೇನೆ'' ಎಂದಿದ್ದರು. ಅದು ಮಾತ್ರವೇ ಅಲ್ಲದೆ, ಜನವರಿ 10 ರಂದು ಮಾಳವಿಕ ಸೂದ್, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾದಾಗ ಸೋನು ಸೂದ್ ಸಹ ಇದ್ದು, ಚುನಾವಣೆ ವಿಷಯವಾಗಿ ಚರ್ಚೆ ಮಾಡಿದರು. ಆದರೆ ಈಗ ತಾವು ಸಹೋದರಿ ಪರವಾಗಿ ಚುನಾವಣೆ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ.

ಸಹೋದರಿ ಬಗ್ಗೆ ನನಗೆ ಹೆಮ್ಮೆ ಇದೆ: ಸೋನು ಸೂದ್
ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸೋನು ಸೂದ್, ''ಸಹೋದರಿ ಬಗ್ಗೆ ನನಗೆ ಹೆಮ್ಮೆ ಇದೆ. ಹಲವು ವರ್ಷಗಳಿಂದ ಆಕೆ ಮೋಗದಲ್ಲಿ ನೆಲೆಸಿದ್ದಾಳೆ. ಅಲ್ಲಿನ ಸಮಸ್ಯೆಗಳು ಆಕೆಗೆ ಚೆನ್ನಾಗಿ ಗೊತ್ತಿವೆ. ರಾಜಕೀಯದ ಮೂಲಕ ಆಕೆ ನೇರವಾಗಿ ಜನರೊಟ್ಟಿಗೆ ಸಂಪರ್ಕ ಸಾಧಿಸಿ, ನೇರವಾಗಿ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ'' ಎಂದಿದ್ದಾರೆ.

ಆಕೆಯ ಗೆಲುವನ್ನು ಆಕೆಯೇ ಗೆಲ್ಲಲಿ: ಸೋನು ಸೂದ್
''ಸಹೋದರಿಯ ಪರವಾಗಿ ನಾನು ಪ್ರಚಾರ ಮಾಡುವುದಿಲ್ಲ. ಇದು ಆಕೆಯ ಪ್ರಯಾಣ. ಅಲ್ಲದೆ ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನಾನು ಈ ವರೆಗೆ ಮಾಡಿಕೊಂಡು ಬಂದಿರುವ ಕಾರ್ಯವನ್ನು ಮುಂದುವರೆಸುತ್ತೇನೆ. ನಾನು ಆಕೆಯ ಪರವಾಗಿ ಪ್ರಚಾರ ಮಾಡುವುದಿಲ್ಲ. ಆಕೆಯೇ ಕಷ್ಟಪಟ್ಟು ಕೆಲಸ ಮಾಡಿ ತನ್ನ ಜಯವನ್ನು ತಾನೇ ಗಳಿಸಲಿ ಎಂಬ ಉದ್ದೇಶ ನನ್ನದು. ನಾನಂತೂ ಸದಾ ರಾಜಕೀಯದಿಂದ ದೂರವೇ ಉಳಿದಿರುತ್ತೇನೆ. ಆದರೆ ನಾನು ಪ್ರಾರಂಭ ಮಾಡಿದ ಸೇವಾ ಕಾರ್ಯವನ್ನು ಹೀಗೆಯೇ ಮುಂದುವರೆಸುತ್ತೇನೆ'' ಎಂದಿದ್ದಾರೆ.


Click it and Unblock the Notifications











