ಬೆಂಗಳೂರಿನ ಪ್ರತೀಕಾಗೆ ಮನ ಸೋತ ಮಹಾಕುಂಭದ ಐಐಟಿ ಬಾಬಾ ; ಸಂಸಾರಿಯಾದ ಸನ್ಯಾಸಿ-ಲವ್ ಸ್ಟೋರಿ ಶುರುವಾಗಿದ್ಹೇಗೆ ?
ಕೆಲವರು ತುಂಬಾ ಓದಿರುತ್ತಾರೆ. ಮನೆಯವರ ಬಲವಂತಕ್ಕೆ ಯಾವುದ್ಯಾವುದೋ ಕೋರ್ಸ್ ಮಾಡಿರುತ್ತಾರೆ. ಆದರೆ ಇಂತಹವರಿಗೆ ನೌಕರಿ ಸೇರುವ ಯಾವ ಮನಸು ಇರುವುದಿಲ್ಲ. ಬದಲಿಗೆ ಆಧ್ಯಾತ್ಮ ಇವರನ್ನು ಸೆಳೆಯುತ್ತಿರುತ್ತೆ ಉದಾಹರಣೆಗೆ ಐಐಟಿ ಬಾಬಾ.
ಹೌದು, ಕಳೆದ ವರ್ಷದ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿ ತಮ್ಮ ಪಾಪ -ಕರ್ಮಗಳನ್ನು ಕಳೆದುಕೊಂಡವರ ನಿಖರವಾದ ಸಂಖ್ಯೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಯೋಗಿ ಸರ್ಕಾರಕ್ಕೆ ಗೊತ್ತಾದರೂ ಈ ಮಹಾಕುಂಭ ಮೇಳ ಅನೇಕರ ಅದೃಷ್ಟವನ್ನು ಬದಲಿಸಿದೆ. ಆ ಪೈಕಿ ಮೊನಾಲಿಸಾ ಒಬ್ಬರಾದರೆ ಮತ್ತೊಬ್ಬರು ಈ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್.

ಮುಂಬೈನ ಪ್ರತಿಷ್ಠಿತ ಕಾಲೇಜ್ನಲ್ಲಿ ತಾನು ಐಐಟಿ ಪದವಿಯನ್ನು ಪಡೆದಿರುವುದಾಗಿ ಹೇಳುವ ಈ ಬಾಬಾ ಉರ್ಫ್ ಅಭಯ್ ಸಿಂಗ್ ಎಂಬ ಈ ವ್ಯಕ್ತಿ ಕೆನಡಾದಲ್ಲಿದ್ದ ಬರೋಬ್ಬರಿ 36 ಲಕ್ಷ ಸಂಬಳ ಬರುತ್ತಿದ್ದ ಕೆಲಸವನ್ನು ಎಡಗಾಲಿನಲ್ಲಿ ಒದ್ದು ಬಂದಿದ್ದಾಗಿ ಹೇಳಿ ಹಿಂದೆ ಸುದ್ದಿಯಾಗಿದ್ದರು.
ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಲು ಎಲ್ಲರೂ ಕಾಯುತ್ತಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಇಷ್ಟೇ ಯಾಕೆ ತನ್ನಲ್ಲಿ ನಿಗೂಢವಾದ ಶಕ್ತಿ ಇದೆ ಎಂದು ಹೇಳಿ ನಂಬಿಸಿ ಭವಿಷ್ಯವನ್ನು ಹೇಳಲು ಶುರು ಮಾಡಿದ್ದರು. ಆಗ ಮಾಧ್ಯಮಗಳಲ್ಲಿ ವರದಿಯಾದಂತೆ ತ್ರಿಕಾಲಜ್ಞಾನಿಯಂತೆ ಮಾತನಾಡಿ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಭಾರತ ಸೋಲುತ್ತೆ ಎಂದು ಕೂಡ ಹೇಳಿದ್ದರು.
ಇಷ್ಟೇ ಅಲ್ಲ ಬಾಹ್ಯ ಅಥವಾ ಭೌತಿಕ ಸುಖ, ಸಂಪತ್ತು ಆಂತರಿಕ ತೃಪ್ತಿಯನ್ನು ನೀಡಲ್ಲ. ಹಾಗಾಗಿ ಎಲ್ಲವನ್ನು ತೊರೆದು ಆಂತರಿಕ ನೆಮ್ಮದಿಯನ್ನು ಕಂಡುಕೊಳ್ಳುವ ಕೆಲಸವನ್ನು ಮಾಡುತ್ತಿರೋದಾಗಿಯೂ ಮಾತನಾಡಿದ್ದರು.
ಇಂಥಾ ಐಐಟಿ ಬಾಬಾ ಸದ್ದಿಲ್ಲದೇ ಕಳೆದ ಫೆಬ್ರವರಿ 15, 2026 ರಂದು ಮಹಾಶಿವರಾತ್ರಿಯಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಅಘಂಜಾರ್ ಮಹಾದೇವ ಮಂದಿರದಲ್ಲಿ ಮದುವೆಯಾಗಿದ್ದಾರೆ. ಫೆಬ್ರವರಿ 19 ರಂದು ನ್ಯಾಯಾಲಯದಲ್ಲಿ ತಮ್ಮ ಮದುವೆಯ ನೋಂದಣಿಯನ್ನು ಕೂಡ ಮಾಡಿಸಿದ್ಧಾರೆ. ವಿಶೇಷ ಅಂದರೆ ಬಾಬಾ ಕೈ ಹಿಡಿದ ಬೆಡಗಿ ಬೇರೆ ಯಾರು ಅಲ್ಲ. ಬದಲಿಗೆ ಬೆಂಗಳೂರಿನ ಪ್ರತೀಕಾ. ಈ ಹಿನ್ನೆಲೆ ಐಐಟಿ ಬಾಬಾನನ್ನು ಇನ್ಮುಂದೆ ಕರ್ನಾಟಕ ಅಳಿಯ ಎನ್ನಲು ಅಡ್ಡಿ ಇಲ್ಲ.

ಬೆಂಗಳೂರು ಮೂಲದ ಪ್ರತೀಕಾ ಕೂಡ ಇಂಜಿನಿಯರಿಂಗ್ ಪದವೀಧರೆ. ಸುಮಾರು ಒಂದು ವರ್ಷದ ಹಿಂದೆ ಇವರಿಬ್ಬರು ಕೊಯಮತ್ತೂರಿನ ಆದಿಯೋಗಿ ಆಶ್ರಮದಲ್ಲಿ ಭೇಟಿಯಾಗಿದ್ದರು. ಇಲ್ಲಿ ಶುರುವಾದ ಸ್ನೇಹ ಆ ನಂತರ ಪ್ರೇಮದ ಸ್ವರೂಪ ಪಡೆದಿದೆ. ಅಭಯ್ ಅವರ ಪ್ರಾಮಾಣಿಕತೆ ಮತ್ತು ಜೀವನದ ಕುರಿತು ಅವರಿಗಿರುವ ದೃಷ್ಟಿಕೋನಕ್ಕೆ ಪ್ರತೀಕಾ ಮನ ಸೋತಿರುವುದಾಗಿ ಹೇಳಿದ್ಧಾರೆ. ಅಧ್ಯಾತ್ಮದ ಹಾದಿಯಲ್ಲಿ ಜೊತೆಯಾಗಿ ನಡೆಯಲು ನಿರ್ಧರಿಸಿ ಮದುವೆಯಾಗಿದ್ದಾರೆ.
ಇನ್ನು ಅಭಯ್ ಸಿಂಗ್ ಅವರ ಈ ನಿರ್ಧಾರ ಅವರ ಕುಟುಂಬದಲ್ಲೂ ಸಂತಸ ಮನೆ ಮಾಡಿದೆ. ಈ ಹಿಂದೆ ತಂದೆ-ತಾಯಿಯ ನಡುವಿನ ಜಗಳದಿಂದಾಗಿ ಮದುವೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದ ಅಭಯ್, ಈಗ ಸನ್ಯಾಸದ ಹಾದಿಯಲ್ಲೇ ಸಂಸಾರ ಜೀವನವನ್ನೂ ನಡೆಸಲು ಮುಂದಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಪತ್ನಿಯೊಂದಿಗೆ ಹರಿಯಾಣದ ತಮ್ಮ ಗ್ರಾಮಕ್ಕೆ ಭೇಟಿ ನೀಡಿದಾಗ, ತಾಯಿ ಶೀಲಾ ದೇವಿ ಮಗ ಮತ್ತು ಸೊಸೆಗೆ ಆರತಿ ಬೆಳಗಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ತಂದೆ ಕರಣ್ ಸಿಂಗ್ ಕೂಡ ಮಗನ ಈ ನಿರ್ಧಾರವನ್ನು ಬೆಂಬಲಿಸಿದ್ದು, ಹೊಸ ಬದುಕು ಶುರು ಮಾಡಿದ್ದಕ್ಕೆ ಖುಷಿಯಾಗಿದೆ ಎಂದಿದ್ದಾರೆ.
ಸದ್ಯ ಧರ್ಮಶಾಲಾದಲ್ಲಿ ನೆಲೆಸಿರುವ ಇವರು ಇಬ್ಬರು ಮುಂದೊಂದು ದಿನ "ಶ್ರೀ ವಿಶ್ವವಿದ್ಯಾಲಯ" ಎಂಬ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶ ಹೊಂದಿದ್ಧಾರೆ. ಆಧುನಿಕ ವಿಜ್ಞಾನ ಮತ್ತು ಪುರಾತನ ಸನಾತನ ಧರ್ಮದ ಜ್ಞಾನವನ್ನು ಒಂದೇ ಸೂರಿನಡಿ ತರುವುದು ಇವರ ಧ್ಯೇಯ. ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡುವುದಷ್ಟೇ ಅಲ್ಲದೆ, ಮಾನಸಿಕ ಸ್ಪಷ್ಟತೆ ಮತ್ತು ಧ್ಯಾನದ ಶಿಕ್ಷಣ ನೀಡಬೇಕೆನ್ನುವ ಗುರಿಯನ್ನು ಇಬ್ಬರು ಹೊಂದಿದ್ಧಾರೆ.


Click it and Unblock the Notifications











