ಪಿರಿಯಡ್, ಆಕ್ಷನ್, ಕಾಮಿಡಿ ; ಈ ಸ್ವಾತಂತ್ರ್ಯೋತ್ಸವಕ್ಕೆ ದಿಗ್ಗಜರ ಸಿನಿ ಸಮರ..!
ಸುಧೀರ್ಘ ರಜೆಯಲ್ಲಿ ಮಜಾ ಮಾಡಲು ಜನ ಸಾಮಾನ್ಯರು ಅಣಿಯಾಗುವ ಸಮಯದಲ್ಲಿ, ಚಿತ್ರರಂಗದಲ್ಲಿ ಅತಿವೃಷ್ಟಿಯಾಗುತ್ತೆ. ಇದು ಕಾಲ .. ಕಾಲಕ್ಕೆ .. ಸಾಬೀತು ಆಗ್ತಾನೇ ಬಂದಿದೆ. ಈ ಬಾರಿಯ ಸ್ವಾತಂತ್ರೋತ್ಸವ ಕೂಡ ಇದರಿಂದ ಹೊರತಾಗಿಲ್ಲ.
ಹೌದು, ಹಬ್ಬ ಹರಿದಿನ ಅಥವಾ ಯಾವುದಾದರೂ ವಿಶೇಷ ದಿನ ಬಂದರೆ ಸಾಕು, ಬಣ್ಣದ ಪ್ರಪಂಚದಲ್ಲಿ ನಾ ಮುಂದು ತಾ ಮುಂದು ಎನ್ನುವವರೇ ಹೆಚ್ಚು. ಅದರಲ್ಲಿಯೂ ಬಾಲಿವುಡ್ನಲ್ಲಿಯಂತೂ ಈ ಸ್ಪರ್ಧೆ ತುಸು ಹೆಚ್ಚೇ ಇರುತ್ತೆ. ವ್ಯಾಪಾರ-ವ್ಯವಹಾರ ಹಂಚಿ ಹೋಗುತ್ತೆ ಎನ್ನುವ ಸತ್ಯ ಗೊತ್ತಿದ್ದರೂ ಇಲ್ಲಿ ತಮ್ಮ ರೂಪರೇಶೆಯಲ್ಲಿ ಬದಲಾವಣೆ ಮಾಡಿಕೊಳ್ಳುವರ ಸಂಖ್ಯೆ ತೀರಾ ಕಡಿಮೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಈ ಬಾರಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಒಂದಲ್ಲ.. ಎರಡಲ್ಲ.. ಮೂರು ಸಿನಿಮಾ ಬಿಡುಗಡೆಯಾಗುತ್ತಿವೆ. ಈ ಮೂರು ಸಿನಿಮಾ ಮಹತ್ವಕಾಂಕ್ಷೆಯ ಸಿನಿಮಾಗಳೇ. ಆದರೂ ಮುಂದಡಿ ಇಡುವ ಮನಸು ಯಾರು ಮಾಡಲಿಲ್ಲ. ಆ ಪೈಕಿ ಅಕ್ಷಯ್ ಕುಮಾರ್ ಕೂಡ ಒಬ್ಬರು.

ಹೌದು, ಅಕ್ಷಯ್ ಕುಮಾರ್ ಟೈಮು ತುಂಬಾನೇ ಖರಾಬ್ ಆಗಿದೆ. ಒಂದಾದ ಮೇಲೊಂದು ಇವರ ಸಿನಿಮಾ ಮಕಾಡೆ ಮಲಗುತ್ತಿವೆ. ಆದರೂ, ಅಕ್ಷಯ್ ಕುಮಾರ್ ಸೋಲು ಒಪ್ಪಿಕೊಂಡಿಲ್ಲ. ಇಂದಲ್ಲ.. ನಾಳೆ.. ಮತ್ತೆ ಗೆಲುವು ನನ್ನದಾಗುತ್ತೆ ಎಂಬ ಭರವಸೆಯಲ್ಲಿಯೇ ನಿರಂತರ ಸಿನಿಮಾ ಮಾಡುತ್ತಿದ್ಧಾರೆ. ಆ ಪೈಕಿ ಇವರು ಅಭಿನಯಿಸಿರುವ 'ಖೇಲ್ ಖೇಲ್ ಮೇ' ಚಿತ್ರ ಈ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.
ಇನ್ನೂ 'ಖೇಲ್ ಖೇಲ್ ಮೇ' ಚಿತ್ರದಲ್ಲಿ ಕೇವಲ ಅಕ್ಷಯ್ ಮಾತ್ರವಲ್ಲ, ತ್ಯಾಪ್ಸಿ ಪನ್ನು.. ಫರ್ದಿನ್ ಖಾನ್.. ವಾಣಿ ಕಪೂರ್ ಕೂಡ ಇದ್ದಾರೆ. ಒಂದು ಅಲ್ಪ ವಿರಾಮದ ನಂತರ ಅಕ್ಷಯ್ ಕುಮಾರ್ ಈ ಚಿತ್ರದ ಮೂಲಕ 'ಕಾಮಿಡಿ' ಟ್ರ್ಯಾಕ್ಗೆ ಮರಳಿರುವುದು ಈ ಚಿತ್ರದ ವಿಶೇಷ. ಇನ್ನೂ.. ನಿನ್ನೆಯಷ್ಟೇ ಈ ಚಿತ್ರದ ವಿಶೇಷ ಪ್ರದರ್ಶನ ನಡೆದಿದೆ. ಈ ಪ್ರದರ್ಶನದಲ್ಲಿ ಭಾಗಿಯಾದ ಅನೇಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ ಎನ್ನುವ ವರದಿ ಬಂದಿದೆ. ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಮತ್ತೆ ಗೆದ್ದು ಬೀಗುವುದು ಖಚಿತ ಅನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ಇದು ಅಂದುಕೊಂಡಷ್ಟು ಸುಲಭವಲ್ಲ. ಯಾಕೆಂದರೆ ಅದೇ ದಿನ ಮತ್ತೊಂದು ಹಾಸ್ಯ ಪ್ರಧಾನ ಹಾರರ್ ಸಿನಿಮಾ 'ಸ್ತ್ರೀ -02' ಕೂಡ ಬಿಡುಗಡೆಯಾಗಲಿದೆ.

ಹೌದು, 2018ರಲ್ಲಿ ಬಿಡುಗಡೆಗೊಂಡು ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದ 'ಸ್ತ್ರೀ' ಚಿತ್ರದ ಮುಂದುವರೆದ ಭಾಗ ಕೂಡ ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ. ಶ್ರದ್ಧಾ ಕಪೂರ್.. ರಾಜ್ ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಇಲ್ಲಿ ಅಕ್ಷಯ್ ಮತ್ತು ಅವರ ಸಂಗಡಿಗರ ಎದುರು ಎದುರಾಳಿಯಾಗಿ ನಿಂತಿದ್ದಾರೆ. ಇನ್ನೂ.. 'ಖೇಲ್ ಖೇಲ್ ಮೇ' ಮತ್ತು 'ಸ್ತ್ರೀ 02' ಇವೆರಡರಲ್ಲಿಯೂ ಹಾಸ್ಯವೇ ಜೀವಾಳ. ಈ ಕಾರಣಕ್ಕೆ ಪ್ರೇಕ್ಷಕರ ಮೊದಲ ಆಯ್ಕೆ ಯಾವ ಸಿನಿಮಾ ಆಗಲಿದೆ ಅನ್ನುವ ಕುತೂಹಲ ಬಾಲಿವುಡ್ ನಲ್ಲಿ ಮನೆ ಮಾಡಿದೆ. ಸದ್ಯಕ್ಕೆ 'ಖೇಲ್ ಖೇಲ್ ಮೇ' ಚಿತ್ರಕ್ಕಿಂತ ಬುಕ್ ಮೈ ಶೋದಲ್ಲಿ 'ಸ್ತ್ರೀ 2' ಸಿನಿಮಾ ಮುಂದಿದೆ.
ಇವೆರಡು ಸಿನಿಮಾಗಳ ಜೊತೆ ಅವತ್ತೇ ಜಾನ್ ಅಬ್ರಾಹಂ ಅಭಿನಯದ 'ವೇದಾ' ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಆದರೆ, 'ವೇದಾ' ಕಾಮಿಡಿ ಅಲ್ಲ ಬದಲಿಗೆ ಟ್ರ್ಯಾಜಿಡಿ ಕಥೆಯನ್ನೊಂದಿರುವ ಸಿನಿಮಾ. ಹೀಗಾಗಿ ಆ ಎರಡು ಚಿತ್ರಕ್ಕೆ ಕ್ಲಾಸ್ ವರ್ಗ ಚಪ್ಪಾಳೆ ಹೊಡೆದರೆ, ವೇದಾ ಚಿತ್ರಕ್ಕೆ ಮಾಸ್ ಬಳಗ ಶಿಳ್ಳೆ ಹೊಡೆಯಲಿದೆ ಅನ್ನುವ ವಿಶ್ವಾಸ ಮುಂಬೈನಲ್ಲಿ ಸದ್ಯಕ್ಕೆ ಅನೇಕರಿಗೆ ಇದೆ. ಫಲಿತಾಂಶ ಈಗಲೇ ಹೇಳಲು ಅಸಾಧ್ಯವಾದರೂ 'ಸ್ತ್ರೀ 2' ಮತ್ತು 'ಖೇಲ್ ಖೇಲ್ ಮೇ' ಚಿತ್ರದ ಜೊತೆ ಕಣಕ್ಕಿಳಿದಿರುವ 'ವೇದಾ' ಹವಾ ಮಾತ್ರ ಉತ್ತರ ಭಾರತದಲ್ಲಿ ಅಷ್ಟಾಗಿ ಕಂಡು ಬರುತ್ತಿಲ್ಲ. ಇನ್ನೂ ದಕ್ಷಿಣದಲ್ಲಿ ಕೂಡ 'ವೇದಾ' ಹಾದಿ ಸುಗಮವಾಗಿಲ್ಲ. ಯಾಕೆಂದರೆ, ಅವತ್ತು ಈ ಕಡೆ ಮಾಸ್ ಪ್ರೇಕ್ಷಕರ ಮನ ತಣಿಸಲು ಪೂರಿ ಜಗನ್ನಾಥ್ ತಮ್ಮ 'ಶಂಕರ'ನನ್ನು ಕಣಕ್ಕಿಳಿಸುತ್ತಿದ್ದಾರೆ.

ಹೌದು, ಆಗಸ್ಟ್ 15ರಂದು 'ಡಬಲ್ ಇಸ್ಮಾರ್ಟ್' ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಇನ್ನೂ ಈ ಸಿನಿಮಾ 'ಇಸ್ಮಾರ್ಟ್ ಶಂಕರ್' ಚಿತ್ರದ ಸಿಕ್ವೆಲ್ ಆದ ಕಾರಣ ಚಿತ್ರದ ಮೇಲೆ ತುಸು ಹೆಚ್ಚೇ ನಿರೀಕ್ಷೆಗಳಿವೆ. 'ಡಬಲ್ ಇಸ್ಮಾರ್ಟ್' ಕೇವಲ ತೆಲುಗು ಮಾತ್ರವಲ್ಲ ಪ್ಯಾನ್ ಇಂಡಿಯಾ ಯೋಜನೆಯಡಿ ಹಿಂದಿ ಸೇರಿ ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಅನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಮತ್ತೊಂದೆಡೆ 'ಡಬಲ್ ಇಸ್ಮಾರ್ಟ್' ಎದುರು ರವಿತೇಜಾ ಅಭಿನಯದ 'ಮಿಸ್ಟರ್ ಬಚ್ಚನ್' ಕೂಡ ತೆರೆಗೆ ಬರಲಿದೆ. ಹೇಳಿ ಕೇಳಿ ರವಿತೇಜಾ ಆಂಧ್ರದಲ್ಲಿ ಮಾಸ್ ಮಹಾರಾಜ ಎಂದೇ ಹೆಸರುವಾಸಿಯಾದವರು. ಹೀಗಾಗಿ ಈ ಎರಡು ಸಿನಿಮಾಗಳ ಮೇಲಿನ ಫಲಿತಾಂಶದ ಮೇಲೀಗ ಎಲ್ಲರ ಕಣ್ಣಿದೆ. ಈ ಸಮರ ಟಾಲಿವುಡ್ನಲ್ಲಿ ತೀವೃ ಕುತೂಹಲವನ್ನೂ ಕೆರಳಸಿದೆ.

ಇವೆರಡು ಸಿನಿಮಾ ಹೊರತು ಪಡಿಸಿದರೆ ತಮಿಳಿನಿಂದ ಚಿಯಾನ್ ವಿಕ್ರಮ್ ಅಭಿನಯದ 'ತಂಗಾಲನ್' ಸಿನಿಮಾ ಕೂಡ ಅವತ್ತೇ ಅಂದರೆ ಆಗಸ್ಟ್ 15ರಂದೇ ಬಿಡುಗಡೆಯಾಗಲಿದೆ. ಪಾ.ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ 'ಕೆ.ಜಿ.ಎಫ್' ಕುರಿತು ಕಾಲ್ಪನಿಕ ಕಥೆಯಲ್ಲ ಬದಲಿಗೆ ನೈಜ ಕಥೆ ಇದೆ. ವಿಶೇಷ ಅಂದರೆ 'ತಂಗಾಲನ್' ಕೂಡ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿಯೇ ಬಿಡುಗಡೆಯಾಗಲಿದೆ. ತಮಿಳಿನ ಜೊತೆ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಕೂಡ ಬಿಡುಗಡೆಯಾಗಲಿದೆ.
ನಿಜಾ..ಬಿಡುಗಡೆಗೆ ಇನ್ನೆರಡು ದಿನ ಇರುವಾಗ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ಬಿಡುಗಡೆ ಆಗಬೇಕೆಂದರೆ ಎರಡು ಕೋಟಿ ರೂಪಾಯಿ ಹಣವನ್ನು ಕಟ್ಟಿಯೇ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಆದರೂ ಈ ಸಮಸ್ಯೆ ಬಗೆಹರಿಸಿಕೊಂಡು ಚಿತ್ರವನ್ನು ಚಿತ್ರತಂಡ ಬಿಡುಗಡೆ ಮಾಡುತ್ತೆ ಎಂಬ ವಿಶ್ವಾಸ ವಿಕ್ರಮ್ ಅವರ ಅಭಿಮಾನಿಗಳಿಗಿದೆ.

ಹೀಗೆ ಈ ಆಗಸ್ಟ್ 15ರಂದು ಉತ್ತರದಲ್ಲಿ ಮೂರು ದಕ್ಷಿಣದಲ್ಲಿ ಮೂರು ಸಿನಿಮಾಗಳು ಏಕಕಾಲಕ್ಕೆ ಭಾರದೆಲ್ಲೆಡೆ ಬಿಡುಗಡೆಯಾಗುತ್ತಿವೆ. ಈ ಆರು ಸಿನಿಮಾಗಳಲ್ಲಿ ಯಾವ ಚಿತ್ರ ಅತೀ ಹೆಚ್ಚು ಪ್ರೇಕ್ಷಕರ ಮತಗಳನ್ನು ಪಡೆಯುತ್ತೆ, ಯಾವ ಚಿತ್ರ ತಂಡ ವಿಜಯದ ಪತಾಕೆಯನ್ನು ಹಾರಿಸುತ್ತೆ ಅನ್ನುವುದಕ್ಕೆ ಉತ್ತರ ಈ ವಾರಾಂತ್ಯಕ್ಕೆ ಸಿಗಲಿದೆ


Click it and Unblock the Notifications











