ನನ್ನ ಗಂಡ ನೆಪೋಟಿಸಂ ಬಲಿಪಶು: ಕರಣ್, ಶಾರುಖ್ ವಿರುದ್ಧ ನಟ ಇಂದರ್ ಕುಮಾರ್ ಪತ್ನಿ ಆರೋಪ
ತಮ್ಮ 43ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನಹೊಂದಿದ್ದ ನಟ ಇಂದರ್ ಕುಮಾರ್ ಕೂಡ ಬಾಲಿವುಡ್ನ ಸ್ವಜನಪಕ್ಷಪಾತದ ಬಲಿಪಶುವಾಗಿದ್ದರು ಎಂದು ಅವರ ಪತ್ನಿ ಪಲ್ಲವಿ ಕುಮಾರ್ ಆರೋಪಿಸಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಹುಟ್ಟಿಸಿರುವ ಸ್ವಜನಪಕ್ಷಪಾತದ ಚರ್ಚೆ, ಅನೇಕರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅನುವು ಮಾಡಿಕೊಟ್ಟಿದೆ.
Recommended Video
ಇದೇ ಹಾದಿಯಲ್ಲಿ ಧ್ವನಿ ಎತ್ತಿರುವ ವಿವಾದಿತ ನಟ ಇಂದರ್ ಕುಮಾರ್ ಪತ್ನಿ ಪಲ್ಲವಿ ಕುಮಾರ್, ತಮ್ಮ ಗಂಡ ಬಾಲಿವುಡ್ನಲ್ಲಿನ ಸ್ವಜನಪಕ್ಷಪಾತಕ್ಕೆ ಬಲಿಪಶುವಾಗಿದ್ದರು. ಅವರಿಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಕರಣ್ ಜೋಹರ್ ಮತ್ತು ಶಾರುಖ್ ಖಾನ್ ಮೋಸ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಮುಂದೆ ಓದಿ...

ಸಾಯುವ ಮುನ್ನವೂ ಸಹಾಯ ಕೇಳಿದ್ದರು
ಇನ್ಸ್ಟಾಗ್ರಾಂನಲ್ಲಿ ಸುದೀರ್ಘ ಬರಹ ಬರೆದಿರುವ ಪಲ್ಲವಿ ಕುಮಾರ್, 2017ರಲ್ಲಿ ಇಂದರ್ ಕುಮಾರ್ ಸಾಯುವ ಮುನ್ನ ಕೆಲಸ ಪಡೆದುಕೊಳ್ಳುವುದಕ್ಕಾಗಿ ಎಷ್ಟೆಲ್ಲ ಪರದಾಡಿದ್ದರು ಎಂದು ಬರೆದಿದ್ದಾರೆ. 90ರ ದಶಕದಲ್ಲಿ ಯಶಸ್ಸುಗಳಿಸಿದ್ದ ಅವರು ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದರು ಎಂದು ಹೇಳಿದ್ದಾರೆ.
ಈ ದಿನಗಳಲ್ಲಿ ಪ್ರತಿಯೊಬ್ಬರೂ ನೆಪೋಟಿಸಂ ಬಗ್ಗೆ ಮಾತನಾಡುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತೆಯೇ ನನ್ನ ಪತಿ, ದಿವಂಗತ ಇಂದರ್ ಕುಮಾರ್ ತಮ್ಮ ಸ್ವಂತ ಪರಿಶ್ರಮದಿಂದ ಹೆಸರು ಗಳಿಸಿದ್ದರು. 90ರ ದಶಕದಲ್ಲಿ ಅವರು ಉತ್ತುಂಗದಲ್ಲಿದ್ದರು. ಸಾಯುವ ಮುನ್ನವೂ ಅವರು ತಮಗೆ ಸಹಾಯಕ್ಕಾಗಿ ಕೆಲಸ ನೀಡುವಂತೆ ಇಬ್ಬರು ದೊಡ್ಡ ವ್ಯಕ್ತಿಗಳ ಬಳಿ ಹೋಗಿದ್ದು ನನಗೆ ಇನ್ನೂ ನೆನಪಿದೆ.

ಕರಣ್ಗಾಗಿ ಕಾದಿದ್ದೆವು
ಅವರು ಆಗಲೇ ಕೆಲವು ಸಣ್ಣ ಪುಟ್ಟ ಪ್ರಾಜೆಕ್ಟ್ ಮಾಡುತ್ತಿದ್ದರು. ಆದರೆ ಆರಂಭದಲ್ಲಿ ಸಿಕ್ಕಂತೆಯೇ ದೊಡ್ಡ ಸಿನಿಮಾಗಳನ್ನು ಬಯಸಿದ್ದರು. ಕರಣ್ ಜೋಹರ್ ಬಳಿ ಒಮ್ಮೆ ಹೋಗಿದ್ದರು. ನಾನೂ ಜತೆಗಿದ್ದೆ. ನನ್ನ ಮುಂದೆಯೇ ಇದೆಲ್ಲವೂ ನಡೆದಿತ್ತು. ಅವರ ವ್ಯಾನ್ ಹೊರಗೆ ಎರಡು ಗಂಟೆ ಕಾದಿದ್ದೆವು. ಬಳಿಕ ಅವರ ಮ್ಯಾನೇಜರ್ ಗರೀಮಾ ಬಂದು ಕರಣ್ ಬಿಜಿಯಾಗಿದ್ದಾರೆ ಎಂದರು. ಆದರೆ ನಾವು ಕಾದೆವು. ಅವರು ಹೊರಗೆ ಬಂದಾಗ, 'ಇಂದರ್, ಗರೀಮಾ ಜತೆ ಸಂಪರ್ಕದಲ್ಲಿರಿ. ಈಗ ಯಾವುದೇ ಕೆಲಸ ನಿಮಗೆ ಇಲ್ಲ ಎಂದರು. ಇಂದರ್ ಹಾಗೆಯೇ ಮಾಡಿದರು. ಹದಿನೈದು ದಿನದ ಬಳಿಕ ಫೋನ್ ಮಾಡಿದಾಗಲೂ ಈಗ ಕೆಲಸವಿಲ್ಲ ಎಂದರು. ನಂತರ ಇಂದರ್ ಅವರನ್ನು ಬ್ಲಾಕ್ ಮಾಡಲಾಯಿತು.

ಶಾರುಖ್ ಖಾನ್ ಕೂಡ ಹೀಗೆ...
ಇದೇ ರೀತಿಯ ಅನುಭವ ಬೇರಾರೂ ಅಲ್ಲ, ಶಾರುಖ್ ಖಾನ್ ಅವರಿಂದಲೂ ಆಯ್ತು. ಒಂದು ವಾರದಲ್ಲಿ ನಿಮಗೆ ಕರೆ ಮಾಡುತ್ತೇನೆ ಎಂದು ಶಾರುಖ್ ಹೇಳಿದ್ದರು. ಈಗ ಯಾವುದೇ ಕೆಲಸ ಇಲ್ಲ. ಇದು ನಡೆದಿದ್ದು 'ಜೀರೋ' ಚಿತ್ರದ ಸೆಟ್ನಲ್ಲಿ. ತಮ್ಮ ಮ್ಯಾನೇಜರ್ ಪೂಜಾ ಜತೆ ಸಂಪರ್ಕದಲ್ಲಿ ಇರುವಂತೆ ಹೇಳಿದ್ದರು. ಗರೀಮಾ ಮಾಡಿದಂತೆ ಪೂಜಾ ಕೂಡ ಮಾಡಿದರು. ಈ ಎರಡು ನಿರ್ಮಾಣ ಸಂಸ್ಥೆಗಳಲ್ಲಿ ಯಾವುದೇ ಕೆಲಸ ಖಾಲಿ ಇಲ್ಲ ಎನ್ನುವುದನ್ನು ಯಾರಾದರೂ ನಂಬಲು ಸಾಧ್ಯವೇ?

ನೆಪೋಟಿಸಂ ನಿಲ್ಲಬೇಕು
ತಾವು ಸ್ಟಾರ್ಗಳ ಜತೆ ಮಾತ್ರ ಕೆಲಸ ಮಾಡುವುದಾಗಿ ಕರಣ್ ಜೋಹರ್ ಅನೇಕ ಬಾರಿ ಹೇಳಿದ್ದಾರೆ. ನನ್ನ ಪತಿ ಕೂಡ ಸ್ಟಾರ್ ಆಗಿದ್ದರು. ಅವರ ಸಿನಿಮಾಗಳಿಂದ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಪ್ರತಿಭಾವಂತ ಜನರಿಗೆ ಸಹಾಯ ಮಾಡಲು ಈ ದೊಡ್ಡ ಕುಳಗಳಿಗೆ ಏಕೆ ಕಷ್ಟ? ಅವರಿಗೆ ಯಾವುದರ ಬಗ್ಗೆ ಭಯ? ಅಥವಾ ಅವರು ಕೆಟ್ಟ ಜನರು ಎಂದಷ್ಟೇ ನಾವು ಹೇಳಬಹುದು. ಒಳ್ಳೆಯವರಂತೆ ನಟಿಸುತ್ತಾರೆ...
ನೆಪೋಟಿಸಂ ನಿಲ್ಲಬೇಕು. ಜನರು ಸಾಯುತ್ತಿದ್ದಾರೆ. ಆದರೆ ಈಗ ದೊಡ್ಡ ಕುಳಗಳು ಅದರ ಪರಿಣಾಮವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಇಂತಹ ಜನರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಲ್ಲವಿ ಕುಮಾರ್ ಆಗ್ರಹಿಸಿದ್ದಾರೆ.

43ನೇ ವಯಸ್ಸಿನಲ್ಲಿ ನಿಧನ
ರಾಜಸ್ಥಾನದ ಜೈಪುರದವರಾದ ಇಂದರ್ ಕುಮಾರ್, ಮಾಸೂಮ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಖಿಲಾಡಿಯೋನ್ ಕಾ ಖಿಲಾಡಿ, ಅಗ್ನಿಪಥ್, ವಾಂಟೆಡ್, ಬಾಘಿ, ಮಾ ತುಝೆ ಸಲಾಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. 2017ರ ಜುಲೈ 28ರಂದು ತಮ್ಮ 43ನೇ ವಯಸ್ಸಿನಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು.

ಮೂರು ಮದುವೆಯಾಗಿದ್ದ ಇಂದರ್
ಸಿನಿಮಾಗಳಾಚೆ ಅವರು ಹಲವು ವಿವಾದಗಳಲ್ಲಿಯೂ ಸಿಲುಕಿದ್ದರು. ತಮ್ಮ ಮೆಂಟರ್ ರಾಜೂ ಕರಿಯಾ ಅವರ ಮಗಳು ಸೋನಾಲ್ ಕರಿಯಾರನ್ನು 2003ರಲ್ಲಿ ಮದುವೆಯಾಗಿದ್ದ ಇಂದರ್, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಅವರಿಂದ ಬೇರ್ಪಟ್ಟಿದ್ದರು. ನಂತರ ಇಶಾ ಕೊಪ್ಪಿಕರ್ ಜತೆ ಡೇಟಿಂಗ್ ನಡೆಸಿದ್ದರು. 2009ರಲ್ಲಿ ಕಮಲ್ಜೀತ್ ಕೌರ್ ಅವರನ್ನು ಮದುವೆಯಾಗಿ ಎರಡೇ ತಿಂಗಳಲ್ಲಿ ಬೇರ್ಪಟ್ಟಿದ್ದರು. 2013ರಲ್ಲಿ ಪಲ್ಲವಿ ಶರಫ್ ಅವರನ್ನು ಮದುವೆಯಾಗಿದ್ದರು. 2014ರಲ್ಲಿ ಅವರಿಗೆ ಮಗಳು ಜನಿಸಿದ್ದಳು.

ಅತ್ಯಾಚಾರ ಆರೋಪ ಪ್ರಕರಣ
2014ರಲ್ಲಿ 22 ವರ್ಷ ರೂಪದರ್ಶಿಯೊಬ್ಬರು ಇಂದರ್ ಕುಮಾರ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದರು. ಆಗ ಪಲ್ಲವಿ ಪತಿಯ ಬೆಂಬಲಕ್ಕೆ ಬಂದಿದ್ದರು. ನಂತರ ಇಂದರ್ ಕುಮಾರ್ ಜಾಮೀನು ಪಡೆದುಕೊಂಡಿದ್ದರು. ಅಂದಿನಿಂದ ಬಾಲಿವುಡ್ನಲ್ಲಿದ್ದ ಅವರ ಆಪ್ತರು ಅವರಿಂದ ಅಂತರ ಕಾಪಾಡಿಕೊಂಡಿದ್ದರು.


Click it and Unblock the Notifications











