ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಭಾರತೀಯರು
ವಿಶ್ವದ ಪ್ರಮುಖ ಚಿತ್ರೋತ್ಸವಗಳಲ್ಲಿ ಒಂದಾದ ಕಾನ್ ಚಿತ್ರೋತ್ಸವ ನಿನ್ನೆಯಷ್ಟೆ ಫ್ರಾನ್ಸ್ನ ಕಾನ್ ನಗರದಲ್ಲಿ ಆರಂಭಗೊಂಡಿದೆ. ಭಾರತಕ್ಕೆ ಕಾನ್ ಚಿತ್ರೋತ್ಸವದಲ್ಲಿ ವಿಶೇಷ ಗೌರವ ದೊರಕಲಿದೆ (ಕಂಟ್ರಿ ಆಫ್ ಹಾನರ್).
ಭಾರತದಿಂದ ಹಲವು ನಟ-ನಟಿ ತಂತ್ರಜ್ಞರು ಕಾನ್ಗೆ ವಿಶೇಷ ಆಹ್ವಾನಿತರಾಗಿ ಹೋಗಿದ್ದಾರೆ. ನಟ ನಟಿರು ಮಾತ್ರವೆ ಅಲ್ಲದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಹ ಭಾರತವನ್ನು ಪ್ರತಿನಿಧಿಸಿದ್ದಾರೆ.
ನಿನ್ನೆ ಭಾರತದ ನಿಯೋಗವು ಕಾನ್ ರೆಡ್ ಕಾರ್ಪೆಟ್ ಮೇಲೆ ಒಟ್ಟಾಗಿ ಹೆಜ್ಜೆ ಹಾಕಿತು. ಭಾರತದ ನಿಯೋಗದ ನೇತೃತ್ವವನ್ನು ಸಚಿವ ಅನುರಾಗ್ ಠಾಕೂರ್ ವಹಿಸಿದ್ದರು. ಜನಪದ ಗಾಯಕ ಮೆಮೆ ಖಾನ್, ಗೀತ ರಚನೆಕಾರ, ಸಿಬಿಎಫ್ಸಿ ಅಧ್ಯಕ್ಷ ಪ್ರಸೂನ್ ಜೋಷಿ, ಸ್ಟಾರ್ ಸಂಗೀತಗಾರ ಎಆರ್ ರೆಹಮಾನ್, ಗ್ರಾಮಿ ವಿಜೇತ ಬೆಂಗಳೂರಿಗ ರಿಕ್ಕಿ ಕೇಜ್, ತಮಿಳು ಸ್ಟಾರ್ ನಟ, ನಿರ್ದೇಶಕ ಆರ್ ಮಾಧವನ್, ಬಾಲಿವುಡ್ನ ಜನಪ್ರಿಯ ನಟ ನವಾಜುದ್ದೀನ್ ಸಿದ್ಧಿಕಿ. ನಟಿ ಪೂಜಾ ಹೆಗ್ಡೆ, ಸಿಬಿಎಫ್ಸಿ ಸದಸ್ಯೆ ವಾಣಿ ತ್ರಿಪಾಠಿ, ನಿರ್ದೇಶಕ ಶೇಖರ್ ಕಪೂರ್, ನಟಿ ತಮನ್ನಾ ಭಾಟಿಯಾ ಅವರುಗಳು ಒಟ್ಟಾಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಒಗ್ಗಟ್ಟು ಪ್ರದರ್ಶಿಸಿದರು.

ನಟಿ ದೀಪಿಕಾ ಪಡುಕೋಣೆ ಸಹ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಆದರೆ ಅವರು ಚಿತ್ರೋತ್ಸವದ ಜ್ಯೂರಿ (ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆ) ಆಗಿರುವ ಕಾರಣ ಜ್ಯೂರಿಗಳೊಟ್ಟಿಗೆ ಹೆಜ್ಜೆ ಹಾಕಿದರು. ನಂತರ ಸುದ್ದಿಗೋಷ್ಠಿಯಲ್ಲಿಯೂ ವಿಶ್ವ ಸಿನಿಮಾದ ಬಗ್ಗೆ, ಭಾರತೀಯ ಸಿನಿಮಾದ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.
ಸಿನಿಮೋತ್ಸವದಲ್ಲಿ ಅಮೆರಿಕದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಮೋಷನ್ ಪಿಕ್ಚರ್ಸ್ನ ಸಿಇಒ ಎಚ್ ರಿವ್ಕಿನ್ ಅನ್ನು ಸಚಿವ ಅನುರಾಗ್ ಠಾಕೂರ್ ಭೇಟಿಯಾಗಿ ವಿಶೇಷ ಮಾತುಕತೆ ನಡೆಸಿದರು.

ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಊರ್ವಶಿ ರೌಟೆಲ್ಲ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಅವರು ತೊಟ್ಟಿದ್ದ ದೊಡ್ಡ ಗಾತ್ರದ ಬಿಳಿ ಬಣ್ಣದ ಉಡುಗೆ ಎಲ್ಲರ ಗಮನ ಸೆಳೆಯಿತು. ನಟಿ ದೀಪಿಕಾ ಪಡುಕೋಣೆ ಕಪ್ಪು ಬಣ್ಣದ, ಬಂಗಾರದ ಬಣ್ಣದ ಡಿಸೈನ್ ಹೊಂದಿದ್ದ ಸೀರೆ ಉಟ್ಟು ಗಮನ ಸೆಳೆದರು. ಇನ್ನೂ ಹಲವು ನಟಿಯರು ಹಲವು ರೀತಿಯ ಉಡುಗೆಗಳನ್ನು ತೊಟ್ಟು ಗಮನ ಸೆಳೆದರು.


Click it and Unblock the Notifications











