ಸಂಜಯ್ ದತ್ ಮಾಡಿದ್ದ ಸಹಾಯ ನೆನಪಿಸಿಕೊಂಡ ಇರ್ಫಾನ್ ಖಾನ್ ಪುತ್ರ
ಪ್ರತಿಭಾವಂತ ನಟ ಇರ್ಫಾನ್ ಖಾನ್ ನಿಧನ ಹೊಂದಿ ನಾಲ್ಕು ತಿಂಗಳಾಗುತ್ತಾ ಬಂತು. ಅಪರೂಪದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಅವರು ಏಪ್ರಿಲ್ 29 ರಂದು ಅಸುನೀಗಿದರು. ತಮ್ಮ ಪ್ರತಿಭೆಯಿಂದ ಇರ್ಫಾನ್ ಖಾನ್ ಬಾಲಿವುಡ್ ಹಾಗೂ ಹಾಲಿವುಡ್ನಲ್ಲಿ ಬಹುದೊಡ್ಡ ಹೆಸರುಗಳಿಸಿದ್ದರು. ಬಾಲಿವುಡ್ನಲ್ಲಿ ಹಲವು ಸ್ಟಾರ್ ನಟರ ಅತ್ಯಾಪ್ತ ಗೆಳೆಯರಾಗಿದ್ದರು.
Recommended Video
ಇರ್ಫಾನ್ ಖಾನ್ ನಿಧನದ ನಂತರ ಮರುದಿನವೇ ರಿಶಿ ಕಪೂರ್ ಅಸುನೀಗಿದರು. ಆ ನಂತರ ಸುಶಾಂತ್ ಸಿಂಗ್ ರಜಪೂತ್ ಕನ್ನಡದ ಚಿರಂಜೀವಿ ಸರ್ಜಾ ಹೀಗೆ ಹಲವು ಸಿನಿಮಾ ಗಣ್ಯರು ಈ 2020 ವರ್ಷದಲ್ಲಿ ಅಸುನೀಗಿದ್ದಾರೆ. ಇದೀಗ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಇರುವುದು ತಿಳಿದುಬಂದಿದೆ. ಈ ಸಮಯದಲ್ಲಿ ಇರ್ಫಾನ್ ಖಾನ್ ಪುತ್ರ ಬಾಬಿಲ್ ಸಂಜಯ್ ದತ್ ಬಗ್ಗೆ ಕೆಲವು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಗೊತ್ತಾಗುತ್ತಿದ್ದಂತೆ ಮಾಧ್ಯಮಗಳು ಸಂಜಯ್ ದತ್ ಅವರನ್ನು ಸುತ್ತುವರೆದಿದ್ದು, 24 * 7 ಕ್ಯಾಮೆರಾ ಹಿಡಿದು ಸಂಜಯ್ ದತ್ ಮನೆ, ಆಸ್ಪತ್ರೆಗಳ ಮುಂದೆ ಹಾಜರಾಗಿವೆ. ಇದನ್ನು ಖಂಡಿಸಿ ಬಾಬಿಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಮೊದಲು ಸಹಾಯ ಹಸ್ತ ಚಾಚಿದ್ದು ಸಂಜಯ್ ದತ್: ಬಾಬಿಲ್
'ನನ್ನ ತಂದೆ ಇರ್ಫಾನ್ ಖಾನ್ ತೀರಿಕೊಂಡಾಗ ಮೊದಲಿಗೆ ಸಹಾಯ ಮಾಡಲು ಮುಂದೆ ಬಂದಿದ್ದು ಸಂಜಯ್ ದತ್. ಅಷ್ಟೆ ಅಲ್ಲ ಅಪ್ಪನಿಗೆ ಕ್ಯಾನ್ಸರ್ ಆಗಿದೆಯೆಂದು ಗೊತ್ತಾದಾಗ ಸಹ ಅವರೇ ಮೊದಲಿಗೆ ಸಹಾಯ ನೀಡಲು ಮುಂದೆ ಬಂದಿದ್ದರು' ಎಂದಿದ್ದಾರೆ ಬಾಬಿಲ್.

ಸಂಜಯ್ ದತ್ ಗೆದ್ದು ಬರುತ್ತಾರೆ: ಬಾಬಿಲ್
ಇದೀಗ ಸಂಜಯ್ ದತ್, ಕ್ಯಾನ್ಸರ್ ನೊಂದಿಗೆ ಸೆಣಸಾಡುತ್ತಿದ್ದಾರೆ. ಅವರು ಹುಲಿಯಂತೆ, ಅವರು ಖಂಡಿತವಾಗಿ ಕ್ಯಾನ್ಸರ್ಗೆ ಸರಿಯಾದ ಪೆಟ್ಟುಕೊಟ್ಟು ಗೆದ್ದು ಬರುತ್ತಾರೆ. ಆದರೆ ಅವರ ಪಾಡಿಗೆ ಸೆಣೆಸಾಡಲು ಬಿಟ್ಟುಬಿಡಿ ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ ಇರ್ಫಾನ್ ಖಾನ್ ಪುತ್ರ ಬಾಬಿಲ್.

ಮಾಧ್ಯಮದವರಲ್ಲಿ ಬಾಬಿಲ್ ಮನವಿ
'ಮಾಧ್ಯಮದವರಲ್ಲಿ ನಾನು ಮನವಿ ಮಾಡುತ್ತೇನೆ ಸಂಜಯ್ ದತ್ ಅವರನ್ನು ಅವರ ಪಾಡಿಗೆ ಇರಲು ಬಿಡಿ. ನನಗೆ ಗೊತ್ತು ಇದು ನಿಮ್ಮ ಕೆಲಸ ಆದರೆ ಇದು ಅವರ ಜೀವನ. ಈ ಸಮಯದಲ್ಲಿ ಅವರಿಗೆ ಅವರದ್ದೇ ಆದ ಸಮಯದ ಅವಶ್ಯಕತೆ ಇದೆ' ಎಂದು ಬಾಬಿಲ್ ಹೇಳಿದ್ದಾರೆ.

ಪ್ರಾಥಮಿಕ ಚಿಕಿತ್ಸೆ ಮುಂಬೈನಲ್ಲೇ
ಸಂಜಯ್ ದತ್ ಪತ್ನಿ ಮಾನ್ವಿತಾ ಹೇಳಿರುವಂತೆ, 'ಸಂಜಯ್ ದತ್, ಕ್ಯಾನ್ಸರ್ನ ಪ್ರಾಥಮಿಕ ಚಿಕಿತ್ಸೆಯನ್ನು ಕೋಕಿಲಾಬೇನ್ ಆಸ್ಪತ್ರೆಯಲ್ಲಿಯೇ ತೆಗೆದುಕೊಳ್ಳಲಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗುವ ಬಗ್ಗೆ ಕೊರೊನಾ ಪರಿಸ್ಥಿತಿಯನ್ನು ಗಮನಿಸಿ ನಿರ್ಧರಿಸಲಾಗುವುದು' ಎಂದಿದ್ದಾರೆ.


Click it and Unblock the Notifications











