Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರಗ್ಸ್ ಪ್ರಕರಣ: ನಟರನ್ನಷ್ಟೆ ಟಾರ್ಗೆಟ್ ಮಾಡುತ್ತಿದೆಯೇ ಎನ್ಸಿಬಿ?
ಕಳೆದೊಂದು ವರ್ಷದಿಂದ ಡ್ರಗ್ಸ್ ಪ್ರಕರಣ ಬಹುವಾಗಿ ಸದ್ದು ಮಾಡುತ್ತಿದೆ. ಅದರಲ್ಲೂ ಸಿನಿಮಾ ನಟರುಗಳಷ್ಟೆ ಡ್ರಗ್ಸ್ ಪ್ರಕರಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿ ಚಿತ್ರರಂಗ, ಕನ್ನಡ ಚಿತ್ರರಂಗ, ತೆಲುಗು ಇನ್ನಿತರೆ ಚಿತ್ರರಂಗದ ನಟ-ನಟಿಯರನ್ನು ಎನ್ಸಿಬಿ ವಿಚಾರಣೆ ಮಾಡಿದೆ ಕೆಲವರನ್ನು ಬಂಧಿಸಿದೆ ಸಹ.
ನಟ-ನಟಿಯರು ಬಿಟ್ಟರೆ ಇನ್ಯಾರೂ ಡ್ರಗ್ಸ್ ಸೇವಿಸುತ್ತಲೇ ಇಲ್ಲವೆ, ಚಿತ್ರರಂಗದಲ್ಲಿಯಷ್ಟೆ ಡ್ರಗ್ಸ್ ಅವ್ಯಾಹತವಾಗಿಯೇ, ಬೇರೆ ಉದ್ಯಮಗಳಲ್ಲಿ, ರಾಜಕಾರಣದಲ್ಲಿ ಡ್ರಗ್ಸ್ ಇರುವಿಕೆ ಶೂನ್ಯವೇ? ಎಂಬಿತ್ಯಾದಿ ಪ್ರಶ್ನೆಗಳು ಸಹಜ.
ಡ್ರಗ್ಸ್ ಪ್ರಕರಣದಲ್ಲಿ ಕಳೆದೊಂದು ವರ್ಷದಿಂದ ಅತಿ ಸಕ್ರಿಯವಾಗಿರುವ ಎನ್ಸಿಬಿ ಕೇವಲ ನಟ-ನಟಿಯರನ್ನಷ್ಟೆ ಗುರಿಯಾಗಿಸಿಕೊಂಡು ಕಾರ್ಯಾಚರಣೆಗಳನ್ನು ಮಾಡುತ್ತಿದೆಯೇ ಎಂಬ ಅನುಮಾನವೂ ಮೂಡದೇ ಇರದು. ಈ ಪ್ರಶ್ನೆಗಳಿಗೆ ಎನ್ಸಿಬಿಯ ಉನ್ನತ ಅಧಿಕಾರಿಯೊಬ್ಬರು ಉತ್ತರ ನೀಡಿದ್ದಾರೆ.
ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊನ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮಾತನಾಡಿ, ''ಮಾಧ್ಯಮಗಳು ಈಗ ಆರ್ಯನ್ ಖಾನ್ ಪ್ರಕರಣವನ್ನು ಹೈಲೆಟ್ ಮಾಡುತ್ತಿವೆ. ಆದರೆ ಕಳೆದ ವಾರವಷ್ಟೆ ನಾವು 5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡೆವು, ಅದಕ್ಕೂ ಹಿಂದೆ ಮಾಫಿಯಾಕ್ಕೆ ಸಂಬಂಧಿಸಿದ 6 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡೆವು ಇದರ ಬಗ್ಗೆ ದೇಶದ ಒಂದೇ ಒಂದು ಮಾಧ್ಯಮ ಸಹ ವರದಿ ಮಾಡಲಿಲ್ಲ'' ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹತ್ತು ತಿಂಗಳಲ್ಲಿ 310 ಮಂದಿ ಬಂಧನ
''ಕಳೆದ ಹತ್ತು ತಿಂಗಳಲ್ಲಿ ಎನ್ಸಿಬಿಯು 310 ಮಂದಿಯನ್ನು ಬಂಧಿಸಿದೆ. ಅವರೆಲ್ಲರೂ ಸೆಲೆಬ್ರಿಟಿಗಳೇನೂ ಅಲ್ಲ. ಸೆಲೆಬ್ರಿಟಿಗಳನ್ನು ಬಂಧಿಸಿದಾಗಷ್ಟೆ ಹೆಡ್ಲೈನ್ ಆಗುತ್ತದೆ. ಈ ಹತ್ತು ತಿಂಗಳಲ್ಲಿ 150 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದೇವೆ. ಜನಪ್ರಿಯ ವ್ಯಕ್ತಿಗಳನ್ನು ಬಂಧಿಸಿದಾಗಷ್ಟೆ ಮಾಧ್ಯಮಗಳು ವರದಿ ಮಾಡುತ್ತವೆ ಹಾಗಾಗಿ ನಾವು ಕೇವಲ ಜನಪ್ರಿಯ ವ್ಯಕ್ತಿಗಳನ್ನಷ್ಟೆ ಬಂಧಿಸುತ್ತಿದ್ದೇವೆ ಎಂಬ ಸಂದೇಶ ಹೋಗುತ್ತಿದೆ. ನಮ್ಮ ಶ್ರಮವನ್ನು ಅಭಿನಂದಿಸುವ ಬದಲು ಅನುಮಾನದಿಂದ ನೋಡುವಂತಾಗಿದೆ'' ಎಂದಿದ್ದಾರೆ ಸಮಿರ್ ವಾಂಖೆಡೆ.
ಸುಶಾಂತ್ ಪ್ರಕರಣದಲ್ಲಿ 90 ಮಂದಿಯ ಬಂಧನ!
ಸುಶಾಂತ್ ಸಿಂಗ್ ಸಾವಿನ ಬಳಿಕ ಆ ಪ್ರಕರಣವೊಂದರಲ್ಲೇ ಸುಮಾರು 90 ಮಂದಿಯನ್ನು ಬಂಧಿಸಿರುವುದಾಗಿ ಸಮೀರ್ ವಾಂಖೆಡೆ ಹೇಳಿದ್ದಾರೆ. ಎನ್ಸಿಬಿಯು ಕೇವಲ ಬಾಲಿವುಡ್ ನಟ-ನಟಿಯರನ್ನು ಟಾರ್ಗೆಟ್ ಮಾಡುತ್ತದೆ ಎಂಬ ಆರೋಪ ಹುರುಳಿಲ್ಲದ್ದು, ಸತ್ಯಕ್ಕೆ ದೂರ ಎಂದು ಅವರು ಹೇಳಿದ್ದಾರೆ. ಯಾವುದಾದರೊಂದು ಪ್ರಕರಣದಲ್ಲಿ ಸೆಲೆಬ್ರಿಟಿಯ ಬಂಧನವಾದರೆ ಅದರ ಲಿಂಕ್ ಇನ್ನೊಬ್ಬ ಸೆಲೆಬ್ರಿಟಿಯ ಬಳಿ ಕರೆದುಕೊಂಡು ಹೋಗುತ್ತದೆ ಅದು ಸಾಮಾನ್ಯ ಎಂದು ಸಹ ಅವರು ಹೇಳಿದ್ದಾರೆ.
ಹಲವು ಸ್ಟಾರ್ ನಟ-ನಟಿಯರ ವಿಚಾರಣೆ ನಡೆಸಿರುವ ಎನ್ಸಿಬಿ
2020 ರಲ್ಲಿ ಸುಶಾಂತ್ ಸಿಂಗ್ ಸಾವಿನ ಬಳಿಕ ನಡೆದ ತನಿಖೆ ವೇಳೆ ಬಾಲಿವುಡ್ನ ಡ್ರಗ್ಸ್ ಪ್ರಕರಣ ಹೊರಗೆ ಬಿತ್ತು. ಆಗಿನಿಂದಲೂ ಎನ್ಸಿಬಿ ಹಲವು ಸೆಲೆಬ್ರಿಟಿಗಳನ್ನು ಬಂಧಿಸುತ್ತಿದೆ ವಿಚಾರಣೆಯನ್ನೂ ನಡೆಸುತ್ತಲೇ ಇದೆ. ನಟಿ ರಿಯಾ ಚಕ್ರವರ್ತಿ ಸೇರಿದಂತೆ ಬಾಲಿವುಡ್ಗೆ ಸಂಬಂಧಿಸಿದ ಹಲವು ವ್ಯಕ್ತಿಗಳನ್ನು ಎನ್ಸಿಬಿ ಡ್ರಗ್ಸ್ ಪ್ರಕರಣದಲ್ಲಿ ಈವರೆಗೆ ಬಂಧಿಸಿದೆ. ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ಅರ್ಜುನ್ ರಾಮ್ಪಾಲ್, ಕರಣ್ ಜೋಹರ್ ಇನ್ನೂ ಹಲವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ವಿಚಾರಣೆ ನಡೆಸಿದೆ. ಕೆಲವು ದಿನಗಳ ಹಿಂದಷ್ಟೆ ತೆಲುಗು ಸಿನಿಮಾ ಉದ್ಯಮದ ಕೆಲವು ನಟ-ನಿರ್ದೇಶಕ, ನಟಿಯರನ್ನು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಮರು ವಿಚಾರಣೆ ನಡೆಸಿತ್ತು.
ಕನ್ನಡ ಚಿತ್ರರಂಗದಲ್ಲೂ ನಟಿಯರ ಬಂಧನ
ಕನ್ನಡ ಚಿತ್ರರಂಗದಲ್ಲಿಯೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ, ನಟಿ ಸಂಜನಾ ಗಲ್ರಾನಿ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ರಾಗಿಣಿ ಹಾಗೂ ಸಂಜನಾ ಇಬ್ಬರೂ ಜಾಮೀನಿನ ಮೇಲೆ ಪ್ರಸ್ತುತ ಹೊರಗೆ ಇದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೂಸ್ ಮಾದ ಯೋಗಿ, ದಿಗಂತ್, ಐಂದ್ರಿತಾ ರೇ, ನಟಿ ನಿರೂಪಕಿ ಅನುಶ್ರೀ ಇನ್ನೂ ಹಲವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.