ಸಲ್ಮಾನ್ ಖಾನ್ ಸಿಕಂದರ್ ಕದ್ದ ಮಾಲು ಎಂದವರಿಗೆ ಉತ್ತರ ನೀಡಿದ ಸ್ಟಾರ್ ಡೈರೆಕ್ಟರ್..!
ಹೇಳಿ ಕೇಳಿ ಇದು ಪ್ಯಾನ್ ಇಂಡಿಯಾ ಕಾಲ. ಭಾಷೆಯ ಭೇದ ಭಾವ ಇಲ್ಲದೇ ಎಲ್ಲರು ಎಲ್ಲ ಭಾಷೆಯ ಚಿತ್ರಗಳನ್ನು ಅವರ ಅವರ ಭಾಷೆಯಲ್ಲಿಯೇ ನೋಡುತ್ತಿದ್ದಾರೆ. ಇಂತಹ ಕಾಲದಲ್ಲಿ ರಿಮೇಕ್ ಚಿತ್ರಗಳಿಗೆ ಬೆಲೆ ಇಲ್ಲ. ಒಂದು ವೇಳೆ ಮಾಡಿದರೂ ಕೂಡ ಪ್ರೇಕ್ಷಕರು ಆ ಚಿತ್ರವನ್ನು ನೋಡುವ ಮನಸು ಮಾಡುವುದಿಲ್ಲ.
ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದೊಂದು ಎರಡು ವರ್ಷದಲ್ಲಿ ಕೆಲ ಚಿತ್ರಗಳು ರಿಮೇಕ್ ಆಗಿವೆ. ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿವೆ. ಆದರೂ ಕೂಡ ಕೆಲವರು ಇನ್ನು ಈ ವಿಚಾರವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ರಿಮೇಕ್ ಚಿತ್ರಗಳನ್ನು ನೋಡುವ ಒಂದು ವರ್ಗ ಇವತ್ತು ಇದೆ ಎನ್ನುವ ವಾದವನ್ನು ಮಾಡುತ್ತಲೇ ರೀಲ್ಗಳನ್ನು ಸುತ್ತುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರ ಕೂಡ ಇದೇ ಸಾಲಿಗೆ ಸೇರಿದ ಚಿತ್ರ ಎನ್ನುವ ಅನುಮಾನ ಅನೇಕರಲ್ಲಿದೆ. ಇದಕ್ಕೆ ಪೂರಕವಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಅಭಿನಯದ ಸರ್ಕಾರ್ ಚಿತ್ರದ ಯಥಾವತ್ತು ನಕಲು ಎಂಬ ಚರ್ಚೆ ಕೂಡ ನಡೆದಿದೆ. ಇದಕ್ಕೆ ಈಗ ಖುದ್ದು ಚಿತ್ರದ ನಿರ್ದೇಶಕ ಎ.ಆರ್.ಮುರಗದಾಸ್ ಉತ್ತರವನ್ನು ನೀಡಿದ್ದಾರೆ.

ಹೌದು, ಚಿತ್ರದ ಬಿಡುಗಡೆಗೆ ಇನ್ನೇನು ಕೆಲ ದಿನ ಬಾಕಿ ಇರುವ ಹಿನ್ನೆಲೆ ಊಹಾಪೋಹಗಳಿಗೆ ಉತ್ತರವನ್ನು ನೀಡಿರುವ ಎ.ಆರ್.ಮುರಗದಾಸ್ ಸಿಕಂದರ್ ರಿಮೇಕ್ ಅಲ್ಲ ಬದಲಿಗೆ ಸ್ವಮೇಕ್ ಎಂದು ಉತ್ತರವನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಮುರಗದಾಸ್ ಸಿಕಂದರ್ ಚಿತ್ರಕ್ಕೂ ಮತ್ತು ಸರ್ಕಾರ್ ಚಿತ್ರಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ನಾನು ಸ್ವತಃ ತಲೆ ಕೆಡಿಸಿಕೊಂಡು ಬರೆದಿರುವ ಕಮರ್ಷಿಯಲ್ ಚಿತ್ರ ಇದು ಎಂದು ಕೂಡ ಹೇಳಿದ್ದಾರೆ. ಇನ್ನು ಸಿಕಂದರ್ ಚಿತ್ರದ ಟೀಸರ್ನಲ್ಲಿನ ಸಾಹಸ ಸನ್ನಿವೇಶ ಅನೇಕರಿಗೆ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರವನ್ನು ನೆನಪಿಸಿತ್ತು. ಈ ಕುರಿತು ಕೂಡ ಸ್ಪಷ್ಟನೆಯನ್ನು ನೀಡಿರುವ ಎ.ಆರ್.ಮುರಗದಾಸ್ ಸಲಾರ್ ನೆರಳು ಕೂಡ ಇದರಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ ಏಳು ವರ್ಷಗಳ ಹಿಂದೆ ತಮಿಳಿನಲ್ಲಿ ತೆರೆಗೆ ಬಂದಿದ್ದ ಸರ್ಕಾರ್ ಚಿತ್ರಕ್ಕೆ ಇದೇ ಎ.ಆರ್.ಮುರುಗದಾಸ್ ನಿರ್ದೇಶನ ಇತ್ತು. ಆ ಕಾಲದಲ್ಲಿ ಖ್ಯಾತಿಯ ತುತ್ತ ತುದಿಯಲ್ಲಿದ್ದ ಮುರಗದಾಸ್ಗೆ ಈ ಚಿತ್ರ ಕೂಡ ಭರ್ಜರಿ ಗೆಲುವನ್ನು ಕೊಟ್ಟಿತ್ತು. ಇಳಯ ದಳಪತಿ ಎಂದೆ ಕರೆಯಲ್ಪಡುವ ವಿಜಯ್ ಈ ಚಿತ್ರದ ನಾಯಕನಾಗಿದ್ದರೆ ಕೀರ್ತಿ ಸುರೇಶ್ ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ತಮ್ಮ ಈ ಕಥೆಗೆ ಈಗ ಇನ್ನೂ ಸ್ವಲ್ಪ ಮಸಾಲೆ ಬೆರೆಸಿ ಸಲ್ಮಾನ್ ಖಾನ್ ಅವರ ಇಮೇಜ್ಗೆ ತಕ್ಕಂತೆ ಮುರಗದಾಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ ಎನ್ನುವ ಮಾತು ಚಿತ್ರದ ಫಸ್ಟ್ ಮತ್ತು ಟೀಸರ್ಗಳು ಹೊರ ಬಂದಾಗ ಕೇಳಿ ಬಂದಿತ್ತು.
ಆದರೆ ಈಗ ಖುದ್ದು ಎ.ಆರ್.ಮುರಗದಾಸ್ ಸಿಕಂದರ್ ಮತ್ತು ಸರ್ಕಾರ್ ಎರಡು ಭಿನ್ನವಾದ ಚಿತ್ರಗಳು ಎಂದಿದ್ದಾರೆ. ಈ ಹಿನ್ನೆಲೆ ಕುತೂಹಲ ಗರಿಗೇದರಿದೆ. ಇದೇ ಸಮಯದಲ್ಲಿ ಚಿತ್ರದ ಗುಟ್ಟು ರಟ್ಟಾಗಿ ಚಿತ್ರದ ಗಳಿಕೆಗೆ ಹೊಡೆತ ಬೀಳಬಹುದು ಎಂಬ ಉದ್ದೇಶದಿಂದ ಮುರುಗದಾಸ್ ಸುಳ್ಳು ಹೇಳುತ್ತಿರಬಹುದು ಎನ್ನುವ ಗುಮಾನಿ ಕೂಡ ಅನೇಕರನ್ನು ಸದ್ಯ ಕಾಡುತ್ತಿದೆ.
ಇನ್ನುಳಿದಂತೆ ಈದ್ ಸಂಭ್ರಮದಲ್ಲಿ 'ಸಿಕಂದರ್' ಸಿನಿಮಾ ತೆರೆಗೆ ಬರಲಿದೆ. ಈದ್ ವಿಶೇಷವಾಗಿ ತೆರೆಗೆ ಬರುವ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿವೆ. ಹಾಗಾಗಿ ಪ್ರತಿವರ್ಷ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಲು ಸಲ್ಲು ಪ್ರಯತ್ನಿಸುತ್ತಾರೆ. ಮಾರ್ಚ್ 28ಕ್ಕೆ ಸಿನಿಮಾ ತೆರೆಗೆ ಬರಲಿದೆ. ಅವತ್ತೇ ಈ ಚಿತ್ರದ ನಿಜವಾದ ಬಂಡವಾಳ ಗೊತ್ತಾಗಲಿದೆ.


Click it and Unblock the Notifications











