ಚಿತ್ರ ನಿರ್ಮಾಣ ಮಾಡಿ ಕೈ ಸುಟ್ಕೊಂಡ ನಿರ್ಮಾಪಕ,ಸಾಲದ ಸುಳಿಯಲ್ಲಿ ಸಿಲುಕಿ ಆಸ್ತಿ ಅಡ ಇಟ್ಟ ಖ್ಯಾತ ನಟಿಯ ಗಂಡ..!
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ,
ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು ಇಂತಹ ಚಿತ್ರರಂಗದಲ್ಲಿ ನಿರ್ಮಾಪಕರ ಕಥೆ ಮತ್ತು ವ್ಯಥೆ ಆ ದೇವರಿಗೆ ಪ್ರೀತಿ. ಇದಕ್ಕೆ ಜಾಕಿ ಭಗ್ನಾನಿ ಹೇಳಿದ ಕಥೆ ಸದ್ಯದ ಮತ್ತೊಂದು ಉದಾಹರಣೆ.

ಹೌದು, ಜಾಕಿ ಭಗ್ನಾನಿ.. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ರಕುಲ್ ಪ್ರೀತ್ ಸಿಂಗ್ ಅವರ ಗಂಡ. ಕಳೆದ ವರ್ಷ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ಬಡೇ ಮಿಯಾ ಚೋಟೆ ಮಿಯಾ ಎಂಬ ಚಿತ್ರ ತೆರೆಗೆ ಬಂದಿತ್ತಲ್ಲಾ ? ಆ ಚಿತ್ರದ ನಿರ್ಮಾಪಕ. ಈ ಚಿತ್ರಕ್ಕೆ ಹೆಚ್ಚು ಕಡಿಮೆ 400 ಕೋಟಿ ಹಣವನ್ನು ಜಾಕಿ ಭಗ್ನಾನಿ ನೀರಿನಂತೆ ಸುರಿದಿದ್ದರು.
ಆದರೆ, ದುರಾದೃಷ್ಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರಂತಹ ಸ್ಟಾರ್ಗಳು ಚಿತ್ರದಲ್ಲಿದ್ದರು ಕೂಡ ಹಾಕಿದ ಬಂಡವಾಳದಲ್ಲಿ ಅರ್ಧ ಕೂಡ ಹಣ ಮರಳಿ ಬರಲಿಲ್ಲ. ಇದರಿಂದ ಸಹಜವಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಜಾಕಿ ಮತ್ತು ಅವರ ತಂದೆ ವಾಶು ಭಗ್ನಾನಿ ತಮ್ಮ 07 ಅಂತಸ್ತಿನ ಬಿಲ್ಡಿಂಗ್ ಮಾರಿದರು. ನೋವನ್ನು ಅನುಭವಿಸುವುದಲ್ಲದೇ ಬಾಲಿವುಡ್ನಲ್ಲಿ ಅವಮಾನಕ್ಕೀಡಾದರು.
ಹೋಗಲಿ ಕೊನೆ ಪಕ್ಷ ಇವರನ್ನು ನಷ್ಟದ ಕೂಪಕ್ಕೆ ತಳ್ಳಿದ ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ತನ್ನ ಅನ್ನದಾತರಿಗೆ ನೆರವಾದ್ರಾ ಅಂದರೆ ಅದು ಇಲ್ಲ. ಬದಲಿಗೆ ಸಂಭಾವನೆಯ ಬಾಕಿ ಹಣ ನೀಡುವಂತೆ ನಿರ್ಮಾಪಕ ವಾಶು ಭಗ್ನಾನಿ ಅವರ ದುಂಬಾಲು ಬಿದ್ದರು. ನಿರ್ಮಾಪಕರು ನನಗೆ ಇನ್ನೂ 07.30 ಕೋಟಿ ಹಣವನ್ನು ನೀಡಬೇಕೆಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಎಂಪ್ಲಾಯೀಸ್ (FWICE) ಗೆ ದೂರು ಸಲ್ಲಿಸಿದ್ದರು.
ಇದೀಗ ಈ ಎಲ್ಲ ವಿಚಾರಗಳ ಕುರಿತು ಜಾಕಿ ಭಗ್ನಾನಿ ಮಾತನಾಡಿದ್ದಾರೆ. ತಮ್ಮ ಮನದ ನೋವು ಹಂಚಿಕೊಂಡಿದ್ದಾರೆ. ಈ ಕುರಿತು ಸ್ಕ್ರೀನ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜಾಕಿ ಭಗ್ನಾನಿ ಆ ಚಿತ್ರಕ್ಕೆ ನಮ್ಮ ಆಸ್ತಿಯನ್ನೆಲ್ಲ ಅಡ ಇಡಬೇಕಾಯ್ತು ಎಂದು ಹೇಳಿದ್ದಾರೆ.
ಬಡೇ ಮಿಯಾ ಚೋಟೆ ಮಿಯಾ ಚಿತ್ರದ ಸೋಲಿನಿಂದ ನಾನು ನನ್ನ ಬದುಕಿನಲ್ಲಿ ಬಹುದೊಡ್ಡ ಪಾಠವನ್ನು ಕಲಿತೇ ಎಂದು ಹೇಳಿರುವ ರಕುಲ್ ಪ್ರೀತ್ ಅವರ ಗಂಡ ಜಾಕಿ ಕೆಲವೊಮ್ಮೆ ಹಣ ಹೂಡುವುದು ಮುಖ್ಯವಲ್ಲ ಪ್ರೇಕ್ಷಕರ ಹೃದಯಕ್ಕೆ ನಾಟುವಂತಹ ಚಿತ್ರ ಮಾಡುವುದು ಮುಖ್ಯ ಎಂದು ಹೇಳಿದ್ದಾರೆ.
ನಾವು ಮಾಡಿದ ಚಿತ್ರ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಲೇ ಇಲ್ಲ ಎಂದಿರುವ ಜಾಕಿ, ಪ್ರೇಕ್ಷಕರ ತೀರ್ಪು ಅಂತಿಮ ಎಂದು ಹೇಳಿದ್ದಾರೆ. ನಮ್ಮ ಸೋಲಿಗೆ ನಮ್ಮ ತಪ್ಪುಗಳಿಗೆ ಪ್ರೇಕ್ಷಕರನ್ನು ದೂಷಿಸುವುದು ತಪ್ಪು ಎಂದು ಹೇಳಿದ್ದಾರೆ. ಪ್ರೇಕ್ಷಕರ ತೀರ್ಪು ಯಾವಾಗಲೂ ಸರಿಯಾಗಿರುತ್ತದೆ. ನಾನು ಇದರಿಂದಲೂ ಕಲಿಯುತ್ತೇನೆ. ಪ್ರೇಕ್ಷಕರನ್ನು ನಾನು ದೂರುವುದಿಲ್ಲ ಎಂದಿರುವ ಜಾಕಿ ಇಂತಹ ತಪ್ಪುಗಳು ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕೂಡಾ ಹೇಳಿದ್ದಾರೆ.
ಮುಂದುವರೆದು ಈಗ ಅದೆಲ್ಲವೂ ಮಾತನಾಡುವುದು ಅರ್ಥಹೀನ ಎಂದಿರುವ ಜಾಕಿ, ನಿರ್ದೇಶಕರ ಹೆಸರನ್ನೇಳದೇ ನಾವು ಆ ವ್ಯಕ್ತಿಯ ಮೇಲೆ ತುಂಬಾ ನಂಬಿಕೆಯನ್ನಿಟ್ಟು ಚಿತ್ರವನ್ನು ನಿರ್ಮಾಣ ಮಾಡಿದ್ದೇವು, ಚಿತ್ರದ ವಿಚಾರದಲ್ಲಿ ರಾಜಿಯಾಗಬಾರದೆಂದು ಆಸ್ತಿಯನ್ನು ಕೂಡ ಅಡ ಇಟ್ಟೇವು ಆದರೆ ನಾವು ಹಾಕಿದ ಬಂಡವಾಳದಲ್ಲಿ ನಮಗೆ ಶೇಕಡಾ 50% ಹಣ ಕೂಡ ಮರಳಿ ಬರಲಿಲ್ಲ ಎಂದು ಬೇಸರವನ್ನು ಜಾಕಿ ಹೊರ ಹಾಕಿದ್ದಾರೆ.
ಅಂದ್ಹಾಗೇ ಜಾಕಿ ಭಗ್ನಾನಿ ಸಂದರ್ಶನ ನೀಡಿರುವ ಸ್ಕ್ರೀನ್ನಲ್ಲಿಯೇ ಉಲ್ಲೇಖವಾದಂತೆ ಬಡೇ ಮಿಯಾ ಚೋಟೆ ಮಿಯಾ ಚಿತ್ರಕ್ಕೆ 400 ಕೋಟಿ ಹಣವನ್ನು ಖರ್ಚು ಮಾಡಲಾಗಿತ್ತು. ಕಳೆದ ವರ್ಷ ತೆರೆಗೆ ಬಂದ ಚಿತ್ರ ಕೇವಲ 111 ಕೋಟಿಯನ್ನು ಮಾತ್ರ ಗಳಿಸಿತ್ತು. ಉಳಿದಂತೆ 250 ಕೋಟಿಗೂ ಅಧಿಕ ಹಣವನ್ನು ನಿರ್ಮಾಪಕರಾದ ಜಾಕಿ ಭಗ್ನಾನಿ ಮತ್ತು ಅವರ ತಂದೆ ವಾಶು ಭಗ್ನಾನಿ ಈ ಚಿತ್ರದಿಂದ ಕಳೆದುಕೊಂಡರು.


Click it and Unblock the Notifications











