ವಂಚನೆ ಪ್ರಕರಣ: ಇಡಿ ವಿಚಾರಣೆ ತಪ್ಪಿಸಿಕೊಂಡ್ರಾ 'ವಿಕ್ರಾಂತ್ ರೋಣ' ನಟಿ ಜಾಕ್ವೆಲಿನ್?
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಾಲಿವುಡ್ ಖ್ಯಾತ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಇಂದು (ಸೆಪ್ಟಂಬರ್ 25) ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಜಾಕ್ವೆಲಿನ್ ಇದುವರೆಗೂ ವಿಚಾರಣೆಗೆ ಹಾಜರಾಗದೆ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಇಂದು ಜಾಕ್ವೆಲಿನ್ ವಿಚಾರಣೆಗೆ ಗೈರಾದ್ರಾ ಎನ್ನುವ ಅನುಮಾನ ಮೂಡಿಸಿದೆ.
ಮೂಲಗಳ ಪ್ರಕಾರ ಜಾಕ್ವೆಲಿನ್ ಇಂದು ವಿಚಾರಣೆಯನ್ನು ಮುಂದೂಡುವಂತೆ ಇಡಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಜಾಕ್ವೆಲಿನ್ ಇಂದು ಮಧ್ಯಾಹ್ನ ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿತ್ತು. ಅಕ್ರಮ ಹಣ ವರ್ಗಾವಣೆ ಸಂಬಂಧ ಜಾಕ್ವೆಲಿನ್ ವಿಚಾರಣೆ ಎದುರಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಸುಕೇಶ್ ಚಂದ್ರಶೇಖರ್ ಗೆ ಸಂಬಂಧ ಪಟ್ಟ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಅವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿತ್ತು. ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದು, ಸೆಪ್ಟಂಬರ್ 25ರಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು.

ಈ ಹಿಂದೆ ಆಗಸ್ಟ್ ನಲ್ಲಿ ಜಾಕ್ವೆಲಿನ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಸುಮಾರು 6 ಗಂಟೆಗಳ ಕಾಲ ಜಾಕ್ವೆಲಿನ್ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಆದರೆ ನಟಿ ಜಾಕ್ವೆಲಿನ್ ಅವರಿಗೆ ಪ್ರಶ್ನೆಯನ್ನು ಪೂರ್ಣಗೊಳಿಸದ ಕಾರಣ ಮತ್ತೊಮೆ ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗಿದೆ. ಆದರೆ ಇಂದು ವಿಚಾರಣೆ ತಪ್ಪಿಸಿಕೊಂಡಿದ್ದಾರೆ.
ಸಕೇಶ್ ಚಂದ್ರಶೇಖರ್ ಯಾರು?
ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ಬಂಗಲೆಯಿಂದ 82.5 ಲಕ್ಷ ರೂಪಾಯಿ ಹಾಗೂ 12ಕ್ಕೂ ಹೆಚ್ಚು ಐಷಾರಾಮಿ ಕಾರನ್ನು ವಶಕ್ಕೆ ಪಡೆಯಲಾಗಿದೆ. ಸುಕೇಶ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ 17ನೇ ವಯಸ್ಸಿಗೆ ಈ ಕೆಲಸಕ್ಕೆ ಇಳಿದಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಸಿನಿಮಾ ಮೂಲಕ ಜಾಕ್ವೆಲಿನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಜಾಕ್ವೆಲಿನ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಸುದೀಪ್ ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜಾಕ್ವೆಲಿನ್ ಅವರನ್ನು ಸುದೀಪ್ ಜೊತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.


Click it and Unblock the Notifications











