ಗುರುತು ಪರಿಚಯವಿಲ್ಲದ ಸೌತ್ ಸ್ಟಾರ್ಗಳು ನಮ್ಮ ಜಾಗಕ್ಕೆ ಬಂದು ₹700ಕೋಟಿ ದೋಚಿಕೊಂಡು ಹೋಗ್ತಿದ್ದಾರೆ-ಜಾವೇದ್ ಅಖ್ತರ್!
ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ಮಂಕಾಗಿದೆ. ಅಲ್ಲಿನ ಸೂಪರ್ ಸ್ಟಾರ್ಗಳ ಚಿತ್ರಗಳೇ ಅಲ್ಲಿ ಓಡುತ್ತಿಲ್ಲ. ಶಾರುಖ್ ಖಾನ್ ಹೊರತು ಪಡಿಸಿ ಬೇರೆ ಯಾರು ಈ ಎರಡು ಮೂರು ವರ್ಷಗಳಲ್ಲಿ ಚಿನ್ನದ ಬೆಳೆ ಬೆಳೆದಿಲ್ಲ. ಕಳೆದ ವರ್ಷ ಭೂಲ್ ಭೂಲಯ್ಯ 3, ಸಿಂಗಂ ಅಗೇನ್, ಹೊರತು ಪಡಿಸಿದರೆ ಬೇರೆ ಯಾವ ಸ್ಟಾರ್ ಗಳ ಚಿತ್ರ ಗೆಲ್ಲಲಿಲ್ಲ.
ನಿಜಾ, ಕಳೆದ ವರ್ಷ ಸಣ್ಣ ಬಜೆಟ್ನಲ್ಲಿ ನಿರ್ಮಾಣವಾದ ಚಿತ್ರಗಳು ಹಿಂದಿ ಉದ್ಯಮದ ಕೈ ಹಿಡಿದಿವೆ. ಮುಂಜ್ಯಾ, ಸ್ತ್ರೀ 2 ಅಂತಹ ಚಿತ್ರಗಳು ಹಾಕಿದ ಬಂಡವಾಳದ ಮೇಲೆ ಭಾರೀ ಭಯಂಕರ ಲಾಭವನ್ನು
ಮಾಡಿವೆ. ಈ ವರ್ಷ ಛಾವಾ ಬಾಕ್ಸಾಫೀಸ್ನಲ್ಲಿ ಚಮತ್ಕಾರವನ್ನು ಮಾಡುತ್ತಿದೆ.

ಆದರೂ ಕೂಡ ಉತ್ತರ ಭಾರತದ ಪ್ರೇಕ್ಷಕರು ಮೊದಲಿನಂತೆ ಬಾಲಿವುಡ್ನ ತಲೆ ಮೇಲೆ ಹೊತ್ತು ಮೆರೆಸುತ್ತಿಲ್ಲ ಎನ್ನುವುದು ಅನೇಕರ ಅಭಿಪ್ರಾಯ. ಇದಕ್ಕೆ ಓಟಿಟಿ ಒಂದು ಕಾರಣವಾದರೆ ದಕ್ಷಿಣ ಭಾರತದ ಚಿತ್ರಗಳ ಅಬ್ಬರ ಮತ್ತೊಂದು ಕಾರಣ. ಉತ್ತರದ ಮಾರುಕಟ್ಟೆಯಲ್ಲಿ ಇವತ್ತು ಹಿಂದಿ ಚಿತ್ರಗಳಿಗಿಂತ ದಕ್ಷಿಣದ ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲಿಯೂ ಬಿಹಾರ್, ಉತ್ತರ ಪ್ರದೇಶ್, ಹರಿಯಾಣಾ, ಜಾರ್ಖಂಡ್ ಗಳಲ್ಲಿ ಅನೇಕರು ಯಶ್, ಅಲ್ಲು ಅರ್ಜುನ್, ಪ್ರಭಾಸ್ ಅವರ ಭಕ್ತರಾಗಿದ್ಧಾರೆ. ಖುದ್ದು ಬಾಲಿವುಡ್ ಸ್ಟಾರ್ಗಳೇ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಈಗೀಗ ನಮ್ಮವರಿಗೆ ನಮ್ಮವರೇ ಬೆಲೆ ಕೊಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಈ ಸಾಲಿಗೆ ಈಗ ಜಾವೇದ್ ಅಖ್ತರ್ ಅಧಿಕೃತವಾಗಿ ಸೇರಿಕೊಂಡಿದ್ಧಾರೆ.
ಹೌದು, ಬಾಲಿವುಡ್ನ ಪ್ರಸಿದ್ಧ ಚಿತ್ರಕಥೆಗಾರ ಮತ್ತು ಗೀತ ರಚನೆಕಾರ ಜಾವೇದ್ ಅಖ್ತರ್ ಮೊನ್ನೆ ಅಮೀರ್ ಖಾನ್ ಜೊತೆ ಪ್ರೇಕ್ಷಕರ ಮುಂದೆ ಬಂದಿದ್ದರು. ಪಿವಿಆರ್ ಐನಾಕ್ಸ್ ಅಮೀರ್ ಖಾನ್ ಅವರ ಸಾಧನೆಗೆ ಸಲಾಂ ಹೊಡೆದು ಹಮ್ಮಿಕೊಂಡಿರುವ ಅಮೀರ್ ಖಾನ್ ; ಸಿನಿಮಾ ಕಾ ಜಾದೂಗಾರ್ ಫಿಲ್ಮ್ ಫೆಸ್ಟಿವಲ್ನ ಉದ್ಘಾಟನಾ ಸಮಾರಂಭ ಅದು.
ಇದೇ ಸಮಯದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿರುವ ಜಾವೇದ್ ಅಖ್ತರ್ ಮುಂಬೈ ಚಿತ್ರರಂಗ ಹಿಂದೆ ಉಳಿಯಲು ಕಾರಣವೇನು ಎನ್ನುವ ಪ್ರಶ್ನೆಯನ್ನು ಅಮೀರ್ ಖಾನ್ಗೆ ಕೇಳಿದ್ದಾರೆ. ಅಮೀರ್ ಖಾನ್ಗೆ ಉತ್ತರ ನೀಡುವ ಅವಕಾಶವನ್ನು ಕೂಡ ನೀಡದೇ ಮುಂದುವರೆದು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಜಾವೇದ್ ಅಖ್ತರ್ ಗುರುತು ಪರಿಚಯವಿರದ ದಕ್ಷಿಣ ಭಾರತದ ಸ್ಟಾರ್ಗಳೆಲ್ಲ ತಮ್ಮ ಚಿತ್ರಗಳನ್ನು ಹಿಂದಿಗೆ ಡಬ್ ಮಾಡಿ ನಮ್ಮ ನೆಲದಲ್ಲಿ 600-700 ಕೋಟಿ ಹಣ ಗಳಿಸಿಕೊಂಡು ಹೋಗುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ನಮ್ಮಲ್ಲಿ ಕೂಡ ಕೆಲವರು ದಕ್ಷಿಣದ ಚಿತ್ರಗಳನ್ನು ರಿಮೇಕ್ ಮಾಡುತ್ತಿದ್ದಾರೆ, ನಮ್ಮ ಜನರಿಗೆ ಏನಾಗಿದೆ ? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರೇಕ್ಷಕರ ಜೊತೆ ನಮ್ಮವರು ಸಂಪರ್ಕವನ್ನು ಕಡಿದುಕೊಂಡಿರುವುದೇ ನಮ್ಮ ವೈಫಲ್ಯತೆಗೆ ಪ್ರಮುಖ ಕಾರಣವೆಂದಿದ್ದಾರೆ.
ಸದ್ಯ ಜಾವೇದ್ ಅಖ್ತರ್ ಅವರ ಈ ಹೇಳಿಕೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಜಾವೇದ್ ಅಖ್ತರ್ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದರೆ, ಇನ್ನು ಹಲವರು ಜಾವೇದ್ ಅಖ್ತರ್ ವಿರುದ್ದ ಕಿಡಿ ಕಾರುತ್ತಿದ್ಧಾರೆ. ಪ್ರೇಕ್ಷಕರ ನಾಡಿ ಮಿಡಿತವನ್ನು ಅರಿಯದೇ ಬರಗೆಟ್ಟ ಸಿನಿಮಾ ಮಾಡಿದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಯಾಕೆ ಬರುತ್ತಾರೆ ? ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ದಕ್ಷಿಣದಲ್ಲಿ ಒಳ್ಳೊಳ್ಳೆಯ ಚಿತ್ರಗಳು ಬರುತ್ತಿವೆ ಹೀಗಾಗಿ ಜನ ದಕ್ಷಿಣದ ಚಿತ್ರಗಳನ್ನು ಹೆಚ್ಚೆಚ್ಚು ಇಷ್ಟ ಪಡುತ್ತಿದ್ದಾರೆ ಅದರಲ್ಲಿ ತಪ್ಪೇನಿದೆ ? ಎಂದು ಜಾವೇದ್ ಅಖ್ತರ್ ಅವರಲ್ಲಿ ಕೇಳುತ್ತಿದ್ದಾರೆ. ಇನ್ನು ಕೆಲವರು ಸೌತ್ ಸೂಪರ್ ಸ್ಟಾರ್ಗಳನ್ನು ಅವಮಾನ ಮಾಡಲೇಂದೇ ಜಾವೇದ್ ಅಖ್ತರ್ ಈ ಮಾತುಗಳನ್ನು ಹೇಳಿದ್ದಾರೆ ಎನ್ನುವ ವಾದವನ್ನು ಮಂಡಿಸುತ್ತಿದ್ದಾರೆ.


Click it and Unblock the Notifications











