ನನ್ನನ್ನು, ಶ್ರೀದೇವಿಯನ್ನು ಕೋಣೆಯಲ್ಲಿ ಕೂಡಿಹಾಕಿದ್ದರು: ಜಯಪ್ರದಾ
ಬಹುಭಾಷಾ ನಟಿ ಜಯಪ್ರದಾ, ತಮ್ಮ ಹಳೆಯ 'ವೃತ್ತಿ ಶತ್ರು' ದಿವಂಗತ ಶ್ರೀದೇವಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹಾಗೂ ಶ್ರೀದೇವಿ ನಡುವೆ ನಡೆದಿದ್ದ 'ಕೋಲ್ಡ್ ವಾರ್' ಬಗ್ಗೆ ಅವರು ವಿವರಿಸಿದ್ದಾರೆ.
ಇತ್ತೀಚೆಗೆ ಶೋ ಒಂದಕ್ಕೆ ಅತಿಥಿಯಾಗಿ ಹೋಗಿದ್ದ ಜಯಪ್ರದಾ, 'ನಾನೂ ಹಾಗೂ ಶ್ರೀದೇವಿ ಒಟ್ಟಿಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದೇವೆ. ತೆರೆ ಮೇಲೆ ಗೆಳತಿಯರಾಗಿ, ಅಕ್ಕ-ತಂಗಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದೇವೆ. ಆದರೆ ನಿಜ ಜೀವನದಲ್ಲಿ ಒಬ್ಬರಿಗೊಬ್ಬರು ಒಮ್ಮೆಯೂ ಮಾತನಾಡಿಲ್ಲ' ಎಂದಿದ್ದಾರೆ.
ನಮ್ಮಿಬ್ಬರಿಗೂ ಪರಸ್ಪರ ಸ್ಪರ್ಧೆ ಏರ್ಪಟ್ಟಿತ್ತು. ಆಕೆಗಿಂತಲೂ ಒಳ್ಳೆಯ ನಟನೆ ಮಾಡಬೇಕು, ಹಿಟ್ ಸಿನಿಮಾ ಕೊಡಬೇಕು, ಚೆನ್ನಾಗಿ ಉಡುಗೆ ತೊಡಬೇಕು, ಒಳ್ಳೆಯ ಬ್ಯಾನರ್ನಲ್ಲಿ ಸಿನಿಮಾಕ್ಕೆ ಸಹಿ ಹಾಕಬೇಕು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಹೀಗೆ ಎಲ್ಲದರಲ್ಲೂ ನಾವು ಸ್ಪರ್ಧೆಗೆ ಬಿದ್ದಿದ್ದೆವು. ನಮ್ಮಿಬ್ಬರಲ್ಲಿ ಪೈಪೋಟಿ ಏರ್ಪಟ್ಟಿತ್ತು ಅದರಿಂದಾಗಿ ಸಣ್ಣ ದ್ವೇಷವೊಂದು ಹುಟ್ಟಿ ಒಬ್ಬರಿಗೊಬ್ಬರು ನಾವು ಮಾತನಾಡದಂತೆ ಆಗಿತ್ತು' ಎಂದಿದ್ದಾರೆ ಜಯಪ್ರದ.

'ನಾವಿಬ್ಬರು ಪರಸ್ಪರ ಎಲ್ಲಿಯಾದರೂ ಎದುರುಬದುರಾದರೆ ಪರಸ್ಪರ ಮುಖವನ್ನೂ ನೋಡುತ್ತಿರಲಿಲ್ಲ. ಒಂದೊಮ್ಮೆ ಶೂಟಿಂಗ್ ಸೆಟ್ನಲ್ಲಿ ಭೇಟಿಯಾಗಿ ಯಾರಾದರೂ ನಮ್ಮಿಬ್ಬರನ್ನು ಪರಿಚಯಿಸಿದರೆ ನಾವು ಹಾಯ್ ಹೇಳಿ ಮುಂದೆ ಹೋಗಿಬಿಡುತ್ತಿದ್ದೆವು' ಎಂದಿದ್ದಾರೆ ಜಯಪ್ರದ.
'ಒಮ್ಮೆ ''ಮಕ್ಸದ್' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಆ ಸಿನಿಮಾದ ನಾಯಕ ನಟರಾಗಿದ್ದ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಹಾಗೂ ಜೀತೇಂದ್ರ ಅವರುಗಳು ನನ್ನನ್ನು ಹಾಗೂ ಶ್ರೀದೇವಿಯನ್ನು ಮೇಕಪ್ ಕೋಣೆಯಲ್ಲಿ ಒಂದು ಗಂಟೆ ಕಾಲ ಕೂಡಿಹಾಕಿದ್ದರು. ಆಗಲಾದರೂ ನಾವಿಬ್ಬರು ಮಾತನಾಡಿಕೊಳ್ಳುತ್ತೇವೆ ಎಂಬುದು ಅವರ ಯೋಚನೆ ಆಗಿತ್ತು ಆದರೆ ಆಗಲೂ ನಾವಿಬ್ಬರೂ ಮಾತನಾಡಿರಲಿಲ್ಲ' ಎಂದಿದ್ದಾರೆ ಜಯಪ್ರದ.
'ಆದರೆ ಶ್ರೀದೇವಿ ಹಠಾತ್ತನೆ ತೀರಿಕೊಂಡ ಸುದ್ದಿ ಕೇಳಿ ತೀವ್ರ ಆಘಾತವಾಗಿತ್ತು. ನಾನು ಒಬ್ಬಳೇ ಉಳಿದುಬಿಟ್ಟೆ ಎನಿಸಿತು. ಹಳೆಯದ್ದೆಲ್ಲ ನೆನಪಿಸಿಕೊಂಡು ಬಹಳ ಬೇಸರವಾಯಿತು. ನಾನು, ಶ್ರೀದೇವಿ ಮಾತನಾಡ ಬೇಕಿತ್ತು ಎಂದು ಈಗ ಬಹಳ ಅನ್ನಿಸುತ್ತದೆ' ಎಂದು ಭಾವುಕರಾಗಿದ್ದಾರೆ ಜಯಪ್ರದ.


Click it and Unblock the Notifications











