ವಿವಾದದ ಸುಳಿಯಲ್ಲಿ ಜಾನ್ ಅಬ್ರಹಾಂ 'ಮದ್ರಾಸ್ ಕೆಫೆ'

ಶೂಜಿತ್ ಸರ್ಕಾರ್ ನಿರ್ದೇಶಿಸಿರುವ, ಜಾನ್ ಅಬ್ರಹಾಂ ಮತ್ತು ನರ್ಗೀಶ್ ಫಕ್ರಿ ಪ್ರಮುಖ ಭೂಮಿಕೆಯಲ್ಲಿರುವ ಹಿಂದಿ ಚಿತ್ರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಚಿತ್ರಕಥೆಯನ್ನು ಹೊಂದಿದೆ. ರಾಜೀವ್ ಹತ್ಯೆಯ ಸಂಚನ್ನು ಮದ್ರಾಸ್ ಕೆಫೆ ಎಂಬ ಹೋಟೆಲಿನಲ್ಲಿ ಹೂಡಲಾಗಿದ್ದರಿಂದ ಚಿತ್ರಕ್ಕೆ ಮದ್ರಾಸ್ ಕೆಫೆ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಮೊದಲು ಜಾಫ್ನಾ ಎಂದು ಹೆಸರಿಡಲಾಗಿತ್ತು.
ನಾಮ್ ತಮಿಳಗಾರ್ ಕಚ್ಚಿ ಎಂಬ ತಮಿಳು ಸಂಘಟನೆ, ಎಲ್ಟಿಟಿಈಯನ್ನು ಅತ್ಯಂತ ಕೀಳಾಗಿ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟಿನಲ್ಲಿ, ಚಿತ್ರವನ್ನು ನಿಷೇಧಿಸಬೇಕೆಂದು ಅರ್ಜಿ ಸಲ್ಲಿಸಿದೆ. ಈ ಹೋರಾಟದ ನೇತೃತ್ವವನ್ನು ತಮಿಳು ಚಿತ್ರ ನಿರ್ದೇಶಕ ಸೀಮನ್ ಅವರು ವಹಿಸಿಕೊಂಡಿದ್ದಾರೆ.
ಇನ್ನೆರಡು ದಿನಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ನೋಡುತ್ತೇವೆ ಯಾವುದೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದ ನಂತರವೇ ಚಿತ್ರಬಿಡುಗಡೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಚಿತ್ರ ಬಿಡುಗಡೆಯಾಗುತ್ತಿರುವ ಮಂದಿರದ ಮಾಲಿಕರು ಕೂಡ ವಿಶೇಷ ಪ್ರದರ್ಶನ ಆಯೋಜಿಸುತ್ತಿರುವುದಾಗಿ ಹೇಳಿದ್ದಾರೆ.
1980ರ ದಶಕದಲ್ಲಿ ಶ್ರೀಲಂಕಾದಲ್ಲಿ ನಡೆದ ತಮಿಳು ಸಂಘರ್ಷದ ಕಥೆಯನ್ನು ಈ ಚಿತ್ರ ಹೊಂದಿದೆ ಎಂದು ಜಾನ್ ಅಬ್ರಹಾಂ ಹೇಳಿದ್ದು, ಚಿತ್ರಕಥೆ ಕಾಲ್ಪನಿಕವಾಗಿದೆ ಮತ್ತು ಯಾವ ಸಂಘಟನೆಯನ್ನೂ ಕೀಳಾಗಿ ತೋರಿಲ್ಲ. ಬೇಕಿದ್ದರೆ ಪ್ರಿವ್ಯೂ ಆಯೋಜಿಸುತ್ತೇವೆ ಎಂದು 40 ವರ್ಷದ ನಟ ಜಾನ್ ಭರವಸೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ವಿವಾದಕ್ಕೆ ಗುರಿಯಾಗಿರುವ ಮೂರನೇ ಚಿತ್ರ ಮದ್ರಾಸ್ ಕೆಫೆ. ಪ್ರತಿಭಾವಂತ ನಟ ವಿಜಯ್ ನಟಿಸಿರುವ ತಲೈವಾ ವಿವಾದದಲ್ಲಿ ಸಿಲುಕಿದ್ದು ತಮಿಳುನಾಡಿನಲ್ಲಿ ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ. ಆದರೆ, ಬೆಂಗಳೂರಿನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಕೆಲ ತಿಂಗಳ ಹಿಂದೆ ಮತ್ತೊಬ್ಬ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ನಟಿಸಿದ್ದ ವಿಶ್ವರೂಪಂ ಕೂಡ ವಿವಾದದ ಮಡುವಿನಲ್ಲಿ ಸಿಲುಕಿ ಬಿಡುಗಡೆಯಾಗಿತ್ತು.


Click it and Unblock the Notifications











