ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಕಾಜಲ್ ಅಗರ್ವಾಲ್, ಯಾವ ಸಿನಿಮಾ ಅಂದ್ರೆ?
ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾಗಳಲ್ಲಿ ನಟ ಯಶ್ ಬ್ಯುಸಿಯಾಗಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ನಟಿಸುತ್ತಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ಮತ್ತೆ ಗ್ಯಾಂಗ್ಸ್ಟರ್ ಆಗಿ ಅಬ್ಬರಿಸಲಿದ್ದಾರೆ. ಇನ್ನು 'ರಾಮಾಯಣ' ಚಿತ್ರದಲ್ಲಿ ರಾವಣನ ಅವತಾರ ತಾಳಿದ್ದಾರೆ.
'ಟಾಕ್ಸಿಕ್' ಸಿನಿಮಾ ಜೊತೆ ಜೊತೆಗೆ 'ರಾಮಾಯಣ' ಚಿತ್ರದ ಚಿತ್ರೀಕರಣದಲ್ಲಿ ರಾಕಿಂಗ್ ಸ್ಟಾರ್ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಮಧ್ಯ ಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿ ಬಳಿಯ ರಾವಣ ವೇಷದಲ್ಲಿ ಯಶ್ ಶೂಟಿಂಗ್ ಅಖಾಡಕ್ಕೆ ಇಳಿದಿದ್ದರು. ಈ ಎರಡೂ ಸಿನಿಮಾಗಳನ್ನು ಬಿಟ್ಟರೆ ರಾಕಿಂಗ್ ಸ್ಟಾರ್ ಮತ್ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.

ಸದ್ಯ ಯಶ್ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅರೇ, 'ಟಾಕ್ಸಿಕ್' ಹಾಗೂ 'ರಾಮಾಯಣ' ಬಿಟ್ಟು ಯಾವುದೇ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ನಟಿಸುತ್ತಿಲ್ಲ. ಹಾಗಿದ್ದರೆ ಕಾಜಲ್ ಯಾವ ಚಿತ್ರದಲ್ಲಿ ಜೊತೆಯಾಗುತ್ತಾರೆ? ಎನ್ನುವ ಕುತೂಹಲ ಮೂಡುವುದು ಸಹಜ. ಈಗಾಗಲೇ ಪಾತ್ರಕ್ಕಾಗಿ ಮುಂಬೈ ಬೆಡಗಿ ಲುಕ್ ಟೆಸ್ಟ್ ಕೂಡ ಮಾಡಿಸಿದ್ದಾರೆ ಎನ್ನಲಾಗ್ತಿದೆ.
ಅಂದಹಾಗೆ ಯಶ್ ಪತ್ನಿ ಪಾತ್ರದಲ್ಲಿ ಕಾಜಲ್ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಅದು 'ರಾಮಾಯಣ' ಚಿತ್ರದಲ್ಲಿ ಎನ್ನುವ ಊಹಾಪೋಹ ಶುರುವಾಗಿದೆ. ಪೌರಾಣಿಕ ಕಥಾಹಂದರದ ಚಿತ್ರದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿರುವುದು ಗೊತ್ತೇಯಿದೆ. ಮಂಡೋದರಿ ಪಾತ್ರಕ್ಕೆ ಕಾಜಲ್ ಅಗರ್ವಾಲ್ ಲುಕ್ ಟೆಸ್ಟ್ ಕೊಟ್ಟಿದ್ದು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

'ರಾಮಾಯಣ' ಚಿತ್ರದಲ್ಲಿ ಮಂಡೋದರಿ ಪಾತ್ರಕ್ಕೆ ಸಾಕ್ಷಿ ತನ್ವರ್ ಆಯ್ಕೆ ಆಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದೆಲ್ಲ ಸುಳ್ಳು, ರಾವಣನ ಪತ್ನಿಯಾಗಿ ಕಾಜಲ್ ನಟಿಸುತ್ತಾರೆ ಎಂದು ಈಗ ಹೊಸ ಚರ್ಚೆ ಶುರುವಾಗಿದೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. 'ರಾಮಾಯಣ' ಚಿತ್ರದ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಹೆಚ್ಚು ಸಿಕ್ಕಿಲ್ಲ. 2 ಭಾಗಗಳಾಗಿ ಸಿನಿಮಾ ನಿರ್ಮಾಣವಾಗುವುದು ಹಾಗೂ ರಿಲೀಸ್ ಡೇಟ್ ಮಾತ್ರ ಘೋಷಣೆ ಆಗಿದೆ.
ಸಂದರ್ಶನವೊಂದರಲ್ಲಿ ಯಶ್ ಮಾತನಾಡಿ 'ರಾಮಾಯಣ' ಚಿತ್ರದ ರಾಮ, ಸೀತೆ, ರಾವಣ ಪಾತ್ರಗಳಲ್ಲಿ ಯಾರು ನಟಿಸುತ್ತಾರೆ ಎಂದು ಖಚಿತಪಡಿಸಿದ್ದರು. ಇನ್ನುಳಿದಂತೆ ಅಂತೆಕಂತೆ ಸುದ್ದಿ ಮಾತ್ರವೇ ಹೆಚ್ಚು ಸದ್ದು ಮಾಡ್ತಿದೆ. ಈಗಾಗಲೇ ಸಿನಿಮಾ ಅನೌನ್ಸ್ಮೆಂಟ್ ಟೀಸರ್ ಸಿದ್ಧವಾಗಿದ್ದು ಸೆನ್ಸಾರ್ ಸಹ ಕಂಪ್ಲೀಟ್ ಆಗಿದೆ. ಶೀಘ್ರದಲ್ಲೇ ಟೀಸರ್ ಮೂಲಕ ಕಲಾವಿದರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ.
ಮುಂಬೈ ಚೆಲುವೆ ಜೆನಿಲಿಯಾ ಸೌತ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಉದ್ಯಮಿ ಗೌತಮ್ ಕಿಚ್ಲು ಕೈಹಿಡಿದ ಜೆನಿಲಿಯಾ ಸಿನಿಮಾಗಳಲ್ಲಿ ನಟಿಸುವುದು ಕೊಂಚ ಕಮ್ಮಿ ಆಗಿತ್ತು. ಆದರೆ ಬಳಿಕ ಮಗನ ಲಾಲನೆ ಪಾಲನೆ ಜೊತೆ ಜೊತೆಗೆ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. 'ಇಂಡಿಯನ್-2', 'ಸಿಕಂದರ್' ಚಿತ್ರಗಳಲ್ಲಿ ನಟಿಸಿದ್ದರು. ಸದ್ಯ ಬಿಡುಗಡೆಗೆ ಸಜ್ಜಾಗಿರುವ 'ಕಣ್ಣಪ್ಪ' ಚಿತ್ರದಲ್ಲಿ ಪಾರ್ವತಿಯಾಗಿ ನಟಿಸಿದ್ದಾರೆ.
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ 'ರಾಮಾಯಣ' ಚಿತ್ರ ಕಟ್ಟಿಕೊಡುತ್ತಿದ್ದಾರೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್, ದಶರಥನಾಗಿ ಅರುಣ್ ಗೋವಿಲ್ ಹೀಗೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಮುಂದಿನ ವರ್ಷ ದೀಪಾವಳಿಗೆ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ.


Click it and Unblock the Notifications











