ಕಂಗನಾ ರಣೌತ್ಗೆ ಮುಂಬೈ ಪೊಲೀಸರಿಂದ ಸಮನ್ಸ್: ಶುರುವಾಯ್ತು ಆತಂಕ
ನಟಿ ಕಂಗನಾ ರಣೌತ್ ಹಾಗೂ ಸಹೋದರಿ ರಂಗೋಲಿ ಗೆ ಮುಂಬೈ ಪೊಲೀಸರು ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ತಮ್ಮ ಬಿಡು ಬೀಸು ಮಾತುಗಳಿಂದ ಮಹಾರಾಷ್ಟ್ರ ಸರ್ಕಾರವನ್ನು ಎದುರು ಹಾಕಿಕೊಂಡಿರುವ ಕಂಗನಾ ಗೆ ಮೇಲಿಂದ ಮೇಲೆ ಸಮಸ್ಯೆಗಳು ಎದುರಾಗುತ್ತಲೇ ಇವೆ. ಈ ಸಮಸ್ಯೆಗಳು ರಾಜಕೀಯ ಪ್ರೇರಿತವೇ ಅಥವಾ ಕಾನೂನುಬದ್ಧವೇ ಎಂಬುದರ ಬಗ್ಗೆ ಚರ್ಚೆ ಆಗಬೇಕಿದೆ.
ಪ್ರಸ್ತುತ ನಟಿ ಕಂಗನಾ ರಣೌತ್ ಹಾಗೂ ಅವರ ಸಹೋದರಿ ರಂಗೋಲಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದು, ದ್ವೇಷ ಹರಡುವ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 10 ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಸೂಚನೆ
ವಕೀಲರೊಬ್ಬರು ಕಂಗನಾ ರಣೌತ್ ಹಾಗೂ ರಂಗೋಲಿ ಅವರ ಟ್ವೀಟ್ಗಳು ದ್ವೇಷಗಳನ್ನು ಹರಡುತ್ತಿರುವ ಬಗ್ಗೆ, ಉದ್ರೇಕಕಾರಿ ಟ್ವೀಟ್ಗಳನ್ನು ಮಾಡುತ್ತಿರುವ ಬಗ್ಗೆ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು, ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು.

ಅಕ್ಟೋಬರ್ನಲ್ಲಿಯೇ ಸಮನ್ಸ್ ಜಾರಿ ಮಾಡಲಾಗಿತ್ತು
ನ್ಯಾಯಾಲಯದ ಸೂಚನೆಯಂತೆ ಮುಂಬೈ ಪೊಲೀಸರು ಕಂಗನಾ ರಣೌತ್ ಹಾಗೂ ರಂಗೋಲಿ ವಿರುದ್ಧ ಎಫ್ಐಆರ್ ದಾಖಲಿಸಿ ಸಮನ್ಸ್ ಸಹ ಜಾರಿ ಮಾಡಿದ್ದರು. ಮೊದಲ ಸಮನ್ಸ್ಗೆ ಪ್ರತಿಕ್ರಿಯಿಸಿ ಕಾಲಾವಕಾಶ ಕೋರಿದ್ದ ಕಾರಣ ಈಗ ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ.

ಸಮಯ ಕೇಳಿದ್ದ ಕಂಗನಾ-ರಂಗೋಲಿ
ಈ ಮೊದಲೂ ಸಹ ಮುಂಬೈ ಪೊಲೀಸರು ಕಂಗನಾ ಹಾಗೂ ರಂಗೋಲಿಗೆ ಸಮನ್ಸ್ ಜಾರಿ ಮಾಡಿದ್ದರು. ಅಕ್ಟೋಬರ್ 25-26ರ ಒಳಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಆದರೆ ಇಬ್ಬರೂ ಸಹೋದರಿಯರು ತಮಗೆ ಇನ್ನಷ್ಟು ಸಮಯ ನೀಡುವಂತೆ ಮನವಿ ಮಾಡಿದ್ದರು, ಅಂತೆಯೇ ಈಗ ನವೆಂಬರ್ 10 ರ ವರೆಗೆ ಸಮಯ ನೀಡಲಾಗಿದೆ.
Recommended Video

ತುಮಕೂರಿನಲ್ಲಿ ಸಹ ಪ್ರಕರಣ ದಾಖಲು
ಕಂಗನಾ ರಣೌತ್ ಅವರು ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದಾರೆಂದು ತುಮಕೂರಿನಲ್ಲಿ ಸಹ ನ್ಯಾಯಾಲಯಕ್ಕೆ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಂತೆಯೇ ನ್ಯಾಯಾಲಯದ ಸೂಚನೆಯಂತೆ ತುಮಕೂರಿನಲ್ಲಿ ಸಹ ಕಂಗನಾ ವಿರುದ್ಧ ಪ್ರಕರಣ ದಾಖಲಾಗಿದೆ.


Click it and Unblock the Notifications











