ಜಾವೇದ್ ಅಖ್ತರ್ಗೆ ಕ್ಷಮೆ ಕೇಳಿದ ಕಂಗನಾ ರಣಾವತ್, ಐದು ವರ್ಷಗಳ ಸುದೀರ್ಘ ಕಾನೂನು ಸಮರ ಅಂತ್ಯ..!
ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಇಂಥಾ ಕಂಗನಾ ಬಾಲಿವುಡ್ನ ಕಿರಿಕ್ ರಾಣಿ ಕೂಡ ಹೌದು. ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ, ಕೇವಲ ವಿವಾದಗಳಿಂದನೇ ಸುದ್ದಿಯಾಗುವ ಕಂಗನಾ ಈಗ ಬಾಯಿಗೆ ಬಂದಂತೆ ಮಾತನಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.
ಹೌದು, ಅಸಲಿಗೆ ಅವು ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಕೊರಳೊಡ್ಡಿದ್ದ ದಿನಗಳು. ಆ ಕಾಲದಲ್ಲಿ ಇಡೀ ಬಾಲಿವುಡ್ ವಿರುದ್ಧ ಸಮರ ಸಾರಿದ್ದ ಕಂಗನಾ ಕಂಡ ಕಂಡವರನ್ನೆಲ್ಲ ಕರೆದು ಸಂದರ್ಶನ ಕೊಡುತ್ತಿದ್ದರು. ಬಾಲಿವುಡ್ ಮಾಫಿಯಾ ವಿರುದ್ಧ ಕೆಂಡ ಕಾರುತ್ತಿದ್ದರು. ಹಿಂದಿ ಚಿತ್ರರಂಗದಲ್ಲಿರುವರೆಲ್ಲ ಕಳ್ ನನ್ಮಕ್ಳೇ ಎಂಬರ್ಥದಲ್ಲಿ ಮಾತನಾಡುತ್ತಿದ್ದರು.

ಹೀಗೆ ನೀಡಲಾದ ಸಂದರ್ಶನವೊಂದರಲ್ಲಿ ಕಂಗನಾ ರಣಾವತ್ ಬಾಲಿವುಡ್ನ ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ಬಗ್ಗೆ ಕೂಡ ಮಾತನಾಡಿದ್ದರು. ಹೃತಿಕ್ ರೋಷನ್ ವಿಚಾರದಲ್ಲಿ ಜಾವೇದ್ ಅಖ್ತರ್ ಮನೆಗೆ ಕರೆಸಿ ನನ್ನನ್ನೂ ಹೆದರಿಸಿದ್ದರು ಬೆದರಿಸಿದ್ದರು ಎಂದು ಹೇಳಿದ್ದರು.
ಈ ಕುರಿತು ಅವತ್ತು ಮಾತನಾಡಿದ್ದ ಕಂಗನಾ ಒಮ್ಮೆ ಜಾವೇದ್ ಅಖ್ತರ್ ನನಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದರು. ರಾಕೇಶ್ ರೋಷನ್ ಅವರ ಕುಟುಂಬದವರು ತುಂಬಾ ದೊಡ್ಡವರು ನೀನು ಹೃತಿಕ್ ರೋಷನ್ನಲ್ಲಿ ಕ್ಷಮೆ ಕೇಳದೇ ಇದ್ದರೆ ಅವರು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಜೈಲಿಗೆ ಕಳಿಸುತ್ತಾರೆ, ಆಗ ನಿನಗೆ ಬೇರೆ ಯಾವ ದಾರಿಯೂ ಇರಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂದು ಜಾವೇದ್ ಅಖ್ತರ್ ನನಗೆ ಹೇಳಿದ್ದರು ಎಂದು ಕಂಗನಾ ಹೇಳಿದ್ದರು. ಇಷ್ಟೇ ಅಲ್ಲ ನನ್ನ ಮೇಲೆ ಜಾವೇದ್ ಅಖ್ತರ್ ಕಿರುಚಾಡಿದ್ದರು ಆಗ ನಾನು ಅವರ ಮನೆಯಲ್ಲಿ ಗಡಗಡ ನಡುಗುತ್ತಿದ್ದೆ ಎಂದು ಕೂಡ ಕಂಗನಾ ಹೇಳಿದ್ದರು.
ಕಂಗನಾ ಅವರ ಈ ಮಾತುಗಳಿಗೆ ಅವತ್ತು ಕೆರಳಿ ಕೆಂಡವಾಗಿದ್ದ ಜಾವೇದ್ ಅಖ್ತರ್, ಕಂಗನಾ ವಿರುದ್ದ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ಪ್ರಕರಣದ ವಿಚಾರಣೆ ನಡೆಯುತ್ತಾನೇ ಇತ್ತು. ಪ್ರತಿ ಬಾರಿ ಕಂಗನಾ ಗೈರಾದಾಗ ನೊಟೀಸ್ ಕಳುಹಿಸಲಾಗುತ್ತಿತ್ತು. ಕಂಗನಾಗೆ ನ್ಯಾಯಾಲಯ ತಪರಾಕಿಯನ್ನು ಹಾಕಿತ್ತು.
ಈಗ ಈ ವಿವಾದಕ್ಕೆ ಇತಿಶ್ರೀ ಹಾಡಲಾಗಿದೆ. ಜಾವೇದ್ ಅಖ್ತರ್ ಮತ್ತು ಕಂಗನಾ ನಡುವೆ ರಾಜಿ ಪಂಚಾಯ್ತಿ ಯಶಸ್ವಿಯಾಗಿದ್ದು ಜಾವೇದ್ ಅಖ್ತರ್ ಅವರಲ್ಲಿ ಕಂಗನಾ ಕ್ಷಮೆಯನ್ನು ಕೇಳಿದ್ದಾರೆ. ಈ ಕುರಿತು ಜಾವೇದ್ ಅಖ್ತರ್ ಮತ್ತು ನಾನು ಪರಸ್ಪರ ಒಪ್ಪಿಗೆಯ ಮೆರೆಗೆ ಕೇಸ್ ಮುಕ್ತಾಯಗೊಳಿಸಿದ್ದೇವೆ ಈ ಸಮಯದಲ್ಲಿ ಜಾವೇದ್ ಅಖ್ತರ್ ಅವರು ನನ್ನನ್ನೂ ತುಂಬಾ ಕರುಣೆಯಿಂದ ನೋಡಿದ್ದು ನನ್ನ ಮುಂದಿನ ಚಿತ್ರಕ್ಕೆ ಹಾಡು ಬರೆಯಲು ಕೂಡ ಅವರು ಒಪ್ಪಿಕೊಂಡಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಫೋಟೊ ಹಂಚಿಕೊಂಡಿದ್ದಾರೆ.
ಇನ್ನು ಈ ಕುರಿತು ಬಾಂದ್ರಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆಯನ್ನು ನೀಡಿರುವ ಕಂಗನಾ ರಣಾವತ್ ಅವತ್ತು ತಪ್ಪು ತಿಳುವಳಿಕೆಯಿಂದಾಗಿ ನಾನು ಜಾವೇದ್ ಅಖ್ತರ್ ಅವರ ವಿರುದ್ದ ಹೇಳಿಕೆ ನೀಡಿದ್ದೇನೆ ಎಂದು ಹೇಳಿದ್ದಾರೆ. ನನ್ನ ಮಾತುಗಳಿಂದ ಜಾವೇದ್ ಅಖ್ತರ್ ಅವರಿಗೆ ಉಂಟಾದ ಅನಾನುಕೂಲತೆಗೆ ಕ್ಷಮೆಯನ್ನು ಕೇಳುತ್ತೇನೆ ಎಂದಿರುವ ಕಂಗನಾ ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದಿಲ್ಲ ಎಂದಿದ್ದಾರೆ.


Click it and Unblock the Notifications










