ಎಂಟು ತಿಂಗಳ ಬಳಿಕ ಕೊನೆಗೂ ಕೋರ್ಟ್ಗೆ ಹಾಜರಾದ ಕಂಗನಾ
ನಟಿ ಕಂಗನಾ ರನೌತ್ ವಿರುದ್ಧ ಜಾವೇದ್ ಅಖ್ತರ್ ಹೂಡಿದ್ದ ಮಾನನಷ್ಟ ಮೊಕದ್ದಮೆ ಕುತೂಹಲ ಘಟ್ಟದತ್ತ ಸಾಗುತ್ತಿದೆ.
ತಾವು ಹೂಡಿರುವ ಪ್ರಕರಣದಲ್ಲಿ ನ್ಯಾಯ ಧಕ್ಕಿಸಿಕೊಂಡೇ ತೀರಬೇಕೆಂಬ ಉತ್ಕಟ ಛಲದೊಂದಿಗೆ ಜಾವೇದ್ ಅಖ್ತರ್ ಕೇಸಿನ ಮೇಲೆ ಕಾಳಜಿವಹಿಸಿದ್ದಾರೆ. ಜಾವೇದ್ ಹೂಡಿರುವ ಪ್ರಕರಣದಿಂದ ತಪ್ಪಿಸಿಕೊಳ್ಳಲು ಕಂಗನಾ ಸಹ ಸಾಕಷ್ಟು ಯತ್ನಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಕಂಗನಾಗೆ ಹಿನ್ನಡೆ ಮೇಲೆ ಹಿನ್ನಡೆಗಳಾಗುತ್ತಿದೆ.
ಜಾವೇದ್ ಅಖ್ತರ್ ಹೂಡಿರುವ ಮಾನನಷ್ಟ ಮೊಕದ್ದಮೆ ಕುರಿತಾಗಿ ಕಳೆದ ಫೆಬ್ರವರಿ ತಿಂಗಳಿನಿಂದಲೂ ನ್ಯಾಯಾಲಯ ಕಂಗನಾಗೆ ಸಮನ್ಸ್ ಜಾರಿ ಮಾಡುತ್ತಲೇ ಬರುತ್ತಿತ್ತಾದರೂ ಕಂಗನಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ, ಇಂದು ಕೊನೆಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ ನಟಿ ಕಂಗನಾ.

ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ನಟಿ ಕಂಗನಾ ರನೌತ್ ಹಾಜರಾದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಕಂಗನಾ, ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಕಂಗನಾ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದಲ್ಲಿ ವಾರೆಂಟ್ ಹೊರಡಿಸುವುದಾಗಿ ನ್ಯಾಯಾಲಯ ಹೇಳಿತ್ತು.
ಜಾವೇದ್ ಅಖ್ತರ್ ತಮ್ಮ ಮೇಲೆ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಬೇಕು ಎಂದು ಕೆಲವು ದಿನಗಳ ಹಿಂದಷ್ಟೆ ನಟಿ ಕಂಗನಾ ಮುಂಬೈ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅರ್ಜಿಯನ್ನು ರದ್ದುಗೊಳಿಸಲಾಯ್ತು. ಹಾಗಾಗಿ ಅನಿವಾರ್ಯವಾಗಿ ನಟಿ ಕಂಗನಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಕಂಗನಾ ರನೌತ್ ನ್ಯಾಯಾಲಯಕ್ಕೆ ಹಾಜರಾದ ಬಗ್ಗೆ ಮಾತನಾಡಿರುವ ನಟಿಯ ಪರ ವಕೀಲ ರಿಜ್ವಾನ್ ಸಿದ್ಧಿಕಿ, ''ಈ ನ್ಯಾಯಾಲಯವು (ಅಂಧೇರಿ ಮ್ಯಾಜಿಸ್ಟ್ರೇಟ್) ಹಲವು ಬಾರಿ ಕಂಗನಾ ವಿರುದ್ಧ ವಾರೆಂಟ್ ಹೊರಡಿಸುವುದಾಗಿ ಹೇಳಿದೆ, ಹಾಗಾಗಿ ಈ ನ್ಯಾಯಾಲಯಕ್ಕೆ ವಿಚಾರಣೆ ಎದುರಿಸುವುದು ಕಂಗನಾಗೆ ಇರುಸು-ಮುರುಸು ಎನಿಸುತ್ತಿದೆ'' ಎಂದಿದ್ದಾರೆ. ಅಲ್ಲದೆ, ''ಈ ನ್ಯಾಯಾಲಯದ ಮೇಲೆ ಕಂಗನಾಗೆ ವಿಶ್ವಾಸ ಹೊರಟು ಹೋಗಿದೆ'' ಎಂದಿದ್ದಾರೆ.
''ಇದು ಒಂದು ಜಾಮೀನುಬದ್ಧ ಮತ್ತು ಬಂಧನ ಸಾಧ್ಯವಿಲ್ಲದ ಪ್ರಕರಣ ಆಗಿರುವಾಗ ಏಕೆ ನ್ಯಾಯಾಲಯವು ಕಂಗನಾ ನ್ಯಾಯಾಲಯಕ್ಕೆ ಬರಲೇ ಬೇಕೆಂದು ಹಠ ಹಿಡಿದಿದೆ. ಅದೂ ಅಲ್ಲದೆ, ಹಲವು ಬಾರಿ ಕಂಗನಾ ವಿರುದ್ಧ ವಾರೆಂಟ್ ಹೊರಡಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ಈ ನ್ಯಾಯಾಲಯವು ಕಂಗನಾಗೆ ಪರೋಕ್ಷವಾಗಿ ಬೆದರಿಕೆ ಹಾಕಿದೆ'' ಎಂದಿದ್ದಾರೆ ಕಂಗನಾ ಪರ ವಕೀಲ.
ಇದೀಗ ನಟಿ ಕಂಗನಾ ರನೌತ್ ಜಾವೇದ್ ಅಖ್ತರ್ ವಿರುದ್ಧ ಪ್ರತಿ ದೂರು ದಾಖಲಿಸಿದ್ದು, ಜಾವೇದ್ ವಿರುದ್ಧ ಸುಲಿಗೆ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.
ಕಂಗನಾ ರನೌತ್ ಸಂದರ್ಶನವೊಂದರಲ್ಲಿ ಬಾಲಿವುಡ್ನ ಹಿರಿಯ ಚಿತ್ರ ಸಾಹಿತಿ, ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದರು. ಇದರ ವಿರುದ್ಧ ಜಾವೇದ್ ಅಖ್ತರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.


Click it and Unblock the Notifications











