ಸಲ್ಮಾನ್ ರಶ್ದಿ ಮೇಲೆ ದಾಳಿ: ಜಿಹಾದಿ ಕೃತ್ಯವೆಂದ ಕಂಗನಾ
ಅಂತರಾಷ್ಟ್ರೀಯ ಖ್ಯಾತಿಯ ಬರಹಗಾರ ಸಲ್ಮಾನ್ ರಶ್ದಿ ವಿರುದ್ಧ ನಿನ್ನೆ ನಡೆದಿರುವ ದಾಳಿ ಕುರಿತು ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಕಂಗನಾ ರನೌತ್, ಇದೊಂದು ಜಿಹಾದಿ ದಾಳಿ ಎಂದಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಲು ತೆರಳಿದ ವೇಳೆ ಲೇಖಕ ಸಲ್ಮಾನ್ ರಶ್ದಿ ಮೇಲೆ ಅಗಂತುಕನೊಬ್ಬ ದಾಳಿ ನಡೆಸಿ ಚೂರಿ ಇರಿದಿದ್ದ, ಅವರನ್ನು ಕೂಡಲೇ ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಸಲ್ಮಾನ್ ರಶ್ದಿ ಮೇಲೆ ನಡೆದ ಈ ದಾಳಿಯನ್ನು ವಿಶ್ವದ ಪ್ರಮುಖ ಲೇಖಕರೆಲ್ಲರೂ ಖಂಡಿಸಿದ್ದಾರೆ. ಅಂತೆಯೇ ಬಾಲಿವುಡ್ನ ಕೆಲವು ಪ್ರಮುಖ ನಟರು, ಚಿತ್ರಸಾಹಿತಿಗಳು, ಪತ್ರಕರ್ತರು ಸಹ ಖಂಡಿಸಿದ್ದಾರೆ. ನಟಿ ಕಂಗನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ಜಿಹಾದಿ ದಾಳಿ ಎಂದಿದ್ದಾರೆ.
''ಮತ್ತೆ ಜಿಹಾದಿಗಳು ಮತ್ತೊಂದು ಭಯಾನಕ ಕೃತ್ಯ ಎಸಗಿದ್ದಾರೆ. 'ಸ್ಯಾಟಾನಿಕ್ ವರ್ಸಸ್' ಈ ಸಮಯದ ಶ್ರೇಷ್ಠ ಪುಸ್ತಕಗಳಲ್ಲಿ ಒಂದು. ಅಕ್ಷರಗಳಲ್ಲಿ ಹಿಡಿದಿಡಲಾರದಷ್ಟು ಈ ಘಟನೆ ನನ್ನನ್ನು ಅಲುಗಿಸಿದೆ. ಅತ್ಯಂತ ಭಯಾನಕ'' ಎಂದು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನಟಿ ಸ್ವರಾ ಭಾಸ್ಕರ್ ಸಹ ಸಲ್ಮಾನ್ ರಶ್ದಿ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿದ್ದು, ''ಸಲ್ಮಾನ್ ರಶ್ದಿ ಮೇಲೆ ನಡೆದಿರುವ ಈ ದಾಳಿ ಖಂಡನಾರ್ಹ. ನನ್ನ ಪ್ರಾರ್ಥನೆ ಸಲ್ಮಾನ್ ರಶ್ದಿ ಅವರೊಟ್ಟಿಗಿದೆ. ಇದೊಂದು ನಾಚಿಕೆಗೇಡಿನ, ಖಂಡನಾರ್ಹ ದಾಳಿ'' ಎಂದಿದ್ದಾರೆ.
ಖ್ಯಾತ ಚಿತ್ರಸಾಹಿತಿ ಜಾವೇದ್ ಅಖ್ತರ್ ಸಹ ಸಲ್ಮಾನ್ ರಶ್ದಿ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ''ಸಲ್ಮಾನ್ ರಶ್ದಿಯವರ ಮೇಲೆ ಕೆಲವು ಮತಾಂಧರು ನಡೆಸಿದ ಬರ್ಬರ ದಾಳಿಯನ್ನು ನಾನು ಖಂಡಿಸುತ್ತೇನೆ. ನ್ಯೂಯಾರ್ಕ್ ಪೊಲೀಸರು ಮತ್ತು ನ್ಯಾಯಾಲಯವು ದಾಳಿಕೋರನ ವಿರುದ್ಧ ಸಾಧ್ಯವಾದಷ್ಟು ಪ್ರಬಲ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ'' ಎಂದಿದ್ದಾರೆ. ನಟ ರಣ್ವೀರ್ ಶೌರಿ ಸಹ ಈ ದಾಳಿಯನ್ನು ಖಂಡಿಸಿದ್ದಾರೆ.


Click it and Unblock the Notifications











