ಕೆಲವರು ಹಚ್ಚಿದ ಬೆಂಕಿಯಲ್ಲಿ ನಾವು ನೀವು ಸುಡುತ್ತಿದ್ದೇವೆ, ತುಂಬಾ ನೋವಾಗಿದೆ- ಕಂಗನಾ..!
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಬಾಲಿವುಡ್ನ ನಾಯಕಿ, ನಿರ್ದೇಶಕಿ ಕಂಗನಾ ರಣಾವತ್ ಸದ್ಯದ ಉದಾಹರಣೆ.
ಹೌದು, ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಕಂಗನಾ ಹೆಸರಿಗೆ ಚಿತ್ರರಂಗದಲ್ಲಿ ಚಿನ್ನದಂತಹ ಬೆಲೆ ಇತ್ತು. ಬಾಲಿವುಡ್ ಇವರನ್ನು 'ಕ್ವೀನ್' ಎಂದು ಕರೆಯುತ್ತಿತ್ತು. ಇನ್ನು ಕಂಗನಾ ಕೇವಲ ರೂಪವತಿ ಮಾತ್ರ ಅಲ್ಲ, ಅತ್ಯುತ್ತಮ ನಟಿ ಕೂಡ ಹೌದು. ಈ ಕಾರಣಕ್ಕೆ ಇವರ ಅಭಿಮಾನಿಗಳು ಇವರ ಚಿತ್ರವನ್ನು ಕಾತುರದಿಂದ ಕಾಯುತ್ತಿದ್ದರು.

ಆದರೆ ಈಗ ಎಲ್ಲವೂ ಬದಲಾಗಿದೆ. ಮಾಡಿಕೊಂಡ ಕೆಲ ಸ್ವಯಂಕೃತ ಅಪರಾಧಗಳಿಂದ ಕಂಗನಾ ನಿದ್ದೆಗೆ ಕೊಳ್ಳಿ ಬಿದ್ದಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಕಂಗನಾ ಕೈ ಮುಗಿದಿದ್ದಾರೆ. ಹೀಗೆಲ್ಲ ಮಾಡಬೇಡಿ ಎಂಬ ಮನವಿಯನ್ನು ಮಾಡಿದ್ದಾರೆ. ಹೌದು, ಅಸಲಿಗೆ ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಚಿತ್ರ ಬಿಡುಗಡೆಯಾಗಿದೆ.
ಆದರೆ, ಈ ಚಿತ್ರವನ್ನು ಪಂಜಾಬ್ನಲ್ಲಿ ನಿಷೇಧಿಸಲಾಗಿದೆ. ಈ ಹಿನ್ನೆಲೆ ನೊಂದು-ಬೆಂದಿರುವ ಕಂಗನಾ ನನ್ನ ಚಿತ್ರಕ್ಕೆ ನೀವೆಲ್ಲ ತೋರುತ್ತಿರುವ ಪ್ರೀತಿಯಿಂದ ನನ್ನ ಹೃದಯ ತುಂಬಿ ಬಂದಿದೆ. ಆದರೆ ನನ್ನ ಹೃದಯದಲ್ಲಿ ಇನ್ನೂ ನೋವು ಇದೆ ಎಂದು ಹೇಳಿದ್ದಾರೆ. ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಪಂಜಾಬ್ನಲ್ಲಿ ನನ್ನ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಇತ್ತು ಆದರೆ ಈಗ ಅದೇ ಪಂಜಾಬ್ನಲ್ಲಿ ನನ್ನ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡುತ್ತಿಲ್ಲ ಎಂದಿರುವ ಕಂಗನಾ ಕೇಬಲ ಪಂಜಾಬ್ ಮಾತ್ರ ಅಲ್ಲ ಕೆನಡಾ, ಬ್ರಿಟನ್ ಮತ್ತು ಇತರೆ ಕೆಲವು ಕಡೆ ನನ್ನ ಚಿತ್ರದ ಮೇಲೆ ದಾಳಿಯನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
ಕೆಲವು ಬೆರಳಣಿಕೆಯಷ್ಟು ಜನ ಈ ಬೆಂಕಿ ಹಾಕಿದ್ದಾರೆ, ಈ ಬೆಂಕಿಯಲ್ಲಿ ನಾವು ನೀವು ಸುಡುತ್ತಿದ್ದೇವೆ ಎಂದಿರುವ ಕಂಗನಾ ನನ್ನ ವಿಚಾರ, ನನ್ನ ಚಿತ್ರ ಈ ದೇಶದ ಪರವಾಗಿ ಇರುವುದನ್ನೇ ಈ ಚಿತ್ರ ಪ್ರತಿಬಿಂಬಿಸುತ್ತೆ ಎಂದು ಹೇಳಿರುವ ಕಂಗನಾ ಸಿನಿಮಾ ಈ ಸಿನಿಮಾ ನಮ್ಮನ್ನು ಬೇರ್ಪಡಿಸುತ್ತಾ ಜೋಡಿಸುತ್ತಾ ಎನ್ನುವುದನ್ನು ಚಿತ್ರವನ್ನು ನೋಡಿ ನೀವೆ ನಿರ್ಧಾರ ಮಾಡಿ ಎಂದಿದ್ದಾರೆ.
ಅಂದ್ಹಾಗೇ ಎಮರ್ಜೆನ್ಸಿ ಚಿತ್ರದ ವಿರುದ್ದ ಪಂಜಾಬ್ನಲ್ಲಿ ಮೊದಲಿಂದ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಇದಕ್ಕೆ ಇಂದಿರಾ ಗಾಂಧಿಯನ್ನು ಕೊಂದವರು ಪಂಜಾಬಿ ವ್ಯಕ್ತಿಗಳು, ಅವರನ್ನು ಚಿತ್ರದಲ್ಲಿ ಖಳನಾಯಕರಂತೆ ತೋರಿಸಲಾಗಿದೆ ಎನ್ನುವುದು ಒಂದು ಕಾರಣವಾದರೆ ಕೇಂದ್ರ ಸರ್ಕಾರದ ವಿರುದ್ದ ಪಂಜಾಬ್ ರೈತರು ಬೀದಿಗಿಳಿದಾಗ, ಹೋರಾಟ ಮಾಡುತ್ತಿದ್ದಾಗ, ಇದೇ ಕಂಗನಾ ನೀಡಿದ್ದ ಹೇಳಿಕೆಗಳು ಇನ್ನೊಂದು ಕಾರಣ. ಆಗ ಹೋರಾಟ ಮಾಡುತ್ತಿದ್ದವರೆಲ್ಲ ಖಲೀಸ್ತಾನಿಗಳು ಎಂದು ಕರೆದಿದ್ದ ಕಂಗನಾ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಸರಣಿ ಟ್ವಿಟ್ಗಳನ್ನು ಮಾಡಿದ್ದರು. ಈಗ ಈ ಎಲ್ಲ ವಿಚಾರ ಕಂಗನಾಗೆ ಮುಳುವಾಗಿದೆ. ಎಮರ್ಜೆನ್ಸಿ ಚಿತ್ರವನ್ನು ಪಂಜಾಬ್ನಲ್ಲಿ ನಿಷೇಧಿಸಲಾಗಿದೆ.
ಇನ್ನೂ ಪಂಜಾಬ್ನಲ್ಲಿ ನಿಷೇಧಕ್ಕೊಳಗಾದ ಎಮರ್ಜೆನ್ಸಿ ಬಾಕ್ಸಾಫೀಸ್ನಲ್ಲಿ ಕೋಟಿ ಕೋಟಿ ಹಣವನ್ನು ಕೊಳ್ಳೆ ಹೊಡೆಯುತ್ತಿಲ್ಲ. ಸ್ಯಾಕ್ನಿಕ್ ವೆಬ್ ಫೋರ್ಟಲ್ ಪ್ರಕಾರ ಎಮರ್ಜೆನ್ಸಿ ಚಿತ್ರ ಈ ನಾಲ್ಕು ದಿನದಲ್ಲಿ ಕೇವಲ ಹನ್ನೊಂದು ಕೋಟಿಯನ್ನು ಮಾತ್ರ ಗಳಿಸಿದೆ. ನಿನ್ನೆಯಿಂದ ಚಿತ್ರದ ಗಳಿಕೆ ಕೂಡ ಕುಸಿದಿದೆ. ಈ ಹಿನ್ನೆಲೆ ಕಂಗನಾ ರಣಾವತ್ ಸಿಂಪತಿ ಗಿಟ್ಟಿಸಿಕೊಳ್ಳಲು ಈ ವಿಡಿಯೋವನ್ನು ಮಾಡಿದ್ದಾರೆ ಎನ್ನುವುದು ಅನೇಕರ ಅನುಮಾನ.


Click it and Unblock the Notifications











