ಅಲಿಯಾ ಕಾಣಿಸಿಕೊಂಡ ಜಾಹೀರಾತಿನ ವಿರುದ್ಧ ಕಿಡಿಕಾರಿದ ನಟಿ ಕಂಗನಾ
ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಇತ್ತೀಚಿಗಷ್ಟೆ ಕಾಣಿಸಿಕೊಂಡಿರುವ ಜಾಹಿರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ. 'ಕನ್ಯಾದಾನ'ದ ವಿಷಯವನ್ನು ಆಧಾರವಾಗಿಟ್ಟುಕೊಂಡು ಜಾಹಿರಾತನ್ನು ಮಾಡಲಾಗಿದ್ದು, ವಧುವನ್ನು ದಾನ ಮಾಡಲು ವಸ್ತುವೇ? ಎಂಬ ಪ್ರಶ್ನೆಯನ್ನು ಜಾಹಿರಾತು ಎತ್ತುತ್ತದೆ. ಈ ಜಾಹೀರಾತಿನ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದ್ದು, ಇದೀಗ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ.
ಆಲಿಯಾ ಹಾಗೂ ಜಾಹಿರಾತು ನಿರ್ಮಾಣ ಮಾಡಿದವರ ವಿರುದ್ಧ ಕಂಗನಾ ಕಿಡಿಕಾರಿದ್ದಾರೆ. ನಿಷ್ಕಪಟ ಗ್ರಾಹಕರನ್ನು ಸೆಳೆಯಲು ಧರ್ಮವನ್ನು ಎಳೆದು ತರಬೇಡಿ ಎಂದು ಕಂಗನಾ ಬ್ರ್ಯಾಂಡ್ ಗಳಲ್ಲಿ ಮನವಿ ಮಾಡಿದ್ದಾರೆ. ಜಾಹಿರಾತಿನ ಕುರಿತು ಕಂಗನಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ..

ಅಲಿಯಾ ಜಾಹೀರಾತಿನ ಬಗ್ಗೆ ಕಂಗನಾ ಕಿಡಿ
ಯಾವುದೇ ವಿಷಯವಾದರೂ ಮೊದಲು ಪ್ರತಿಕ್ರಿಯೆ ನೀಡುವ ಕಂಗನಾ, ಅಲಿಯಾ ಜಾಹೀರಾತಿನ ವಿಚಾರದಲ್ಲೂ ಕೆಂಡವಾಗಿದ್ದಾರೆ. 'ಕನ್ಯಾದಾನ'ದ ಕುರಿತಂತೆ ವಿವರಣೆಯನ್ನು ಮತ್ತು ಸಮರ್ಥನೆಯನ್ನೂ ನೀಡಿದ್ದಾರೆ. ಧರ್ಮಗ್ರಂಥಗಳಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆ. ಅವರನ್ನು 'ಅಸ್ತಿತ್ವದ ಅಮೂಲ್ಯ ಮೂಲ' ಎಂಬ ಪರಿಕಲ್ಪನೆಯಲ್ಲಿ ನೋಡುವುದರಿಂದ ಯಾವುದೇ ಹಾನಿ ಇಲ್ಲ ಎಂದು ಕಂಗನಾ ಸುದೀರ್ಘವಾದ ಪೋಸ್ಟ್ ಬರೆದಿದ್ದಾರೆ.

ಕಂಗನಾ ರಣಾವತ್ ಹೇಳಿದ್ದೇನು?
"ಎಲ್ಲಾ ಬ್ರಾಂಡ್ ಗಳಿಗೆ ನನ್ನ ವಿನಂತಿ. ಧರ್ಮ, ಅಲ್ಪಸಂಖ್ಯಾತ, ಬಹುಸಂಖ್ಯಾತ ರಾಜಕೀಯವನ್ನು ಲಾಭದ ಉದ್ದೇಶಕ್ಕಾಗಿ ಬಳಸಬೇಡಿ. ನಿಷ್ಕಪಟ ಗ್ರಾಹಕರನ್ನು ಒಡೆದು ಇಂತಹ ವಸ್ತುಗಳನ್ನು ಮಾರಾಟ ಮಾಡುವ ವಿಧಾನವನ್ನು ಕೈಬಿಡಿ" ಎಂದು ಕಂಗನಾ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ನಂತರ ಪೋಸ್ಟ್ನಲ್ಲಿ ಕನ್ಯಾದಾನದ ಕುರಿತು ಬರೆದಿರುವ ಕಂಗನಾ, ಹಿಂದೂ ಆಚರಣೆಗಳನ್ನು ಅಣಕಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಮೌಲ್ಯಾಧಾರಿತ ವ್ಯವಸ್ಥೆಯನ್ನು ಅಣಕಿಸಬೇಡಿ ಎಂದ ಕಂಗನಾ
''ಟಿವಿಯಲ್ಲಿ ಬರುವ ಕಾರ್ಯಕ್ರಮದಲ್ಲಿ ಕೂಡ ಗಡಿಯಲ್ಲಿ ಹೋರಾಡುತ್ತಾ, ಮಗನನ್ನು ಕಳೆದುಕೊಂಡ ಒಬ್ಬ ತಂದೆ- ಚಿಂತಿಸಬೇಡಿ, ತನಗೆ ಮತ್ತೊಬ್ಬ ಮಗನಿದ್ದಾನೆ. ಆತನನ್ನೂ ಈ ಮಣ್ಣಿಗೆ ತ್ಯಾಗ ಮಾಡಬಲ್ಲೆ ಎಂದು ಘರ್ಜಿಸುತ್ತಾರೆ. ಅಂತೆಯೇ ನಮ್ಮ ಸಮಾಜವು ತ್ಯಾಗದ ಪರಿಕಲ್ಪನೆಯನ್ನು ನೋಡುವ ವಿಧಾನವು ಅದರ ಮೌಲ್ಯಾಧಾರಿತ ವ್ಯವಸ್ಥೆಯನ್ನು ತೋರಿಸುತ್ತದೆ. ಅದನ್ನು ಅಣಕಿಸಬೇಡಿ'' ಎಂದು ಅವರು ಬರೆದಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?
ಅಲಿಯಾ ಕಾಣಿಸಿಕೊಂಡಿರುವ ಜಾಹೀರಾತಿನಲ್ಲಿ ತನ್ನ ಪತಿಯೊಂದಿಗೆ ಮಂಟಪದಲ್ಲಿ ಕುಳಿತಿದ್ದಾಗ, ಆಲಿಯಾ ತನ್ನ ಕುಟುಂಬದ ಪ್ರತಿಯೊಬ್ಬರೂ ಅಜ್ಜಿ, ತಂದೆ ಮತ್ತು ತಾಯಿ ಅವಳನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಮದುವೆಗಳಲ್ಲಿ ಕನ್ಯಾದಾನದ ವಿರುದ್ಧ ಆಕ್ಷೇಪಿಸುತ್ತಾರೆ. "ನಾನು ದಾನ ಮಾಡಬೇಕಾದ ವಿಷಯವೇ? ಏಕೆ ಕನ್ಯಾದಾನ ಮಾತ್ರ?" ಎಂದು ಹೇಳಿದ್ದಾರೆ.

ಪರ-ವಿರೋಧ ಚರ್ಚೆ
ಬಳಿಕ ಅವರ ಅತ್ತೆ ಮತ್ತು ಮಾವ ತಮ್ಮ ಮಗನನ್ನೂ ಕೂಡ ನೀಡಲು ಕೈ ಜೋಡಿಸುವುದರೊಂದಿಗೆ ಆಧುನಿಕ ಪರಿಕಲ್ಪನೆಯನ್ನು ಜಾಹಿರಾತಿನಲ್ಲಿ ನೀಡಲಾಗಿದೆ. ಇದಕ್ಕೆ 'ಕನ್ಯಾಮಾನ್' ಎಂದು ಹೇಳುವುದರೊಂದಿಗೆ ಜಾಹಿರಾತು ಮುಕ್ತಾಯವಾಗುತ್ತದೆ. ಈ ಜಾಹೀರಾತಿಗೆ ಅನೇಕ ವಿರೋಧ ವ್ಯಕ್ತವಾಗಿದೆ. ಇನ್ನು ಕೆಲವರು ಅದ್ಭುತವಾಗಿದೆ ಎಂದು ಪ್ರಶಂಸೆ ನೀಡುತ್ತಿದ್ದಾರೆ. ಕಂಗನಾ ಹೇಳಿಕೆಗೂ ಸಹ ಪರ ವಿರೋಧ ಚರ್ಚೆ ಶುರುವಾಗಿದೆ.


Click it and Unblock the Notifications











