'ಜಲ್ಲಿಕಟ್ಟು' ತಂಡಕ್ಕೆ ಕಂಗನಾ ಅಭಿನಂದನೆ; 'ಮಾಫಿಯಾ ಗ್ಯಾಂಗ್' ಮನೆಯಲ್ಲಿ ಅಡಗಿಕೊಂಡಿದೆ ಎಂದ ನಟಿ
ಮಲಯಾಳಂನ 'ಜಲ್ಲಿಕಟ್ಟು' ಸಿನಿಮಾ ಆಸ್ಕರ್ ಅಂಗಳಕ್ಕೆ ಲಗ್ಗೆ ಇಟ್ಟಿದೆ. ಭಾರತದಿಂದ 2021ರ ಆಸ್ಕರ್ ಸ್ಪರ್ಧೆಗೆ ಅಧಿಕೃತವಾಗಿ ಪ್ರವೇಶ ಪಡೆದ ಸಿನಿಮಾ ಇದಾಗಿದೆ. ಸೆಪ್ಟಂಬರ್ 2019 ರಂದು ಬಿಡುಗಡೆಯಾದ ಈ ಸಿನಿಮಾ ವಿಭಿನ್ನವಾದ ಕಥೆ ಹೊಂದಿರುವ ಮಹತ್ವದ ಸಂದೇಶವನ್ನು ಕಟ್ಟಿಕೊಡುವ ಚಿತ್ರವಾಗಿದೆ.
ಜಲ್ಲಿಕಟ್ಟು ಚಿತ್ರಕ್ಕೆ ಲಿಜೊ ಜೋಸ್ ನಿರ್ದೇಶನ ಮಾಡಿದ್ದಾರೆೆ. ಆಸ್ಕರ್ ಪ್ರಶಸ್ತಿಯ ವಿದೇಶಿ ಭಾಷಾ ಸಿನಿಮಾ ವಿಭಾಗದಲ್ಲಿ ಭಾರತದಿಂದ ಜಲ್ಲಿಕಟ್ಟು ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ನಟಿ ಕಂಗನಾ ರಣಾವತ್ ಸಂತಸ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸಿನಿಮಾ ಹೊರತುಪಡಿಸಿ ಪ್ರಾದೇಶಿಕ ಭಾಷೆಯ ಚಿತ್ರವೊಂದು ಆಸ್ಕರ್ ಅಂಗಳಕ್ಕೆ ಲಗ್ಗೆ ಇಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುವ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಸದಾ ಏನಾದರೊಂದು ಪೋಸ್ಟ್ ಮಾಡುತ್ತಿರುತ್ತಾರೆ. ತನಗನಿಸಿದನ್ನು ನೇರವಾಗಿ ಹೇಳುವ ಕಂಗನಾ ಇದೀಗ ಜಲ್ಲಿಕಟ್ಟು ಸಿನಿಮಾ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, 'ಭಾರಿ ವಿರೋಧದ ಬಳಿಕ ಅಂತಿಮವಾಗಿ ಕೆಲವು ಫಲಿತಾಂಶ ಸಿಕ್ಕಿದೆ. ಭಾರತೀಯ ಸಿನಿಮಾಗಳು ಕೇವಲ 4 ಚಲನಚಿತ್ರ ಕುಟುಂಬಗಳಲ್ಲ. ಸಿನಿಮಾ ಮಾಫಿಯಾ ಗ್ಯಾಂಗ್ ತಮ್ಮ ಮನೆಯಲ್ಲಿ ಅಡಗಿಕೊಂಡಿದೆ. ಆಯ್ಕೆದಾರರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದ್ದಾರೆ. ಜಲ್ಲಿಕಟ್ಟು ತಂಡಕ್ಕೆ ಅಭಿನಂದನೆಗಳು' ಎಂದು ಹೇಳಿದ್ದಾರೆ.
27 ಸಿನಿಮಾಗಳ ನಡುವೆ ಜಲ್ಲಿಕಟ್ಟು ಸಿನಿಮಾವನ್ನು ಅಂತಿಮವಾಗಿ ಆಯ್ಕೆ ಮಾಡಿ ಸ್ಪರ್ಧೆಗೆ ಕಳುಹಿಸಲಾಗಿದೆ. ಶಂಕುತಲಾ ದೇವಿ, ಚಪಾಕ್, ಗುಲಾಬೊ ಸಿತಾಬೊ, ಚಲಾಂಗ್ ಸೇರಿದಂತೆ ಇನ್ನು ಹಲವು ಸಿನಿಮಾಗಳ ನಡುವೆ ಸ್ಪರ್ಧೆ ನಡೆಸಿ ಜಲ್ಲಿಕಟ್ಟು ಆಸ್ಕರ್ ಗೆ ಲಗ್ಗೆ ಇಟ್ಟಿದೆ.
ನಟಿ ಕಂಗನಾ ರಣಾವತ್ ಬಾಲಿವುಡ್ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ. ಬಾಲಿವುಡ್ ಕೆಲವೇ ಕೆಲವರ ಹಿಡಿತದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬಾಲಿವುಡ್ ಸಿನಿಮಾ ಹೊರತುಪಡಿಸಿ ಜಲ್ಲಿಕಟ್ಟು ಸಿನಿಮಾ ಆಯ್ಕೆ ಆಗಿರುವುದು ಕಂಗನಾ ಸೇರಿದಂತೆ ಅನೇಕರಿಗೆ ಸಂತಸ ತಂದಿದೆ.
ಕಂಗನಾ ಸದ್ಯ ತಲೈವಿ ಸಿನಿಮಾದ ಚಿತ್ರೀಕರಣ ಮುಗಿಸಿ ಮುಂದಿನ ಸಿನಿಮಾಗಳ ತಯಾರಿಯಲ್ಲಿದ್ದಾರೆ. ತೇಜಸ್ ಸಿನಿಮಾಗಾಗಿ ಕಂಗನಾ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ತೇಜಸ್ ಜೊತೆಗೆ ಕಂಗನಾ ಧಾಕಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.


Click it and Unblock the Notifications











