ಸಂಗಾತಿ ಇಲ್ಲದ ಬದುಕು ತುಂಬಾ ಕಷ್ಟ, ಮದುವೆಯ ಬಗ್ಗೆ ಮೌನ ಮುರಿದ ಬಾಲಿವುಡ್ ಕ್ವೀನ್...!
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಹೀಗಾಗಿಯೇ ಮದುವೆ ಬೇಡ ಎಂದು ತೀರ್ಮಾನ ಮಾಡಿರುವವರು ಕೂಡ ಇವರ ಈ ಕಿರುಕುಳದಿಂದ ತಪ್ಪಿಸಿಕೊಳ್ಳಲಾದರೂ ಮದುವೆಗೆ ರೆಡಿಯಾಗಿ ಬಿಡುತ್ತಾರೆ. ಇದಕ್ಕೆ ಕಂಗನಾ ರಣಾವತ್ ಸದ್ಯದ ಉದಾಹರಣೆ.
ಹೌದು, ತನ್ನ ಅಮೋಘ ಅಭಿನಯದಿಂದ ಅಭಿಮಾನಿಗಳ ಹೃದಯ ಗೆದ್ದಿರುವ ಕಂಗನಾ, ಮದುವೆಯ ಕುರಿತು ಮಾತನಾಡಿದ್ದಾರೆ. ಎಲ್ಲರಂತೆ ನನಗೂ ಆಸೆ ಆಕಾಂಕ್ಷೆಗಳಿವೆ ಎಂದಿರುವ ಕಂಗನಾ, ಇಂದಲ್ಲ ನಾಳೆ ನಾನು ಮದುವೆಯಾಗುತ್ತೇನೆ ಎಂದಿದ್ದಾರೆ. ಇನ್ನೂ.. ಕಂಗನಾ ಈ ಹಿಂದೆ ಹೃತಿಕ್ ರೋಷನ್ ಜೊತೆ ಲವ್ವಲ್ಲಿ ಬಿದ್ದಿದ್ದರು. ಆ ನಂತರ ರಣರಂಪ ಮಾಡಿಕೊಂಡು ದೂರವಾದರು. ಕೇವಲ ಹೃತಿಕ್ ಮಾತ್ರ ಅಲ್ಲ ಕಂಗನಾ ಬದುಕಿನಲ್ಲಿ ಇಲ್ಲಿಯವರೆಗೆ ಅನೇಕರು ಬಂದು ಹೋಗಿದ್ದಾರೆ. ಒಂದರ್ಥದಲ್ಲಿ ಪ್ರೀತಿ ವಿಚಾರದಲ್ಲಿ ಕಂಗನಾಗೆ ಬದುಕು ತುಂಬಾ ಪಾಠ ಕಲಿಸಿದೆ. ಹೀಗಾಗಿಯೇ ಏನೋ ನಿಮ್ಮ ಸಂಗಾತಿಯನ್ನು ನೀವು ಹುಡುಕಿಕೊಂಡರೆ ಅದು ದೊಡ್ಡ ಆಪತ್ತು ಎಂದಿರುವ ಕಂಗನಾ,ಸಂಗಾತಿಯನ್ನು ಹುಡುಕುವುದು ಕೂಡ ದೊಡ್ಡ ಸವಾಲು ಎಂದಿದ್ದಾರೆ. ಪ್ರೀತಿ ಅದಾಗಿ ಅದೇ ಆಗಬೇಕು ಎಂದು ಕೂಡ ಹೇಳಿದ್ದಾರೆ.

ಇನ್ನೂ, ಬದುಕಿನಲ್ಲಿ ಪ್ರತಿಯೊಬ್ಬರು ಸಂಗಾತಿಯನ್ನು ಹೊಂದುವುದು ಅಗತ್ಯ ಎಂದಿರುವ ಕಂಗನಾ, ಲೈಫ್ ಪಾರ್ಟ್ನರ್ ಇಲ್ಲದೇ ಬದುಕುವುದು ಹೇಗೆ ಕಷ್ಟವೋ ಅದೇ ರೀತಿ ಹೊಂದಾಣಿಕೆ ಮಾಡಿಕೊಂಡು ಅವರ ಜೊತೆ ಬದುಕುವುದು ಕೂಡ ಕಷ್ಟ ಎಂದಿದ್ದಾರೆ. ಎಲ್ಲ ತಂದೆ-ತಾಯಿಯಂತೆ ನನ್ನ ಮದುವೆ ವಿಚಾರದಲ್ಲಿ ನನ್ನ ಹೆತ್ತವರಲ್ಲಿ ಕೂಡ ಆತಂಕ ಇದ್ದೇ ಇದೆ ಎಂದಿದ್ದಾರೆ.

ಮುಂದುವರೆದು, ಸಣ್ಣ ವಯಸ್ಸಿನಲ್ಲಿಯೇ ಮದುವೆಯಾಗುವ ಪ್ರಯೋಜನಗಳನ್ನೂ ಹೇಳಿರುವ ಕಂಗನಾ, ವಯಸ್ಸಾದಂತೆ ಹೊಂದಿಕೊಳ್ಳಲು ಹೆಚ್ಚು ಕಷ್ಟವಾಗುತ್ತೆ, ಆದರೆ ಅದೇ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದರೆ ಹೊಂದಾಣಿಕೆ ಸುಲಭವಾಗುತ್ತೆ ಎಂದಿದ್ಧಾರೆ. ಹದಿಹರೆಯದಲ್ಲಿ ಉತ್ಸಾಹವೂ ಹೆಚ್ಚಿರುತ್ತೆ ಎಂದಿದ್ದಾರೆ. ಹೀಗಾಗಿಯೇ ಹಳ್ಳಿಗಳಲ್ಲಿ ಎಲ್ಲ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡ್ತಾರೆ ಎಂದು ಹೇಳಿದ್ದಾರೆ ಕಂಗನಾ ರಣಾವತ್.

ಅಂದ್ಹಾಗೇ ಈ ವರ್ಷದ ಆರಂಭದಲ್ಲಿ ಕಂಗನಾ ಹೆಸರು EaseMyTrip ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆ ಥಳುಕು ಹಾಕಿಕೊಂಡಿತ್ತು. ಇನ್ನೇನು ಇಬ್ಬರು ಮದುವೆಯಾಗಲಿದ್ಧಾರೆ ಎನ್ನುವ ಪುಕಾರು ಹಬ್ಬಿತ್ತು. ಆದರೆ, ಖುದ್ದು ಕಂಗನಾ ಈ ವಿಚಾರವನ್ನು ಅಲ್ಲಗೆಳೆದಿದ್ದರು. ನಿಶಾಂತ್ ಸಂಸಾರಸ್ಥ ಪ್ಲೀಸ್ ಈ ತರಹದ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದರು. ನಾನು ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ, ಸರಿಯಾದ ಸಮಯ ಬಂದಾಗ ಎಲ್ಲವನ್ನೂ ನಾನೇ ಹೇಳುತ್ತೇನೆ ಎಂದಿದ್ದರು. ಇಂಥಾ ಕಂಗನಾ ಈಗ ರಾಜ್ ಶಮಾನಿ ಅವರು ನಡೆಸಿಕೊಡುವ ಪಾಡ್ಕಾಸ್ಟ್ನಲ್ಲಿ ಮದುವೆಯ ಬಗ್ಗೆ ಮಾತನಾಡಿದ್ಧಾರೆ. ಹೀಗಾಗಿಯೇ ಕಂಗನಾ ಹೇಳಿದ್ದ ಆ ಸಮಯ ಈಗ ಬಂದಿದೆ. ಕಂಗನಾ ಮದುವೆಗೆ ವೇದಿಕೆ ಸಿದ್ಧವಾಗುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ಧಾರೆ


Click it and Unblock the Notifications











