'ಪಠಾಣ್' ಸಿನಿಮಾಕ್ಕೆ ಬೇರೊಂದು ಹೆಸರು ಸೂಚಿಸಿದ ಕಂಗನಾ! ಏಕೆ?
ಕೆಲ ಕಾಲ ಹೆಚ್ಚು ಸುದ್ದಿಯಲ್ಲಿರದಿದ್ದ ನಟಿ ಕಂಗನಾ ರನೌತ್ ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ. ವಿಶೇಷವೆಂದರೆ ದ್ವೇಷ ಕಾರುವ ಟ್ವೀಟ್ಗಳನ್ನು ಮಾಡಿದ್ದ ಕಾರಣ ರದ್ದಾಗಿದ್ದ ಕಂಗನಾರ ಟ್ವಿಟ್ಟರ್ ಖಾತೆ ಈಗ ಮತ್ತೆ ಸಕ್ರಿಯಗೊಂಡಿದೆ! ಹಾಗಾಗಿ ಮತ್ತೆ ಸರಣಿ ಟ್ವೀಟ್ಗಳನ್ನು ಕಂಗನಾ ಮಾಡುತ್ತಿದ್ದಾರೆ.
ಬಾಲಿವುಡ್ ಮಾತ್ರವಲ್ಲದೆ ದೇಶದ ಪ್ರಸಕ್ತ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಆಕ್ರಮಣಕಾರಿ ರೀತಿಯಲ್ಲಿ ಹರಿಬಿಡುತ್ತಲೇ ಬಂದಿರುವ ಕಂಗನಾ ರನೌತ್ ಇದೀಗ ಬಾಲಿವುಡ್ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ಬಗ್ಗೆಯೂ ಸರಣಿ ಟ್ವೀಟ್ಗಳನ್ನು ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೊದಲಿಗೆ ಸಿನಿಮಾದ ದೊಡ್ಡ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಂಗನಾ ರನೌತ್, 'ಇಂಥಹಾ ಸಿನಿಮಾಗಳು ಬಾಲಿವುಡ್ಗೆ ಬೇಕಾಗಿದೆ'' ಎಂದಿದ್ದಾರೆ. ಆದರೆ ಮುಂದುವರೆದು ಮತ್ತೊಂದು ಸರಣಿ ಟ್ವೀಟ್ನಲ್ಲಿ ಸಿನಿಮಾದ ಬಗ್ಗೆ ಹಾಗೂ ಸಿನಿಮಾ ಬಗ್ಗೆ ಕರಣ್ ಜೋಹರ್ ಮಾಡಿರುವ ಕಮೆಂಟ್ ಬಗ್ಗೆ ಖ್ಯಾತೆ ತೆಗೆದಿದ್ದಾರೆ.

''ಪಠಾಣ್' ಸಿನಿಮಾವನ್ನು ಗೆಲ್ಲಿಸುತ್ತಿರುವುದು ಭಾರತೀಯರು'
'ಪಠಾಣ್' ಬಗ್ಗೆ ಟ್ವೀಟ್ ಮಾಡಿದ್ದ ಕರಣ್ ಜೋಹರ್, 'ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವು' ಎಂದಿದ್ದರು. ಆದರೆ ಇದನ್ನು ವಿರೋಧಿಸಿರುವ ಕಂಗನಾ ರನೌತ್ ''ದ್ವೇಷದ ವಿರುದ್ಧ ಪ್ರೀತಿಯ ಗೆಲುವು' ಎಂದು ಹೇಳುತ್ತಿರುವುದನ್ನು ಒಪ್ಪಬಹುದು ಆದರೆ ಅದು ಯಾರ ದ್ವೇಷದ ವಿರುದ್ಧ ಯಾರ ಪ್ರೀತಿಯ ಗೆಲುವು? ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು, ''ನಿಖರವಾಗಿ ನೋಡುವುದಾದರೆ, 'ಪಠಾಣ್' ಸಿನಿಮಾದ ಟಿಕೆಟ್ ಖರೀದಿಸಿ ಗೆಲ್ಲಿಸುತ್ತಿರುವುದು ಭಾರತೀಯರು. 80 ಶೇಕಡಾ ಜನ ಹಿಂದೂಗಳಾಗಿದ್ದರೂ 'ಪಠಾಣ್' ಹೆಸರಿನ ಸಿನಿಮಾವನ್ನು ಅವರು ಗೆಲ್ಲಿಸುತ್ತಿದ್ದಾರೆ'' ಎಂದು ಧರ್ಮ ಎಳೆದು ತಂದಿದ್ದಾರೆ ಕಂಗನಾ.

'ಕೊನೆಗೆ ಇಲ್ಲಿ ಮೊಳಗುವುದು 'ಜೈ ಶ್ರೀರಾಮ್' ಮಾತ್ರ'
ಮುಂದಿನ ಟ್ವೀಟ್ನಲ್ಲಿ, ''ಪಠಾಣ್' ಸಿನಿಮಾವು ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನ ಹಾಗೂ ಅಲ್ಲಿನ ಆಂತರಿಕ ರಕ್ಷಣಾ ಸಂಸ್ಥೆ ಐಎಸ್ಐ ಅನ್ನು ಮೆದು ಧೋರಣೆಯಿಂದ ತೋರಿಸಿದೆ. ಆದರೂ 'ಪಠಾಣ್' ಸಿನಿಮಾ ಯಶಸ್ಸು ಗಳಿಸುತ್ತಿದೆ. ದ್ವೇಷಗಳ ಹೊರತಾಗಿಯೂ ಸಿನಿಮಾವನ್ನು ಗೆಲ್ಲಿಸುತ್ತಿರುವುದು ಭಾರತೀಯರ ಸ್ಪೂರ್ತಿ. ಸಿನಿಮಾದ ಯಶಸ್ಸು, ಶತ್ರುಗಳ ರಾಜಕಾರಣದ ವಿರುದ್ಧ ಭಾರತೀಯರ ಪ್ರೀತಿಯ ಗೆಲುವು. ಆದರೆ 'ಪಠಾಣ್' ಕೇವಲ ಒಂದು ಸಿನಿಮಾ ಮಾತ್ರ, ಭಾರತದಲ್ಲಿ ಯಾವಾಗಲೂ ಮೊಳಗುವುದು 'ಜೈ ಶ್ರೀರಾಮ್' ಘೋಷಣೆಯೊಂದೆ'' ಎಂದಿದ್ದಾರೆ ಕಂಗನಾ.

ಭಾರತದ ಮುಸ್ಲೀಮರು ದೇಶಪ್ರೇಮಿಗಳು: ಕಂಗನಾ
''ಭಾರತದ ಮುಸ್ಲೀಮರು ದೇಶಪ್ರೇಮಿಗಳು ಎಂಬುದನ್ನೂ ನಾನೂ ನಂಬುತ್ತೇನೆ. ಭಾರತೀಯ ಮುಸ್ಲೀಮರು ಅಫ್ಘನ್ನ ಮುಸ್ಲೀಮರಿಗಿಂತಲೂ ಬಹಳ ಭಿನ್ನ. ಭಾರತದ ಆತ್ಮ ಎಂದೂ ಅಫ್ಗನಿಸ್ತಾನ ಆಗುವುದಿಲ್ಲ. ಅಫ್ಘನಿಸ್ತಾನದಲ್ಲಿ ಈಗ ಏನಾಗುತ್ತಿದೆ ಎಂಬುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ನರಕಕ್ಕಿಂತಲೂ ಭೀಕರವಾಗಿ ಅಫ್ಘನಿಸ್ತಾನ ಬದಲಾಗಿದೆ. ಹಾಗಾಗಿ ಈ ಸಿನಿಮಾಕ್ಕೆ ಸರಿಯಾದ ಹೆಸರೆಂದರೆ ಅದು 'ಭಾರತದ ಪಠಾಣ್' ಬರೀ 'ಪಠಾಣ್' ಅಲ್ಲ ಎಂದು ಕಂಗನಾ ಹೇಳಿದ್ದಾರೆ.

ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಪಠಾಣ್'
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಮೊದಲ ದಿನವೇ ಹಲವು ದಾಖಲೆಗಳನ್ನು ಮರಿದು 55 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. 'ಪಠಾಣ್' ಸಿನಿಮಾದ ಯಶಸ್ಸನ್ನು ಬಾಲಿವುಡ್ನ ಹಲವರು ಸ್ವಾಗತಿಸಿದ್ದಾರೆ. ಅಂತೆಯೇ ಕಂಗನಾ ಸಹ ಸಿನಿಮಾದ ಯಶಸ್ಸನ್ನು ಸ್ವಾಗತಿಸಿದ್ದಾರಾದರೂ ಸಣ್ಣ ಖ್ಯಾತೆಯನ್ನೂ ತೆಗೆದಿದ್ದಾರೆ. 'ಪಠಾಣ್' ಸಿನಿಮಾವು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ. ಜಾನ್ ಅಬ್ರಹಾಂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications










