ಮಹಾರಾಷ್ಟ್ರ ರಾಜ್ಯಪಾಲರ ಭೇಟಿಗೆ ಮುಂದಾದ ನಟಿ ಕಂಗನಾ ರಣಾವತ್
ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾಗುತ್ತಿದ್ದಾರೆ. ಮುಂಬೈ ಮಹಾನಗರ ಪಾಲಿಕೆ, ಬಾಂದ್ರಾದಲ್ಲಿರುವ ಕಂಗನಾ ಕಚೇರಿಯನ್ನು ಒಡೆದು ಹಾಕಿದ ಬಗ್ಗೆ ಮತ್ತು ಶಿವಸೇನೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯಪಾಲರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಶಿವಸೇನೆ ಮತ್ತು ಕಂಗನಾ ನಡುವಿನ ವಾಕ್ಸಮರ ಹೆಚ್ಚಾಗುತ್ತಿರುವ ನಡುವೆ ಕಂಗನಾ ರಾಜ್ಯಪಾಲರನ್ನು ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಮುಂಬೈಯಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ ಆಗುವ ಮೊದಲು ಕಂಗನಾ ರಾಜ್ಯಪಾಲರನ್ನು ಭೇಟಿಯಾಗುವ ನಿರ್ಧಾರ ಮಾಡಿದ್ದಾರೆ.
ಇಂದು (ಸೆಪ್ಟಂಬರ್ 13) ಸಂಜೆ 4.30ಕ್ಕೆ ಕಂಗನಾ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾರೆ. ಕಂಗನಾ, ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಬಳಿಕ ಶಿವ ಸೇನೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ಮುಂಬೈ ಪೊಲೀಸರ ವಿರುದ್ಧವು ಕಂಗನಾ ಕಿಡಿಕಾರುತ್ತಿದ್ದಾರೆ. ಕಂಗನಾ ಮತ್ತು ಶಿವಸೇನೆ ನಡುವಿನ ಕಿತ್ತಾಟದ ನಡುವೆ ಕಂಗನಾ ಬೆಂಗಲೆಯನ್ನು, ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿದೆ.

ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರವನ್ನು ಅನೇಕರು ಖಂಡಿಸಿದ್ದಾರೆ. ಒಡೆದ ಕಚೇರಿಯಲ್ಲಿಯೇ ಕೆಲಸ ಮುಂದುವರೆಸುವುದಾಗಿ ಕಂಗನಾ ಹೇಳಿದ್ದಾರೆ. ಲಾಕ್ ಡೌನ್ ಬಳಿಕ ಕಂಗನಾ ಹಿಮಾಚಲ ಪ್ರದೇಶದಲ್ಲಿ ನೆಲೆಸಿದ್ದರು. ಕಂಗನಾ ಇದೇ ತಿಂಗಳು 9ರಂದು ವೈ ಪ್ಲಸ್ ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ್ದಾರೆ. ಸೆಪ್ಟಂಬರ್ 14ಕ್ಕೆ ಹುಟ್ಟೂರಿಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











