ಕಂಗನಾ ರಣಾವತ್ ನಿರ್ಮಾಣದಲ್ಲಿ 'ಅಯೋಧ್ಯೆ' ವಿವಾದ ಕುರಿತ ಸಿನಿಮಾ
ಬಾಲಿವುಡ್ ನ ಖ್ಯಾತ ನಟಿ ಕಂಗನಾ ರಣಾವತ್ ಇತ್ತೀಚಿಗಷ್ಟೆ ಜಯಲಲಿತಾ ಸಿನಿಮಾ ಟೀಸರ್ ಮೂಲಕ ಸುದ್ದಿಯಲ್ಲಿದ್ದರು. ಇದರ ಬೆನ್ನಲೆ ಈಗ ಮತ್ತೊಂದು ವಿಚಾರದ ಮೂಲಕ ಸದ್ದು ಮಾಡುತ್ತಿದ್ದಾರೆ. ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಕಂಗನಾ ಈಗ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಈಗಾಗಲೆ 'ಮಣಿಕರ್ಣಿಕಾ' ಸಿನಿಮಾ ಮೂಲಕ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದ ಕಂಗನಾ ಈಗ ನಿರ್ಮಾಣ ಕ್ಷೇತ್ರಕ್ಕೂ ಇಳಿಯುತ್ತಿದ್ದಾರೆ.
ಅಂದ್ಹಾಗೆ ಕಂಗನಾ ಅಯೋಧ್ಯೆ ವಿವಾದದ ಕುರಿತು ಸಿನಿಮಾಗೆ ಬಂಡವಾಳ ಸಜ್ಜಾಗಿದ್ದಾರೆ. ಈ ಮೂಲಕ ಫ್ಯಾಶನ್ ಬೆಡಗಿ ನಿರ್ಮಾಣ ಪ್ರಪಂಚಕ್ಕೂ ಕಾಲಿಡುತ್ತಿದ್ದಾರೆ. ರಾಮ ಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ವಿಚಾರ ಈ ಸಿನಿಮಾದಲ್ಲಿ ಇರಲಿದ್ದು ಈ ಚಿತ್ರಕ್ಕೆ 'ಅಪಾರಿಜಿತ ಅಯೋಧ್ಯೆ' ಎಂದು ಟೈಟಲ್ ಇಡಲಾಗಿದೆ.
ಈಗಾಗಲೆ ಚಿತ್ರಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ವಿಶೇಷ ಅಂದರೆ ಚಿತ್ರಕ್ಕೆ 'ಬಾಹುಬಲಿ' ಸೃಷ್ಟಿಕರ್ತ ಕೆ.ವಿ ವಿಜೇಂದ್ರ ಪ್ರಸಾದ್ ಸ್ಕ್ರಿಪ್ಟ್ ಬರೆಯುತ್ತಿದ್ದಾರಂತೆ.

ಈ ಬಗ್ಗೆ ಮಾತನಾಡಿದ ಕಂಗನಾ, "ನೂರಾರು ವರ್ಷಗಳಿಂದ ರಾಮ ಮಂದಿರ ಬಗ್ಗೆ ಕೇಳುತ್ತಲೆ ಇದ್ದೀವಿ. ಅಲ್ಲದೆ ನಾನು ಮುಗುವಾಗಿದ್ದಾಗ ಅಂದರೆ 80 ದಶಕದಿಂದ ಅಯೋಧ್ಯೆ ಹೆಸರನ್ನು ನಕರಾತ್ಮಕ ದೃಷ್ಟಿಯಲ್ಲಿ ಕೇಳುತ್ತ ಬೆಳೆದಿದ್ದೀವಿ. ಸುಪ್ರೀಂ ಕೋರ್ಟ್ ತೀರ್ಪು ಶತಮಾನದ ವಿವಾದಕ್ಕೆ ಅಂತ್ಯ ಹಾಡಿದೆ. ಈ ತೀರ್ಪು ಭಾರತದ ಜಾತ್ಯಾತೀತ ಮನೋಭಾವವನ್ನು ಸಾಕಾರಗೊಳಿಸಿ, ಶತಮಾನಗಳಷ್ಟು ಹಳೆಯದಾದ ವಿವಾದ ಕೊನೆಗೊಂಡಿದೆ. ಈ ಎಲ್ಲಾ ಅಂಶಗಳು ಸಿನಿಮಾದಲ್ಲಿ ಇರುತ್ತೆ. ನನ್ನ ಮೊದಲ ನಿರ್ಮಾಣದ ಸಿನಿಮಾಗೆ ಇದು ಸೂಕ್ತ" ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಕಂಗನಾ ಕೂಡ ಬಣ್ಣ ಹಚ್ಚುತ್ತಾರಾ ಎನ್ನುವ ಬಗ್ಗೆ ಬಹಿರಂಗ ಪಡಿಸಿಲ್ಲ. ಆದರೆ ಈಗಾಗಲೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕಂಗನಾ ಸದ್ಯ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಭಿನಯದ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಳ್ಳುವ ಮೂಲಕ ಮತ್ತಷ್ಟು ಬ್ಯುಸಿಯಾಗುತ್ತಿದ್ದಾರೆ.


Click it and Unblock the Notifications











