ಅಮೀರ್ ಖಾನ್ ಸಿನಿಮಾದ ದೃಶ್ಯ ಪೋಸ್ಟ್ ಮಾಡಿ 'ಹಿಂದೂ ಆಗಿರುವುದಕ್ಕೆ ಹೆಮ್ಮೆ' ಎಂದ ಕಂಗನಾ!
ಪ್ರವಾದಿ ಮೊಹಮ್ಮದ್ರ ಅವಹೇಳನ ವಿವಾದದ ಬಗ್ಗೆ ಹಲವರು ತಮ್ಮದೇ ಆದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ಕಂಗನಾ ರನೌತ್ ಅಮೀರ್ ಖಾನ್ ನಟಿಸಿರುವ ಸಿನಿಮಾ ಒಂದರ ದೃಶ್ಯದ ಉದಾಹರಣೆ ನೀಡಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಈ ವಿವಾದ ದೊಡ್ಡದಾಗುತ್ತಾ ಸಾಗಿದ್ದು, ಎಲ್ಲರೂ ಈ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ತಮ್ಮದೇ ಆದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇದೇ ವೇಳೆ ಬಾಲಿವುಡ್ ನಟಿ ಕಂಗನಾ ರನೌತ್ ಸಹ ಈ ವಿಷಯದ ಬಗ್ಗೆ ಮಾತನಾಡಿದ್ದು, ಅಮೀರ್ ಖಾನ್ ಅಭಿನಯದ 'ಪಿಕೆ' ಸಿನಿಮಾದ ದೃಶ್ಯ ಉಲ್ಲೇಖಿಸಿ 'ಹಿಂದೂ ಆಗಿರುವುದಕ್ಕೆ ಹೆಮ್ಮೆ' ಎಂದಿದ್ದಾರೆ.
ಕಂಗನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಶಿವನ ವೇಷದಲ್ಲಿರುವ ಕಲಾವಿದ ವಾಶ್ ರೂಂನಲ್ಲಿ ಇರುವ 'ಪಿಕೆ' ಸಿನಿಮಾದ ದೃಶ್ಯವನ್ನು ಹಂಚಿಕೊಂಡಿದ್ದಾರೆ ಕಂಗನಾ. ಜೊತೆಗೆ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನೇತುಹಾಕಿರುವ ಚಿತ್ರವನ್ನು ಅದರ ಜೊತೆಗೆ ಶೇರ್ ಮಾಡಿದ್ದಾರೆ. ಅಮೀರ್ ಖಾನ್ ನಟಿಸಿರುವ 'ಪಿಕೆ' ಸಿನಿಮಾದಲ್ಲಿ ಶಿವ ವೇಷಧಾರಿಯನ್ನು ಅಮೀರ್ ಖಾನ್ ಅಟ್ಟಾಡಿಸಿಕೊಂಡು ಹೋಗುವ ತಮಾಷೆಯ ದೃಶ್ಯವೊಂದಿದೆ. ಸಿನಿಮಾ ಬಿಡುಗಡೆ ಆದಾಗ ಆ ದೃಶ್ಯದ ಬಗ್ಗೆ ಆಗಲೂ ಹಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈಗ ಅದೇ ದೃಶ್ಯದ ಚಿತ್ರವೊಂದನ್ನು ಕಂಗನಾ ಹಂಚಿಕೊಂಡಿದ್ದಾರೆ.

ನಾನು ಹಿಂದೂ ಆಗಿರುವುದಕ್ಕೆ ಹೆಮ್ಮೆ ಪಡಲು ಇದೇ ಕಾರಣ, ಇಂತಹ ಮೂರ್ಖತನದ (ಪಿಕೆ ಸಿನಿಮಾದ ದೃಶ್ಯ ಉಲ್ಲೇಖಿಸಿ) ನಂತರವೂ ನನ್ನ ಶಿವಂ ಅಸಮಾಧಾನಗೊಳ್ಳಲಿಲ್ಲ, ಇದು ನನ್ನ ಆಧ್ಯಾತ್ಮಿಕತೆ ಮತ್ತು ನಂಬಿಕೆಗೆ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. 'ಹಿಂದೂ ಆಗಿರುವುದಕ್ಕೆ ಹೆಮ್ಮೆ ಇದೆ' ಎಂದು ಕಂಗನಾ ಬರೆದುಕೊಂಡಿದ್ದಾರೆ.
''ಸಿಟ್ಟಿನ ಭರದಲ್ಲಿ ಹದೀಸ್ ಅನ್ನು ಮಹಿಳೆಯೊಬ್ಬಾಕೆ (ನೂಪುರ್) ಉಲ್ಲೇಖಿಸಿದ್ದಾಳೆ. ಆದರೆ ಇಡೀ ದೇಶವೇ ಏನೋ ಆಗಿಬಿಟ್ಟಂತೆ ವರ್ತಿಸುತ್ತಿದೆ. ಹೀಗೆ ಮಾಡುತ್ತಿರುವುದು ಎಂಥಹಾ ಜನ'' ಎಂದಿರುವ ಕಂಗನಾ ''ಇದು ತುಂಬಾ ಆತಂಕಕಾರಿ ವರ್ತನೆ'' ಎಂದಿದ್ದಾರೆ.
ನೂಪುರ್ ಶರ್ಮಾ ಅವರ ಪ್ರತಿಕೃತಿ ನೇತಾಡುತ್ತಿರುವ ಚಿತ್ರವನ್ನು ಕಂಗನಾ ಹಂಚಿಕೊಂಡಿದ್ದು, 'ಈ ಭಯಾನಕ ಚಿತ್ರವು ಅಫ್ಘಾನಿಸ್ತಾನದಿಂದ ಬಂದಿದ್ದಲ್ಲ. ಭಾರತದ 'ಶಾಂತಿಪ್ರಿಯ' ಜನರು ನೂಪುರ್ ಅವರ ಪ್ರತಿಮೆಯನ್ನು ನೇತು ಹಾಕಿರುವ ದೃಶ್ಯ ಎಂದು ಬರೆದುಕೊಂಡಿದ್ದಾರೆ ಕಂಗನಾ.
ಧರ್ಮದ ವಿಷಯ ವಿವಾದವಾದಾಗೆಲ್ಲ ಕಂಗನಾ ರನೌತ್ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಈ ಹಿಂದೆಯೂ ಹಲವು ಬಾರಿ ಧರ್ಮದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಕೃಷಿ ಕಾಯ್ದೆ ವಿರೋಧಿಸಿ ರೈತರು ಮಾಡಿದ್ದ ಬೃಹತ್ ಪ್ರತಿಭಟನೆ ಬಗ್ಗೆಯೂ ಹಲವು ವಿವಾದಾತ್ಮಕ ಟ್ವೀಟ್ಗಳನ್ನು ಕಂಗನಾ ಮಾಡಿದ್ದರು. ಕಂಗನಾ ವಿರುದ್ಧ ಕರ್ನಾಟಕ ಸೇರಿದಂತೆ ಹಲವು ಕಡೆ ದೂರುಗಳು ಸಹ ಆಗ ದಾಖಲಾಗಿದ್ದವು, ಬಳಿಕ ಟ್ವಿಟ್ಟರ್ ಸಂಸ್ಥೆಯು ಕಂಗನಾರ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿತು.


Click it and Unblock the Notifications











