ಶಿವಾಜಿ ಮಹಾರಾಜನ ಬಯೋಪಿಕ್ ಘೋಷಿಸಿದ ರಿಷಬ್ ಶೆಟ್ಟಿ; ಕನ್ನಡಿಗರ ಅಸಮಾಧಾನ
'ಕಾಂತಾರ' ನಟ ರಿಷಬ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗಾಗಲೇ ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಶಿವಾಜಿ ಮಹಾರಾಜರ ಜೀವನಾಧರಿತ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಮೂಡಿ ಬರಲಿದೆ. ಚಿತ್ರದಲ್ಲಿ ಶಿವಾಜಿ ಪಾತ್ರಕ್ಕೆ ರಿಷಬ್ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಸಂದೀಪ್ ಸಿಂಗ್ ಚಿತ್ರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ರಿಷಬ್ ಈ ಚಿತ್ ಒಪ್ಪಿಕೊಂಡಿರುವ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. "ಬೇಡ ಶೆಟ್ರೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

"ಭಾರತದ ಮಹಾನ್ ಯೋಧ, ರಾಜ ಶಿವಾಜಿಯ ಜೀವನಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆಮೇಲೆ ಅದ್ಭುತ ಆಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ಬರೆದು ರಿಷಬ್ ಸಿನಿಮಾ ಪೋಸ್ಟರ್ ಹಂಚಿಕೊಂಡಿದ್ದಾರೆ.
ಕಾಮೆಂಟ್ ಬಾಕ್ಸ್ನಲ್ಲಿ ಕೆಲವರು ರಿಷಬ್ ಶೆಟ್ಟಿಗೆ ಶುಭ ಕೋರಿದ್ದಾರೆ. ಆದರೆ ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಉತ್ತಮ ಆಯ್ಕೆ ಅಲ್ಲ. ಈ ಸಿನಿಮಾ ಬೇಕಿರಲಿಲ್ಲ ಶೆಟ್ರೆ, ಎಂದು ಹೇಳುತ್ತಿದ್ದಾರೆ. ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನಿದೆ? ಆತನ ಜೀವನಾಧರಿತ ಕಥೆಯಲ್ಲಿ ನೀವು ಯಾಕೆ ನಟಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕರುನಾಡಿನ ವೀರ ವನಿತೆ ಬೆಳವಾಡಿ ಮಲ್ಲಮ್ಮನ ಎದುರು ಸೋಲುಂಡ ಶಿವಾಜಿಯ ಕಥೆಯನ್ನು ವಿಜೃಂಭಿಸಿ ಸಿನಿಮಾ ಮಾಡುವುದು, ಅದರಲ್ಲಿ ನೀವು ನಾಯಕನಾಗಿ ನಟಿಸುವುದು ಯಾಕೆ ಬೇಕಿತ್ತು ಎಂದು ಕಿವಿಮಾತು ಹೇಳುತ್ತಿದ್ದಾರೆ. ಒಟ್ಟಾರೆ ಶಿವಾಜಿ ಮಹಾರಾಜರ ಜೀವನಚರಿತ್ರೆಯಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ.
ಬಹಳ ದಿನಗಳಿಂದ ಶಿವಾಜಿ ಬಯೋಪಿಕ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈಗಾಗಲೇ ಬಾಲಿವುಡ್ನಲ್ಲಿ ಶಿವಾಜಿ ಕುರಿತು ಸಿನಿಮಾ, ಧಾರಾವಾಹಿ ಬಂದಿದೆ. ಆದರೂ ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ದೃಶ್ಯಕಾವ್ಯದ ರೀತಿ ಕತೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಶಿವಾಜಿ ಸಾಧನೆಯ ಕಥೆಯನ್ನು ಮತ್ತೊಮ್ಮೆ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ.
ಕರ್ನಾಟಕದ ಸಾಕಷ್ಟು ಮಹಾನ್ ನಾಯಕರ ಕಥೆಗಳಿವೆ. ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು ಇದ್ದಾರೆ, ಅಂತವರ ಸಿನಿಮಾ ಮಾಡಿ. ಶಿವಾಜಿ ಕಥೆ ನಮಗೆ ಬೇಕಿಲ್ಲ ಎಂದು ಕೆಲವರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಶಿವಾಜಿ ಮರಾಠರಿಗೆ ರಾಜ ಇರಬಹುದು, ಕನ್ನಡಿಗರಿಗ ಆತ ದಾಳಿಕೋರ, ಆತನ ಸಿನಿಮಾ ಮಾಡಬೇಡಿ ರಿಷಬ್ ಶೆಟ್ಟಿ ಎಂದು ಕೂಡ ಕಾಮೆಂಟ್ ಮಾಡುತ್ತಿದ್ದಾರೆ.
'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಸಂದೀಪ್ ಸಿಂಗ್ ಈ ಬಾರಿ ಶಿವಾಜಿ ಬಯೋಪಿಕ್ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. 'ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದ ಮೂಲಕ ರಿಷಬ್ ಶೆಟ್ಟಿ ಬಾಲಿವುಡ್ ಅಂಗಳಕ್ಕೂ ಹೋಗುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 6 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆ. 9 ತಿಂಗಳ ಹಿಂದೆಯೇ ನಿರ್ದೇಶಕರು ಈ ಸಿನಿಮಾ ಘೋಷಿಸಿದ್ದರು. ಆದರೆ ಹೀರೊ ಯಾರು ಎನ್ನುವುದು ಬಹಿರಂಗವಾಗಿರಲಿಲ್ಲ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ್ದರು.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ-1' ಸಿನಿಮಾ ಮುಂದಿನ ವರ್ಷ ಅಕ್ಟೋಬರ್ 2ರಂದು ಬಿಡುಗಡೆ ಆಗುತ್ತಿದೆ. ಇನ್ನು ಶಿವಾಜಿ ಬಯೋಪಿಕ್ ಚಿತ್ರವನ್ನು 2027ರ ಜನವರಿ 21ರಂದು ತೆರೆಗೆ ತರುವುದಾಗಿ ಘೋಷಿಸಲಾಗಿದೆ.


Click it and Unblock the Notifications











