ವಕೀಲರೊಬ್ಬರ ಜೀವನ ಆಧರಿಸಿದ ಸಿನಿಮಾ ಘೋಷಿಸಿದ ಕರಣ್: ಯಾರೀ ವಕೀಲ?
ಬಾಲಿವುಡ್ನಲ್ಲಿ ಸಾಲು-ಸಾಲು ಜೀವನ ಆಧರಿತ ಸಿನಿಮಾಗಳು ತೆರೆಗೆ ಬರುತ್ತಿವೆ. ಈ ಮಾದರಿಯ ಬಹುತೇಕ ಸಿನಿಮಾಗಳು ಕ್ರೀಡಾಪಟುಗಳ ಜೀವನ ಆಧರಿಸಿದ ಸಿನಿಮಾಗಳಾಗಿವೆ. ಆದರೆ ಭಿನ್ನವಾಗಿ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ವಕೀಲರೊಬ್ಬರ ಜೀವನವನ್ನು ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
ವಕೀಲ, ಸ್ವಾತಂತ್ರ್ಯ ಹೋರಾಟಗಾರ ಸಿ.ಶಂಕರ್ ನಾಯರ್ ಜೀವನ ಆಧರಿಸಿದ ಸಿನಿಮಾವನ್ನು ಮಾಡುವುದಾಗಿ ನಿರ್ದೇಶಕ ಕರಣ್ ಜೋಹರ್ ಅಧಿಕೃತವಾಗಿ ಘೋಷಿಸಿದ್ದಾರೆ.
ವಕೀಲರಾಗಿದ್ದ ಶಂಕರನ್ ನಾಯರ್, ಮಹಾತ್ಮಾ ಗಾಂಧಿ, ನೆಹರು ಸಮಕಾಲೀನರಾಗಿದ್ದರು. ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರೂ ಸಹ ಆಗಿದ್ದರು. ಕೇರಳದ ಪಾಲಕ್ಕಾಡ್ನಲ್ಲಿ ಹುಟ್ಟಿ ಬಹುದೊಡ್ಡ ಸ್ಥಾನಗಳಿಗೆ ಏರಿದ ಶಂಕರನ್ ನಾಯರ್ ದೊಡ್ಡ ದೇಶಪ್ರೇಮಿಯೂ ಆಗಿದ್ದರು. ಶಂಕರನ್ ನಾಯರ್ ರಚಿಸಿರುವ 'ಗಾಂಧಿ ಆಂಡ್ ಅನಾರ್ಕಿ' (ಗಾಂಧಿ ಮತ್ತು ಅರಾಜಕತೆ) ಪುಸ್ತಕ ಬಹಳ ಜನಪ್ರಿಯವಾಗಿತ್ತು.

ಭಾರತ ಕಂಡ ಅತಿಹೀನ ನರಮೇಧಗಳಲ್ಲಿ ಮುಖ್ಯವಾದುದ್ದಾದ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಕುರಿತು ಬ್ರಿಟೀಷ್ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಅಪ್ರತಿಮವಾಗಿ ಹೋರಾಡಿದ್ದು ಇದೇ ಶಂಕರನ್ ನಾಯರ್.
ಶಂಕರನ್ ನಾಯರ್ ಅವರು ಜಲಿಯನ್ ವಾಲಾಭಾಗ್ ಕುರಿತು ನ್ಯಾಯಾಲಯದಲ್ಲಿ ಮಾಡಿದ ವಾದವನ್ನು ಪ್ರತಿವಾದವನ್ನು ಸಂಗ್ರಹಿಸಿ ಅವರ ಮೊಮ್ಮಗ ರಘು ಪಲಟ್ ಮತ್ತು ಅವರ ಪತ್ನಿ ಪುಷ್ಪಾ ಪಲಟ್ ಸೇರಿ ರಚಿಸಿರುವ 'ದಿ ಕೇಸ್ ದಟ್ ಶುಕ್ ದಿ ಎಂಪೈರ್' ಪುಸ್ತಕ ರಚಿಸಿದ್ದು ಪುಸ್ತಕವನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ.
Recommended Video
ಸಿನಿಮಾದಲ್ಲಿ ಜಲಿಯನ್ ವಾಲಾಭಾಗ್ ಕೃತ್ಯದ ವಾದವೇ ಪ್ರಮುಖವಾಗಿರಲಿದೆ. ಅದರ ಜೊತೆಗೆ ಶಂಕರನ್ ನಾಯರ್ ಅವರ ಇತರೆ ಹೋರಾಟ, ಮಹಾತ್ಮಾ ಗಾಂಧಿಯೊಂದಿಗೆ ಅವರಿಗಿದ್ದ ಅಭಿಪ್ರಾಯ ಭೇದ ಇತರೆ ಕೆಲವು ಅಂಶಗಳು ಸಿನಿಮಾದಲ್ಲಿರಲಿವೆ. ಸಿನಿಮಾವನ್ನು ಕರಣ್ ತ್ಯಾಗಿ ನಿರ್ದೇಶಕ ಮಾಡಲಿದ್ದಾರೆ.


Click it and Unblock the Notifications











