ದಕ್ಷಿಣ ಭಾರತ ಚಿತ್ರರಂಗ v/s ಬಾಲಿವುಡ್: ಪ್ರಶಾಂತ್ ನೀಲ್ ಬಗ್ಗೆ ಕರಣ್ ಜೋಹರ್ ಮಾತು
'ಕೆಜಿಎಫ್ 2', 'RRR', 'ಪುಷ್ಪ' ಸಿನಿಮಾಗಳು ಬಾಲಿವುಡ್ನಲ್ಲಿ ಹಣ ದೋಚಿದ್ದು ಬಾಲಿವುಡ್ಡಿಗರ ಕಣ್ಣು ಕೆಂಪಗೆ ಮಾಡಿದೆ. ಬಾಲಿವುಡ್ಡಿನ ಕೆಲವು ಸ್ಟಾರ್ ನಟರೇ ದಕ್ಷಿಣ ಭಾರತದ ಸಿನಿಮಾಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇತ್ತ ದಕ್ಷಿಣ ಭಾರತದ ಕೆಲವು ಸ್ಟಾರ್ ನಟರೂ ಸಹ 'ಬಾಲಿವುಡ್ ಸೊಕ್ಕು ಮುರಿದಿದೆ' ಎಂಬರ್ಥದ ಮಾತುಗಳನ್ನಾಡಿದ್ದಾರೆ.
ಹಲವು ದಿನಗಳಿಂದ 'ಬಾಲಿವುಡ್ v/s ದಕ್ಷಿಣ ಭಾರತ ಚಿತ್ರರಂಗ' ಮಾತುಗಳು ಕೇಳಿ ಬರುತ್ತಿದ್ದು, ದಿನಗಳೆದಂತೆ ಈ ಚರ್ಚೆ ಹೆಚ್ಚಿನ ತೀವ್ರತೆ ಪಡೆದುಕೊಳ್ಳುತ್ತಲೇ ಇದೆ. ಇದೀಗ ಈ ಚರ್ಚೆಗೆ ಬಾಲಿವುಡ್ನ ಜನಪ್ರಿಯ ನಿರ್ಮಾಪಕ, ನಿರ್ದೇಶಕ, ನಟ ಕರಣ್ ಜೋಹರ್ ಧುಮುಕಿದ್ದಾರೆ.
ಕರಣ್ ಜೋಹರ್ ನಿರ್ಮಾಣದ 'ಜುಗ್ ಜುಗ್ ಜಿಯೊ' ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾದ ಪ್ರಚಾರ ಕಾರ್ಯ ಅದ್ಧೂರಿಯಾಗಿ ನಡೆಯುತ್ತಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರು ಕೇಳಿದ 'ಬಾಲಿವುಡ್ v/s ಸೌಥ್ ಇಂಡಿಯಾ ಚಿತ್ರರಂಗದ'ದ ಕುರಿತಾಗಿ ಈ ಕೆಳಗಿನಂತೆ ಉತ್ತರಿಸಿದ್ದಾರೆ ಕರಣ್,

ನಾನು 'ಬಾಹುಬಲಿ' ಪ್ರೆಸೆಂಟ್ ಮಾಡಿದ್ದೆ: ಕರಣ್
''ದಕ್ಷಿಣ ಭಾರತ ಚಿತ್ರರಂಗ, ಉತ್ತರ ಭಾರತ ಚಿತ್ರರಂಗ ಎಂಬುದೆಲ್ಲವನ್ನೂ ನಾನು ನಂಬುವುದಿಲ್ಲ. ಕೆಲ ವರ್ಷಗಳ ಹಿಂದೆ ನಾನು 'ಬಾಹುಬಲಿ' ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದೆ. ಸಿನಿಮಾಕ್ಕಿರುವ ಶಕ್ತಿಯ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಒಂದೇ ಉದ್ಯಮದಲ್ಲಿರುವವರ ಮಧ್ಯೆ ಸ್ಪರ್ಧೆ ಇರಲು ಸಾಧ್ಯವಿಲ್ಲ. ನಾವೆಲ್ಲರೂ ಒಟ್ಟಿಗೆ ಬೆಳೆಯುತ್ತಿದ್ದೇವೆ ಅಷ್ಟೆ'' ಎಂದಿದ್ದಾರೆ ಕರಣ್ ಜೋಹರ್.

ಭಾರತದ ಎಲ್ಲ ಸಿನಿಕರ್ಮಿಗಳು ಒಂದೇ: ಕರಣ್ ಜೋಹರ್
''ಭಾರತದ ಪ್ರತಿ ಮೂಲೆಯಲ್ಲಿರುವ ಸಿನಿಮಾಕರ್ಮಿಗಳು ಒಂದೇ ಎಂಬ ಭಾವನೆ ನನ್ನದು. ಅವರು ಸದಾ ಒಂದೇ ಆಗಿರಬೇಕು ಸಹ'' ಎಂದ ಕರಣ್ ಜೋಹರ್, ರಾಜಮೌಳಿ ಹೇಳಿದ ಮಾತುಗಳನ್ನು ಪುನರುಚ್ಚರಿಸಿ, ''ರಾಜಮೌಳಿ ಹೇಳಿದಂತೆ, ದಕ್ಷಿಣ, ಉತ್ತರ ಬಿಟ್ಟು ನಾವೆಲ್ಲ ಒಂದೇ ಭಾರತ ಚಿತ್ರರಂಗ ಎಂದು ಗುರುತಿಸಿಕೊಳ್ಳಬೇಕು'' ಎಂದಿದ್ದಾರೆ ಕರಣ್ ಜೋಹರ್.

''ಪ್ರಶಾಂತ್ ನೀಲ್ ಹಾಗೂ ಇತರರು ಸಾಧಿಸಿ ತೋರಿಸಿದ್ದಾರೆ''
''ನಾವು ಭಾರತ ಚಿತ್ರರಂಗದ ಒಂದು ಭಾಗ ಎಂದು ಕರೆದುಕೊಳ್ಳಲು ಹೆಮ್ಮೆ ಪಡಬೇಕು. 'ಕೆಜಿಎಫ್ 2', 'RRR', 'ಪುಷ್ಪ' ಸಿನಿಮಾಗಳು ಉತ್ತರದ ಭಾಗದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದಾಗ ನಮಗೆ ಹೆಮ್ಮೆ ಆಗಬೇಕು, ಏಕೆಂದರೆ ಅವು ಭಾರತ ಚಿತ್ರರಂಗದ ಭಾಗವಾಗಿರುವ ಸಿನಿಮಾಗಳು. ನಮಗೆಲ್ಲ ಆ ಸಿನಿಮಾಗಳ ಬಗ್ಗೆ ಹೆಮ್ಮೆ ಇದೆ. ಪ್ರಶಾಂತ್ ನೀಲ್, ರಾಜಮೌಳಿ, ಸುಕುಮಾರ್ ಅವರುಗಳು ನಮಗೆ ತೋರಿಸಿಕೊಟ್ಟಿದ್ದಾರೆ, ನಮ್ಮ ಸಿನಿಮಾ ಮಾನದಂಡಗಳು ಎಷ್ಟು ಎತ್ತರವಾಗಿವೆ ಹಾಗೂ ನಾವು ಇನ್ನೂ ಎಷ್ಟು ಎತ್ತರಕ್ಕೆ ಏರಬಲ್ಲೆವು ಎಂಬುದನ್ನು ನಮಗೆ ಮನಗಾಣಿಸಿದ್ದಾರೆ. ಅದಕ್ಕೆ ನಾವು ಅವರಿಗೆ ಧನ್ಯವಾದ ಹೇಳಬೇಕು'' ಎಂದಿದ್ದಾರೆ ಕರಣ್ ಜೋಹರ್.

ನಮ್ಮ ನಡುವೆ ಸ್ಪರ್ಧೆ ಇಲ್ಲ: ಕರಣ್ ಜೋಹರ್
''ಒಬ್ಬರನ್ನೊಬ್ಬರು ಮೀರಿಸುವ ಸ್ಪರ್ಧೆ ನಮ್ಮ ನಡುವೆ ಇಲ್ಲ, ಇತ್ತೀಚೆಗೆ ನಡೆದಿರುವ ಆರೋಗ್ಯಕರ 'ಮೀರಿಸುವಿಕೆ' ಎಂದರೆ ದಕ್ಷಿಣದ ಕೆಲವು ಸಿನಿಮಾಗಳು ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿರುವುದು. ತಮ್ಮ ಬ್ಯುಸಿನೆಸ್ ಅನ್ನು ಬಾಲಿವುಡ್ನಲ್ಲಿ ಸಹ ವಿಸ್ತರಿಸಿರುವುದು. ಸಿನಿಮೋತ್ಸವಗಳಲ್ಲಿ ಸಿನಿಮಾ ಪ್ರದರ್ಶಿಸುವುದು, ಆಸ್ಕರ್ ಗೆಲ್ಲುವುದು ಇದೆಲ್ಲದಕ್ಕಿಂತಲೂ ನಮ್ಮ ಸಿನಿಮಾ ರಂಗ ಪ್ರಗತಿ ಸಾಧಿಸುವದಷ್ಟೆ ನಮಗೆ ಮುಖ್ಯ'' ಎಂದಿದ್ದಾರೆ ಕರಣ್ ಜೋಹರ್.


Click it and Unblock the Notifications











