₹21 ಕೋಟಿ ಸಂಭಾವನೆ ಪಡೆಯುವ ಕರೀನಾ ಕಪೂರ್ ಬಳಿ ವಾಚ್ಮ್ಯಾನ್ಗೆ ಕೊಡಲು ಹಣ ಇಲ್ವಾ? ನಿರ್ದೇಶಕ ಹೇಳಿದ್ದೇನು ?
ದುಡ್ಡೊಂದಿದ್ರೆ ಸಾಕು. ಎಲ್ಲವನ್ನೂ ಪಡೆದುಕೊಳ್ಳಬಹುದು ಎನ್ನುವ ಮನಸ್ಥಿತಿ ಬಹುತೇಕರದ್ದು. ಇನ್ನು ಸೆಲೆಬ್ರಿಟಿಗಳ ಕಥೆ ಕೇಳಬೇಕಾ ? ಸ್ಟಾರ್ ಪಟ್ಟಕ್ಕೇರಿದ ಕೂಡಲೇ ಅನೇಕರು ಇಲ್ಲಿ ಕೈಗೊಬ್ಬರು ಕಾಲಿಗೊಬ್ಬರು ಸಹಾಯಕರನ್ನು ನೇಮಿಸಿಕೊಳ್ಳುತ್ತಾರೆ. ಬಿಸಿಲು ತಮ್ಮ ಮೈಗೆ ತಾಗದಂತೆ ನೋಡಿಕೊಳ್ಳಲು ಕೊಡೆ ಹಿಡಿಯಲೆಂದೇ ಒಬ್ಬರಿಗೆ ಕೆಲಸ ಕೊಡುತ್ತಾರೆ. ತಮ್ಮ ಬಳಿ ಇರುವ ಕಾರುಗಳ ಸಂಖ್ಯೆಯಷ್ಟೇ ಡ್ರೈವರ್ಗಳನ್ನು ಕೂಡ ನೇಮಕ ಮಾಡಿಕೊಳ್ಳುತ್ತಾರೆ. ಇದರ ಮೇಲೆ ನೆರಳಿನಂತೆ ಹಿಂಬಾಲಿಸುವ ಅಂಗರಕ್ಷಕರು ಮತ್ತು ಮನೆಯನ್ನು ಕಾಯಲು ಭದ್ರತಾ ಸಿಬ್ಬಂದಿಗಳು ಇರುತ್ತಾರೆ.
ಹೀಗೆ ಸೆಲೆಬ್ರಿಟಿಗಳ ಮನೆ ಕೆಲಸದವರಿಂದನೇ ಇವರ ಅರ್ಧ ಮನೆ ತುಂಬಿ ತುಳುಕುತ್ತಿರುತ್ತೆ. ಹೀಗಿರುವಾಗ ಸಲೀಸಾಗಿ ಒಬ್ಬ ವ್ಯಕ್ತಿ ಸೈಫ್ ಅಲಿ ಖಾನ್ ಮನೆಗ ಬಂದು ಅವರನ್ನು ಚಾಕುವಿನಿಂದ ಚುಚ್ಚಿ ಅಲ್ಲಿಂದ ಅಷ್ಟೇ ಸುಲಭವಾಗಿ ತೆರಳಿದ್ದಾನೆ ಅಂದರೆ ನಂಬಲು ತಾನೇ ಹೇಗೆ ಸಾಧ್ಯ ? ಹೀಗಾಗಿಯೇ ಈ ವಿಚಾರದ ಸುತ್ತ ಮುತ್ತ ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣ ಬೆಳಕಿಗೆ ಬಂದ ದಿನದಿಂದ ಅನೇಕರು ಚರ್ಚೆ ಮಾಡಿದ್ದಾರೆ. ಈ ಕುರಿತು ಇನ್ನೂ ಚರ್ಚೆ ಮಾಡುತ್ತಿದ್ದಾರೆ.

ಇವತ್ತು ಕೂಡ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಂಡಿದ್ಹೇಗೆ ? ಮನೆಯಲ್ಲಿ ಐಶಾರಾಮಿ ಕಾರುಗಳಿದ್ದರು ಸೈಫ್ ಅಲಿ ಖಾನ್ ಅವರನ್ನು ಅವತ್ತು ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೇಕೆ ? ಎಂಬ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಒಂದ್ಕಾಲದ ನಿರ್ದೇಶಕ ಮತ್ತು ಸದ್ಯದ ಪೋಷಕ ನಟ ಆಕಾಶ್ ದೀಪ್ ಸಬೀರ್, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಕಾಲೆಳೆದಿದ್ದಾರೆ. 21 ಕೋಟಿ ಸಂಭಾವನೆ ಪಡೆಯುವ ಕರೀನಾ ಕಪೂರ್ಗೆ ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲವಾ ಎಂದು ವ್ಯಂಗ್ಯ ಮಾಡಿದ್ದಾರೆ. ಮನೆಗೆ ವಾಚ್ಮ್ಯಾನ್ ಇಟ್ಟುಕೊಳ್ಳಲು ಕೂಡ ಪಾಪಾ ಹಣ ಇಲ್ಲ ಎಂದು ಹೇಳಿದ್ದಾರೆ.
ಹೌದು, ಅಸಲಿಗೆ ಆಕಾಶ್ ದೀಪ್ ಸಬೀರ್ ಮತ್ತು ಅವರ ಪತ್ನಿ ಶೀಬಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಸೈಫ್ ಅಲಿ ಖಾನ್ ಪ್ರಕರಣದ ಬಗ್ಗೆ ಮಾತನಾಡಿರುವ ಆಕಾಶ್ ದೀಪ್, ಕರೀನಾ ಕಪೂರ್ 21 ಕೋಟಿಯ ಪ್ರೈಸ್ ಟ್ಯಾಗ್ ಹಾಕಿಕೊಂಡಿದ್ದಾರೆ. ಆದರೆ ಮನೆಯ ಹೊರಗಡೆ ಒಬ್ಬೇ ಒಬ್ಬ ವಾಚ್ ಮ್ಯಾನ್ನ ಕೆಲಸಕ್ಕೆ ಇಟ್ಟುಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ, ಬಹುಶ 100 ಕೋಟಿ ರೂಪಾಯಿಯನ್ನು ಅವರಿಗೆ ಕೊಟ್ಟಾಗ ಅವರು ಭದ್ರತಾ ಸಿಬ್ಬಂದಿ ಮತ್ತು ಕಾರ್ ಡ್ರೈವರ್ನ ನೇಮಕ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಇನ್ನು ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಆಟೋದಲ್ಲಿ ದಾಖಲಿಸಲಾಗಿತ್ತು. ಈ ವಿಚಾರದ ಬಗ್ಗೆ ಮಾತನಾಡಿರುವ ಆಕಾಶ್ ದೀಪ್ ಸಂದರ್ಶನದಲ್ಲಿ ಆಟೋ ಆಟೋ ಎಂದು ಕೂಗಿ ಅಣುಕಿಸಿದ್ದಾರೆ. ಮುಂದುವರೆದು ಕರೀನಾ ಕಪೂರ್ ಅವರ ಮನೆಯಲ್ಲಿ 30 ಸಿಸಿಟಿವಿ ಇರಬಹುದು ಆದರೆ ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿ ಯಾಕಿಲ್ಲ ಎನ್ನುವುದಷ್ಟೇ ನನ್ನ ಪ್ರಶ್ನೆ ಎಂದಿರುವ ಆಕಾಶ್ ದೀಪ್, ಸಿಸಿಟಿವಿ ಅಪರಾಧವನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತವೆಯೇ ಹೊರತು ಅಪರಾಧ ನಡೆಯದಂತೆ ಸಿಸಿಟಿವಿ ತಡೆಯುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೊಂದು ಐಶಾರಾಮಿ ಕಾರುಗಳಿರುವಾಗ ಯಾಕೆ ಒಬ್ಬ ಫುಲ್ ಟೈಮ್ ಡ್ರೈವರನ್ನು ಅವರ ತಮ್ಮ ಬಳಿ ಕೆಲಸಕ್ಕೆ ಇರಿಸಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಸದ್ಯ ಆಕಾಶ್ದೀಪ್ ಅವರು ನೀಡಿರುವ ಈ ಹೇಳಿಕೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.ಆಕಾಶ್ ದೀಪ್ ಮಾತನಾಡಿದ್ದರಲ್ಲಿ ತಪ್ಪೇನು ಇಲ್ಲ ಸರಿಯಾದ ಪ್ರಶ್ನೆಗಳನ್ನೇ ಅವರು ಕೇಳಿದ್ದಾರೆ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಭದ್ರತಾ ವೈಫಲ್ಯಕ್ಕೆ ಕಾರಣವೇನು..? ಅವತ್ತು ರಾತ್ರಿ ನಿಜಕ್ಕೂ ನಡೆದಿದ್ದೇನು ? ಎನ್ನುವುದನ್ನು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಹೇಳ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











