ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಟಿ ಕರೀನಾ ಕಪೂರ್ ಸ್ಪಷ್ಟನೆ
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬಗ್ಗೆ ನಿನ್ನೆಯಷ್ಟೇ ಒಂದು ಸುದ್ದಿ ಬ್ರೇಕ್ ಆಗಿತ್ತು. ಅದೇನಪ್ಪಾ ಅಂದ್ರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರೀನಾ ಕಪೂರ್ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದರು. ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕರೀನಾ ಕಪೂರ್ ಖಾನ್ ಗೆ ಟಿಕೆಟ್ ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು.
ಅಲ್ಲಿಗೆ, ರಾಜಕೀಯಕ್ಕೆ ಸೈಫ್ ಅಲಿ ಖಾನ್ ಮಡದಿ ಕರೀನಾ ಕಪೂರ್ ಖಾನ್ ಧುಮುಕುತ್ತಾರೆ ಎಂದು ಎಲ್ಲರೂ ಭಾವಿಸಿರುವಾಗಲೇ, ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕರೀನಾ ಕಪೂರ್ ಖಾನ್ ಸ್ಪಷ್ಟನೆ ಕೊಟ್ಟಿದ್ದಾರೆ.
''ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಗುರಿ ಏನಿದ್ದರೂ ಸಿನಿಮಾ ರಂಗ ಮಾತ್ರ'' ಎಂದು ಕರೀನಾ ಕಪೂರ್ ಖಾನ್ ಸ್ಪಷ್ಟ ಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರ ಆಸೆಗೆ ಕರೀನಾ ಕಪೂರ್ ಖಾನ್ ಬಕೆಟ್ ಗಟ್ಟಲೆ ತಣ್ಣೀರು ಎರಚಿದಂತಾಗಿದೆ.

ಕರೀನಾ ಯಾಕೆ.?
ಕರೀನಾ ಕಪೂರ್ ಪತಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೂಲತಃ ಭೋಪಾಲ್ ದವರು. ನಟಿ ಕರೀನಾ ಕೂಡ ಆಗಾಗ ಭೋಪಾಲ್ ಗೆ ಭೇಟಿ ನೀಡುತ್ತಲಿರುತ್ತಾರೆ. ಹೀಗಾಗಿ, ಕರೀನಾ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿತ್ತು. ಅಲ್ಲದೇ, ಕರೀನಾ ಮಾವ ಅಂದ್ರೆ ಸೈಫ್ ಅಲಿ ಖಾನ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ 1991 ರಲ್ಲಿ ಭೋಪಾಲ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಶತಾಯಗತಾಯ ಕರೀನಾ ರನ್ನ ಗೆಲ್ಲಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದರು.
ಆದ್ರೆ, ರಾಜಕೀಯಕ್ಕೆ ಬರಲ್ಲ ಎಂದು ಕರೀನಾ ಕಪೂರ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಪ್ಲಾನ್ ತಲೆಕೆಳಗಾಗಿದೆ.


Click it and Unblock the Notifications











