ಕರೀಷ್ಮಾ ಪತಿಯ 30,000 ಕೋಟಿ ರೂ. ಆಸ್ತಿ ವಿವಾದ; ಕೋರ್ಟ್ ಮೆಟ್ಟಿಲೇರಿದ ಮಕ್ಕಳು
ದಿವಂಗತ ಉದ್ಯಮಿ, ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಪತಿ ಸುಂಜಯ್ ಕಪೂರ್ ಅವರ 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ. ಕರೀಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ಮಲತಾಯಿ ಪ್ರಿಯಾ ಕಪೂರ್ (ಸಂಜಯ್ ಕಪೂರ್ 3ನೇ ಪತ್ನಿ) ಸುಂಜಯ್ ಕಪೂರ್ ಅವರ ವಿಲ್ಅನ್ನು ನಕಲಿ ಮಾಡಿದ್ದಾರೆ. ಆಸ್ತಿಯ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಇದೀಗ ಕರೀಷ್ಮಾ ಕಪೂರ್ ಮಕ್ಕಳು ಆರೋಪಿಸಿದ್ದಾರೆ. 2003ರಿಂದ 2016ರವರೆಗೆ 13 ವರ್ಷಗಳ ಕಾಲ ಕರೀಷ್ಮಾ ಕಪೂರ್ ಹಾಗೂ ಸುಂಜಯ್ ಕಪೂರ್ ದಾಂಪತ್ಯ ಜೀವನ ನಡೆಸಿದ್ದರು. ನಂತರ ವಿಚ್ಛೇದನ ಪಡೆದು ದೂರಾಗಿದ್ದರು. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳಿದ್ದಾಳೆ.

ಸುಂಜಯ್ ಕಪೂರ್ ಈ ವರ್ಷ ಜೂನ್ನಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಇದ್ದಾಗ ಅಕಾಲಿಕವಾಗಿ ನಿಧನರಾಗಿದ್ದರು. ಬಳಿಕ ಪ್ರಿಯಾ ಕಪೂರ್ ತಮ್ಮನ್ನು ಆಸ್ತಿಯಿಂದ ಅಕ್ರಮವಾಗಿ ದೂರ ಇಟ್ಟಿದ್ದಾರೆ ಎಂದು ತಮ್ಮ ತಾಯಿ ಕರೀಷ್ಮಾ ಪ್ರತಿನಿಧಿಯಾಗಿ ಮಕ್ಕಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ವಿವಾದದ ಕೇಂದ್ರಬಿಂದು 2025ರ ಮಾರ್ಚ್ 21ರ ವಿಲ್ ಆಗಿದ್ದು, ಇದರಲ್ಲಿ ಸುಂಜಯ್ ಕಪೂರ್ ಅವರ ಸಂಪೂರ್ಣ ಆಸ್ತಿಯನ್ನು ಪ್ರಿಯಾ ಕಪೂರ್ಗೆ ಮಾತ್ರ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗ್ತಿದೆ. ಪ್ರಕರಣದಲ್ಲಿ ಪ್ರಿಯಾ ಕಪೂರ್, ಅವರ ಅಪ್ರಾಪ್ತ ವಯಸ್ಕ ಮಗ, ಅವರ ತಾಯಿ ರಾಣಿ ಕಪೂರ್ ಮತ್ತು ವಿಲ್ನ ಸಿದ್ಧಪಡಿಸಿದ ವ್ಯಕ್ತಿ ಶ್ರದ್ಧಾ ಸೂರಿ ಮರ್ವಾಹ್ ಅವರನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ.
ತಮ್ಮ ಮಲತಾಯಿ ದಿನೇಶ್ ಅಗರ್ವಾಲ್ ಮತ್ತು ನಿತಿನ್ ಶರ್ಮಾ ಎಂಬ ಇಬ್ಬರು ಸಹವರ್ತಿಗಳೊಂದಿಗೆ ಸೇರಿ, 2025ರ ಜುಲೈ 30ರಂದು ಕುಟುಂಬ ಸಭೆಯಲ್ಲಿ ವಿಲ್ ಅನ್ನು ಬಹಿರಂಗಪಡಿಸುವ ಮೊದಲು 7 ವಾರಗಳಿಗೂ ಹೆಚ್ಚು ಕಾಲ ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಮಕ್ಕಳು ಹೇಳಿದ್ದಾರೆ.
ಅರ್ಜಿಯ ಪ್ರಕಾರ, ಪ್ರಿಯಾ ಕಪೂರ್ ಅವರ ವರ್ತನೆಯು ಸುಂಜಯ್ ಕಪೂರ್ ಅವರ ಆಸ್ತಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಇನ್ನಿತರ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಹೊರಗಿಡುವ ಉದ್ದೇಶವಿದೆ ಎಂದು ಮಕ್ಕಳ ಪರ ವಕೀಲರು ವಾದಿಸಿದ್ದಾರೆ. ತಮ್ಮನ್ನು ಮೊದಲ ದರ್ಜೆಯ ಕಾನೂನುಬದ್ಧ ಉತ್ತರಾಧಿಕಾರಿಗಳೆಂದು ಘೋಷಿಸಲು ಮತ್ತು ತಮ್ಮ ತಂದೆಯ ಆಸ್ತಿಯಲ್ಲಿ ಐದನೇ ಒಂದು ಭಾಗದ ಪಾಲನ್ನು ನೀಡಲು ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಈ ವಿಲ್ ನಕಲಿ ಮತ್ತು ತಿರುಚಿದ ದಾಖಲೆ ಎಂದು ವಾದಿಸಿದ್ದು "ವಾದಿಗಳು ಸಲ್ಲಿಸಿದಂತೆ, ವಾದಿಗಳ ತಂದೆಯಿಂದ ಸಿದ್ಧಪಡಿಸಲಾಗಿದೆ ಎಂದು ಹೇಳಲಾದ ವಿಲ್ ಕಾನೂನುಬದ್ಧ ಮತ್ತು ಮಾನ್ಯವಾದ ದಾಖಲೆಯಲ್ಲ, ಅದು ನಕಲಿ ಮತ್ತು ತಿರುಚಿದ ದಾಖಲೆಯಾಗಿದೆ. ಇದು ಅನುಮಾನಾಸ್ಪದ ಸನ್ನಿವೇಶಗಳಿಂದ ಕೂಡಿರುವುದರಿಂದ, ವಿಲ್ನ ಮೂಲ ಪ್ರತಿಯನ್ನು ವಾದಿಗಳಿಗೆ ತೋರಿಸಿಲ್ಲ, ಹಾಗೂ ನಕಲು ಪ್ರತಿಯನ್ನೂ ನೀಡಿಲ್ಲ" ಎಂದು ಗೊತ್ತಾಗುತ್ತಿದೆ.
ಈ ಮೊಕದ್ದಮೆಯನ್ನು ಲೆಕ್ಸ್ಟರ್ ಲಾ ಎಲ್ಪಿಪಿ ಪರವಾಗಿ ಶಾಂತನು ಅಗರ್ವಾಲ್ ಮತ್ತು ಮಧುಲಿಕಾ ರಾಯ್ ಶರ್ಮಾ ಸಲ್ಲಿಸಿದ್ದಾರೆ. ಪ್ರಕರಣ ಇತ್ಯರ್ಥವಾಗುವವರೆಗೆ ಸುಂಜಯ್ ಕಪೂರ್ ಅವರಿಗೆ ಸೇರಿದ ಎಲ್ಲಾ ವೈಯಕ್ತಿಕ ಆಸ್ತಿಗಳನ್ನು ಸ್ಥಗಿತಗೊಳಿಸುವಂತೆ ಮಕ್ಕಳು ಮನವಿ ಮಾಡಿದ್ದಾರೆ.


Click it and Unblock the Notifications











