ಬಾಲಿವುಡ್ ಸ್ಟಾರ್ ಜೋಡಿಗೆ ಜೀವ ಬೆದರಿಕೆ, ದೂರು ನೀಡಿದ ಕತ್ರಿನಾ ಕೈಫ್
ಬಾಲಿವುಡ್ ಸ್ಟಾರ್ ಸ್ಟಾರ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಬಂದ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿರುವಾಗಲೇ ಇದೀಗ ಬಾಲಿವುಡ್ನ ಸ್ಟಾರ್ ಜೋಡಿಗೆ ಜೀವ ಬೆದರಿಕೆ ಬಂದಿದೆ.
ಇತ್ತೀಚೆಗಷ್ಟೆ ವಿವಾಹವಾದ ನಟಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ಗೆ ಜೀವ ಬೆದರಿಕೆ ಬಂದಿದ್ದು ಮುಂಬ್ನ ಸ್ಯಾಂಟಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ಗೆ ಸಾಮಾಜಿಕ ಜಾಲತಾಣದ ಮೂಲಕ ಅನಾಮಿಕ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ. ನಟಿ ಕತ್ರಿನಾ ಕೈಫ್ಗೆ ಖಾಸಗಿಯಾಗಿ ಸಂದೇಶ ಕಳಿಸಿಯೂ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕಿರುವ ಅನಾಮಿಕ ವ್ಯಕ್ತಿಯ ಬಗ್ಗೆ ಕತ್ರಿನಾ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು 506 (2), 354 (ಡಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಈ ವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ 2021ರ ಡಿಸೆಂಬರ್ ತಿಂಗಳಲ್ಲಿ ವಿವಾಹವಾದರು. ಇಬ್ಬರೂ ಖುಷಿಯಾಗಿ ಜೀವನ ಸಾಗಿಸುತ್ತಿರುವ ವೇಳೆಗೆ ಇದೀಗ ಜೀವ ಬೆದರಿಕೆ ಸಂದೇಶ ಬಂದಿದೆ.
ಇದೇ ತಿಂಗಳ ಆರಂಭದಲ್ಲಿ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಸಂದೇಶ ಬಂದಿತ್ತು. ಭೂಗತ ಲೋಕದ ದುರುಳರಿಂದ ಬಂದಿದ್ದ ಈ ಬೆದರಿಕೆ ಸಂದೇಶವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಭೂಗತ ಪಾತಕಿ ಲಾರೆನ್ಸ್ ಬಿಶ್ಣೋಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು, ಸಲ್ಮಾನ್ ಖಾನ್ಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತೆ ಹೆಚ್ಚು ಮಾಡಿದ್ದಾರೆ. ಸ್ವತಃ ಸಲ್ಮಾನ್ ಖಾನ್ ಸಹ ಈ ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ ಹಾಗೂ ಬೆದರಿಕೆ ಇರುವ ಕಾರಣ ಜೀವ ರಕ್ಷಣೆಗೆ ಶಸ್ತ್ರಾಸ್ತ್ರ ಹೊಂದಲು ಮುಂಬೈ ಪೊಲೀಸ್ ಆಯುಕ್ತರ ಬಳಿ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾರೆ.
ಸಲ್ಮಾನ್ ಖಾನ್ ಮಾತ್ರವೇ ಅಲ್ಲದೆ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ಗೆ ಸಹ ಜೀವ ಬೆದರಿಕೆ ಇದೆ. ಸಲ್ಮಾನ್ ಖಾನ್ ಬೆದರಿಕೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕರಣ್ ಜೋಹರ್ ಅನ್ನು ಕೊಲ್ಲಲು ಕೆಲವು ಭೂಗತ ಪಾತಕಿಗಳು ಯತ್ನಿಸಿದ್ದ ವಿಷಯವೂ ಬಹಿರಂಗಗೊಂಡಿದೆ.
ಬಾಲಿವುಡ್ ಹಾಗೂ ಭೂಗತ ಲೋಕದ ನಂಟು ದಶಕಗಳಷ್ಟು ಹಳೆಯದ್ದು. ಹಲವು ದಶಕಗಳಿಂದಲೂ ಭೂತಗ ಲೋಕದ ಪಾತಕಿಗಳು ಬಾಲಿವುಡ್ನ ಖ್ಯಾತನಾಮರನ್ನು ಕಾಡುತ್ತಾ ಬಂದಿದ್ದಾರೆ. ಸಲ್ಮಾನ್ ಖಾನ್ಗೆ ಈ ಮೊದಲೂ ಸಹ ಬೆದರಿಕೆಗಳು ಬಂದಿದ್ದವು. ಬಾಲಿವುಡ್ ನಿರ್ಮಾಪಕರಿಂದ ಹಲವು ಭೂಗತ ಪಾತಕಿಗಳು ಹಣ ವಸೂಲಿ ಮಾಡಿದ್ದಾರೆ. ಹಣ ನೀಡಲು ನಿರಾಕರಿಸಿದ್ದ ಟಿ-ಸೀರೀಸ್ನ ಭೂಷಣ್ ಕುಮಾರ್ ಅನ್ನು ಹಾಡಹಗಲೆ ಕೊಲೆ ಸಹ ಮಾಡಲಾಗಿತ್ತು. ಕೆಲವು ನಟಿಯರನ್ನೂ ತಮ್ಮ ಅವಶ್ಯಕತೆಗೆ ಅನುಸಾರವಾಗಿ ಬಳಸಿಕೊಂಡಿದ್ದರು ಕೆಲವು ಭೂಗತ ಪಾತಕಿಗಳು.


Click it and Unblock the Notifications











