ಮದುವೆ ನಿರಾಕರಿಸಿದ್ದಕ್ಕೆ ಕಿಡ್ನ್ಯಾಪ್ ? 6 ದಿನಗಳ ನಂತರ ಕಾಲುವೆಯಲ್ಲಿ ಪತ್ತೆಯಾಯ್ತು ಖ್ಯಾತ ಗಾಯಕಿ ಶವ
ಸ್ತ್ರೀಯನ್ನು ದೈವೀ ಸ್ವರೂಪದಲ್ಲಿ ಸ್ವೀಕರಿಸಿರುವ ಭಾರತದಂತಹ ರಾಷ್ಟ್ರದಲ್ಲೂ ಸ್ತ್ರೀಯರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಾಗಿ ಬೆಂಕಿ ಹತ್ತಿ ಕೆಂಡ ಆರುವವರೆಗೂ ವಿರೋಧಿ ಘೋಷಣೆಗಳು, ಧರಣಿಗಳು, ಮೆರವಣಿಗೆಗಳನ್ನು ಮಾಡುತ್ತಲೇ ಇದ್ದೇವೆ. ಆದರೂ ಮಹಿಳೆ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಇಂದರ್ ಕೌರ್ (29) ಅವರ ಸಾವು.
ಹೌದು, ಇಂದರ್ ಕೌರ್.. ಮೂಲತಃ ಪಂಜಾಬ್ನ ಲೂಧಿಯಾನದವರು. ಪಂಜಾಬ್ನೆಲ್ಲೆಡೆ ಇಂದರ್ ಕೌರ್ ಎಂದೇ ಖ್ಯಾತಿ ಪಡೆದಿದ್ದ ಇವರ ನಿಜವಾದ ಹೆಸರು ಯಶಿಂಧರ್ ಕೌರ್. ಇನ್ಸ್ಟಾಗ್ರಾಮ್ನಲ್ಲಿ 1.24 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದ ಇಂದರ್ ಅತ್ಯಲ್ಪ ಅವಧಿಯಲ್ಲಿಯೇ ಪಂಜಾಬ್ ಜನಪ್ರಿಯ ಗಾಯಕಿಯಾಗಿ ಹೊರ ಹೊಮ್ಮಿದ್ದರು.

ಪಂಜಾಬ್ನ ಖ್ಯಾತ ಗಾಯಕರಾದ ಗಿಪ್ಪಿ ಗ್ರೆವಾಲ್, ದಿಲ್ಪ್ರೀತ್ ಧಿಲ್ಲೋನ್ ಮತ್ತು ಪರ್ಮಿಶ್ ವರ್ಮಾ ಅವರ ಜೊತೆ ಸೇರಿ ಹಲವು ಚಾರ್ಟ್ ಬಸ್ಟರ್ ಹಾಡುಗಳನ್ನು ಇಂದರ್ ಕೌರ್ ನೀಡಿದ್ದರು. ಆ ಪೈಕಿ ''ಸೋನೆ ದಿ ವಾಂಗ್''.. ''ದೇಸಿ ಸೀರ್ರೇ ಡಾ''.. ''ಎಂಡ್ ಜಟಿಯೇ''.. ''ಜಾಟ್ ಮೈಂಡ್''.. ''ಅಖಡ್''.. ''ವೆಹಮ್''.. ಪ್ರಮುಖವಾದವು. ಇವರ ''ನಾ ಚಲ್ದಾ'' ಹಾಡು ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ಪಂಜಾಬ್ನ ಸಂಗೀತ ಕ್ಷೇತ್ರದಲ್ಲಿ ದಾಖಲೆ ಬರೆದಿತ್ತು.
ಇಂಥಾ ಇಂದರ್ ಕೌರ್ ಮೇ 13ರಂದು ದಿನಸಿ ಸಾಮಗ್ರಿಗಳನ್ನು ಖರೀದಿಸಲು ತಮ್ಮ ಕಾರಿನಲ್ಲಿ ಹೊರಟಿದ್ದರು. ಆದರೆ ಮನೆಗೆ ಮರಳಿ ಬರಲೇ ಇಲ್ಲ. ತಡರಾತ್ರಿಯಾದರು ಮನೆಗೆ ಬಾರದಿದ್ದಾಗ, ಸಂಪರ್ಕ ಸಾಧ್ಯವಾಗದಿದ್ದಾಗ ಆತಂಕಗೊಂಡು ಮನೆಯವರು ಪೊಲೀಸರ ಮೊರೆ ಹೋಗಿದ್ದರು. ಈಗ ನಾಪತ್ತೆಯಾದ ಆರು ದಿನಗಳ ನಂತರ ಇಂದರ್ ಕೌರ್ ಅವರ ಶವ ಲೂಧಿಯಾನ ಬಳಿಯ ನೀಲೋ ಕಾಲುವೆಯಲ್ಲಿ ಪತ್ತೆಯಾಗಿದೆ.
ಇಂದರ್ ಕೌರ್ ಸಹೋದರ ಜೋತಿಂದರ್ ಸಿಂಗ್ ಪ್ರಕಾರ, ಮೊಗಾ ನಿವಾಸಿ ಸುಖ್ವಿಂದರ್ ಸಿಂಗ್ ಬಹುದಿನಗಳಿಂದ ಮದುವೆಯಾಗುವಂತೆ ಇಂದರ್ ಕೌರ್ ಅವರನ್ನು ಪೀಡಿಸುತ್ತಿದ್ದ. ಇನ್ನು ''ಪಂಜಾಬ್ ನ್ಯೂಸ್ ಲೈವ್'' ವರದಿ ಪ್ರಕಾರ ಮದುವೆಯಾಗಲು ಇಂದರ್ ಕೌರ್ ನಿರಾಕರಿಸಿದ ಹಿನ್ನೆಲೆ ಕೆರಳಿದ್ದ ಸುಖ್ವಿಂದರ್ ಸಿಂಗ್ ಮೊನ್ನೆ ಮೇ 13ರಂದು ಇಂದರ್ ಕೌರ್ ಮನೆಯಿಂದ ಹೊರ ಬಂದಾಗ ಬಂದೂಕು ತೋರಿಸಿ ಅಪಹರಿಸಿದ್ದಾನೆ. ಮದುವೆಯಾಗಲು ಒಪ್ಪದ ಇಂದರ್ ಕೌರ್ ಅವರ ಕೊಲೆ ಮಾಡಿ ಶವವನ್ನು ನಾಲೆಗೆ ಎಸೆದಿದ್ದಾನೆ.
ಇನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ ಸುಖ್ವಿಂದರ್ ಸಿಂಗ್ಗೆ ಅದಾಗಲೇ ಮದುವೆಯಾಗಿತ್ತು, ಆದರೂ ಕೂಡ ಇಂದರ್ ಕೌರ್ ಹಿಂದೆ ಬಿದ್ದಿದ್ದ, ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದ ಎಂದು ಇಂದರ್ ಕೌರ್ ಕುಟುಂಬಸ್ಥರು ತಮ್ಮ ನೋವನ್ನು ಹೊರ ಹಾಕಿದ್ದಾರೆ. ಆರೋಪಿ ಸುಖ್ವಿಂದರ್ ಸಿಂಗ್ ಗೆ ಗಲ್ಲು ಶಿಕ್ಷೆ ಆಗಬೇಕು ನಮ್ಮ ಮನೆ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ಧಾರೆ.

ಸದ್ಯ ಇಂದರ್ ಕೌರ್ ಅವರನ್ನು ಕೊಲೆ ಮಾಡಿ ಸುಖ್ವಿಂದರ್ ಸಿಂಗ್ ಕೆನಡಾಗೆ ಪರಾರಿಯಾಗಿದ್ದು, ಕೆನಡಾದಿಂದ ನೇಪಾಳ ಮಾರ್ಗವಾಗಿ ಬಂದು ಕೊಲೆ ಮಾಡಿ, ಮತ್ತೆ ಅದೇ ದಾರಿಯಲ್ಲಿ ಕೆನಡಾಗೆ ಹಿಂತಿರುಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಪಂಜಾಬ್ನ ಮಾಧ್ಯಮಗಳಲ್ಲಿ ವರದಿಯಾಗಿದೆ.
ದೂರು ನೀಡಿದರೂ ಪೊಲೀಸರು ಪ್ರಕರಣಕ್ಕೆ ಸೂಕ್ತ ಗಮನ ಹರಿಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರಕರಣದ ತೀವೃತೆ ಹೆಚ್ಚಾಗುತ್ತಿದ್ದಂತೆಯೇ ಪಂಜಾಬ್ ಪೊಲೀಸರು ಅಪಹರಣ ಮತ್ತು ನಿಗೂಢ ಸಾವಿನ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ.
ತನಿಖಾಧಿಕಾರಿಗಳು ಪ್ರಸ್ತುತ ಇಂದರ್ ಕೌರ್ ಅವರ ಕೊನೆಯ ಕ್ಷಣಗಳ ಮಾಹಿತಿಯನ್ನು ಸಂಗ್ರಹಿಸಲು ಕಾಲ್ ರೆಕಾರ್ಡ್ಸ್ ಮತ್ತು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಯು ವಿದೇಶದಲ್ಲಿ ನೆಲೆಸಿರುವುದರಿಂದ ಈ ಪ್ರಕರಣಕ್ಕೆ ಅಂತರರಾಷ್ಟ್ರೀಯ ಆಯಾಮ ಬಂದಿದ್ದು, ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಪೊಲೀಸರು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಇಂದರ್ ಕೌರ್ ಅವರ ಭೀಕರ ಹತ್ಯೆಯಿಂದ ಪಂಜಾಬ್ ಸಂಗೀತ ಕ್ಷೇತ್ರ ಆಘಾತಕ್ಕೀಡಾಗಿದ್ದು, ಇಂದರ್ ಕೌರ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದರ್ ಕೌರ್ಗೆ ಅನೇಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.


Click it and Unblock the Notifications