"ದ್ವೇಷದ ದಲ್ಲಾಳಿಗಳಿಗೆ ಸೆಡ್ಡು ಹೊಡೆದು ಒಳ್ಳೆಯ ಸಿನಿಮಾ ಗೆಲ್ಲಿಸಿದ ಸಹೃದಯರಿಗೆ ಆಭಾರಿ"
ನಟ ಕಿಶೋರ್ ದೇಶದ ವಿದ್ಯಮಾನಗಳ ಬಗ್ಗೆ ನೇರ ಮತ್ತು ನಿಷ್ಟುರವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅದರಲ್ಲೂ ಮುಖ್ಯವಾಗಿ ರಾಜಕೀಯ ಹಾಗೂ ಧರ್ಮದ ವಿಷಯಗಳಿಗೆ ಸಂಬಂಧಿಸಿದಂತೆ ಪೋಸ್ಟ್ ಮಾಡುತ್ತಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಸದಾ ಆಕ್ಟೀವ್ ಆಗಿರುವ ಕಿಶೋರ್ ಕೆಲವೊಂದು ವಿಚಾರಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ಹೊರಹಾಕುತ್ತಿರುತ್ತಾರೆ.
ಕಳೆದ ವಾರವಷ್ಟೆ ಬಾಲಿವುಡ್ನ 'OMG- 2' ಸಿನಿಮಾ ರಿಲೀಸ್ ಆಗಿದೆ. ಒಂದಷ್ಟು ವಿವಾದಗಳಿಂದಲೂ ಸುದ್ದಿಯಾಗಿದ್ದ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕಥೆಯನ್ನು ಆಧರಿಸಿ ಸಿನಿಮಾ ಮಾಡುವ ದುಸ್ಸಾಹಸ ಯಾಕೆ ಬೇಕಿತ್ತು? ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಶಿವ ಗಣದ ಸದಸ್ಯನಾಗಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಸದ್ಯ ಈ ಸಿನಿಮಾ ಸಕ್ಸಸ್ ಬಗ್ಗೆ ನಟ ಕಿಶೋರ್ ಪೋಸ್ಟ್ ಮಾಡಿದ್ದಾರೆ.

'OMG- 2' ಚಿತ್ರದಲ್ಲಿ ಶಿವ ಗಣದ ಸದಸ್ಯನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಕ್ಷಯ್ಕುಮಾರ್ ಮೂಲಕ ಲೈಂಗಿಕತೆಯ ಬಗ್ಗೆ ಹೇಳಿಸಿದ್ದಾರೆ. ಇದು ಸರಿಯಲ್ಲ. ಇದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಸಿನಿಮಾ ಪ್ರದರ್ಶನ ವಿರೋಧಿಸಿ ಕೆಲವೆಡೆ ಪ್ರತಿಭಟನೆ ನಡೆಯುತ್ತಿದೆ. ಇನ್ನು ಚಿತ್ರದಲ್ಲಿ ಅಕ್ಷಯ್ ಪಾತ್ರದ ಚಿತ್ರಣ, ಜಟೆ ಮತ್ತು ಬೂಟು ಧರಿಸಿರುವುದು, ಕೊಳಕು ಕೊಳದಲ್ಲಿ ಸ್ನಾನ ಮಾಡುವಂತಹ ಸನ್ನಿವೇಶಗಳ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಅಕ್ಷಯ್ ಕುಮಾರ್ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದು ಆತನ ಕಪಾಳಕ್ಕೆ ಹೊಡೆದವರಿಗೆ ಹತ್ತು ಲಕ್ಷ ನೀಡುವುದಾಗಿ ರಾಷ್ಟ್ರೀಯ ಹಿಂದೂ ಪರಿಷತ್ ಸಂಘಟನೆಯ ಅಧ್ಯಕ್ಷ ಗೋವಿಂದ್ ಪರಾಶರ್ ಹೇಳಿಕೆ ನೀಡಿದ್ದಾರೆ. ಸದ್ಯ ಈ ಹೇಳಿಕೆ ವೈರಲ್ ಆಗಿದೆ. ಇಷ್ಟೆಲ್ಲ ವಿವಾದಗಳ ನಡುವೆಯೂ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಇದೇ ವಿಚಾರದ ಬಗ್ಗೆ ನಟ ಕಿಶೋರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
"ಓಹ್ ಮೈ ಗಾಡ್. ಎಲ್ಲರ ಪ್ರೀತಿಯ ಮಾವಿನ ಹಣ್ಣು, ಕುಯ್ದು ತಿಂದರೂ ಕಚ್ಚಿತಿಂದರೂ ಕೊನೆಗೆ ಜೊತೆಗೆ ನಿಲ್ಲುವುದು ಪ್ರಕೃತಿಯ ಪ್ರೀತಿಯ ರುಚಿಯಷ್ಟೇ ಹೊರತು ದ್ವೇಷವಲ್ಲ. ನಟನನ್ನೊ ಅಥವಾ ನಟನ ಧರ್ಮಾಂಧತೆಯ ಬೆಂಬಲವನ್ನೊ ಲೆಕ್ಕಿಸದೆ ದ್ವೇಷದ ದಲ್ಲಾಳಿಗಳಿಗೆ ಸೆಡ್ಡು ಹೊಡೆದು ಒಂದು ಒಳ್ಳೆಯ ಸಿನಿಮಾವನ್ನು ಗೆಲ್ಲಿಸಿದ ಸಹೃದಯರಿಗೆ, ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಸಿನಿಮಾಗಳನ್ನೂ ಅದರ ನಿರ್ಮಾತೃಗಳನ್ನೂ ಉಳಿಸಿದ್ದಕ್ಕಾಗಿ ಆಭಾರಿ" ಎಂದು ನಟ ಕಿಶೋರ್ ಬರೆದುಕೊಂಡಿದ್ದಾರೆ.

ನಟ ಕಿಶೋರ್ ಇಂದು(ಆಗಸ್ಟ್ 14) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ಗುರ್ತಿಸಿಕೊಂಡ ಕಿಶೋರ್ 'ಕಂಠಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಮುಂದೆ ರಾಕ್ಷಸ, ಡೆಡ್ಲಿ ಸೋಮ, ದುನಿಯಾ, ಅಟ್ಟಹಾಸ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ತೆಲುಗು, ತಮಿಳು ಚಿತ್ರಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟನಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
'OMG- 2' ಸಿನಿಮಾ ಫಸ್ಟ್ ವೀಕೆಂಡ್ನಲ್ಲಿ 43 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗುತ್ತಿದೆ. ಅಮಿತ್ ರೈ ನಿರ್ದೇಶನದ ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. 2012ರಲ್ಲಿ ಬಂದಿದ್ದ 'ಓ ಮೈ ಗಾಡ್' ಸಿನಿಮಾ ರೀತಿಯಲ್ಲೇ ಈ ಕತೆಯನ್ನು ಕೂಡ ಹೆಣೆಯಲಾಗಿದೆ. ಭಕ್ತನ ಕಷ್ಟ ಪರಿಹಾರಕ್ಕೆ ಸಾಕ್ಷಾತ್ ದೇವರೆ ಇಳಿದುಬಂದರೆ ಏನಾಗುತ್ತದೆ ಎನ್ನುವ ರೀತಿಯಲ್ಲಿ ಸಿನಿಮಾ ಕತೆ ಸಾಗುತ್ತದೆ.


Click it and Unblock the Notifications











