ಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿ
ನಟ ಸುಶಾಂತ್ ಸಿಂಗ್ ಮಾಜಿ ಗೆಳತಿ, ಆಪ್ತೆ ಕೃತಿ ಸೆನನ್ ಗೆಳೆಯನ ಅಗಲಿಕೆಯಿಂದ ಅತೀವ ದುಃಖಕ್ಕೆ ಈಡಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದಿದ್ದ ಪತ್ರವೇ ಇದಕ್ಕೆ ಸಾಕ್ಷಿ.
Recommended Video
ಸುಶಾಂತ್ ಸಿಂಗ್ ಅವರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕೆಲವೇ ಆಪ್ತರಲ್ಲಿ ಕೃತಿ ಸೆನನ್ ಸಹ ಒಬ್ಬರು. ಕೃತಿ ಸೆನನ್, ಸುಶಾಂತ್ ಗೆ ಬಹಳ ಆಪ್ತವಾಗಿದ್ದರು. ಇಬ್ಬರೂ ಪ್ರೀತಿಯಲ್ಲಿದ್ದರು ಆದರೆ ನಂತರ ಬೇರಾದರು ಎಂಬ ಮಾತುಗಳು ಬಾಲಿವುಡ್ನಲ್ಲಿ ಹರಿದಾಡುತ್ತಿದೆ.
ಎರಡು ದಿನದ ಹಿಂದಷ್ಟೆ ಸುಶಾಂತ್ ಬಗ್ಗೆ ಅತ್ಯಾಪ್ತ, ಭಾವುಕ ಪೋಸ್ಟ್ ಹಾಕಿದ್ದ ಕೃತಿ ಸೆನನ್ ಇಂದು ಮಾಧ್ಯಮಗಳ ವಿರುದ್ಧ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಮಾಧ್ಯಮಗಳನ್ನು ಅಸೂಕ್ಷ್ಮ, ಕರ್ತವ್ಯವಿಮುಖ ಎಂದು ಕರೆದಿದ್ದಾರೆ. ಇದ್ದಕ್ಕಿದ್ದಂತೆ ಮಾಧ್ಯಮಗಳ ಮೇಲೆ ಸಿಟ್ಟು ಹೊರಹಾಕಲು ಕಾರಣವೂ ಇದೆ.
ಸುಶಾಂತ್ ಸಿಂಗ್ ಅಂತಿಮಕ್ರಿಯೆಯಲ್ಲಿ ಭಾಗವಹಿಸಿದಾಗ ಮಾಧ್ಯಮಗಳು ಜವಾಬ್ದಾರಿ ಮರೆತು, ಅತಿರೇಕದಿಂದ, ಅಮಾನವೀಯ, ಅಸೂಕ್ಷ್ಮವಾಗಿ ನಡೆದುಕೊಂಡವು ಎಂದು ಕೃತಿ ಸೆನನ್ ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷ್ಯವನ್ನೂ ಅವರು ಉಲ್ಲೇಖಿಸಿದ್ದಾರೆ.

'ಮೇಡಂ ಗಾಜು ಇಳಿಸಿ ಎಂದು ಬೇಡುತ್ತೀರಿ'
'ಕಾರಿನ ಕಿಟಕಿಯ ಗಾಜನ್ನು ತಟ್ಟುತ್ತಾ 'ಮೇಡಂ ಗಾಜು ಇಳಿಸಿ' ಎಂದು ಮಾಧ್ಯಮದವರು ಕೇಳುತ್ತಿದ್ದರು, ಅವರಿಗೆ ನನ್ನ ಹಾಗೂ ಅಲ್ಲಿ ಬಂದಿದ್ದ ಕೆಲವರ ಚಿತ್ರ ಬೇಕಿತ್ತು, ವೃತ್ತಿಗಿಂತ ಮೊದಲು ಮಾನವೀಯತೆ ಮುಖ್ಯ' ಎಂದಿರುವ ಕೃತಿ ಸೆನನ್ ಮಾಧ್ಯಮದವರು ಅಂದು ಮಾನವೀಯವಾಗಿ ವರ್ತಿಸಿಲ್ಲವೆಂದು ಹೇಳಿದ್ದಾರೆ.

'ಅಂಥಹಾ ಸ್ಥಳಗಳಿಗೆ ನೀವು ಬರಲೇ ಬೇಡಿ'
ಅಂತಿಮಕಾರ್ಯ ಎಂಬುದು ತೀರಾ ಖಾಸಗಿ ವಿಷಯ, ಒಂದೋ ಅಂಥಹಾ ಸ್ಥಳಗಳಿಗೆ ನೀವು (ಮಾಧ್ಯಮ) ಬರಲೇಬೇಡಿ, ಅಥವಾ ಬಂದರೂ ಅಂತರ ಕಾಯ್ದುಕೊಳ್ಳಿ. ನೀವು ಗ್ಲಾಮರ್ ಎಂದು ಕರೆಯುವ ನಾವುಗಳೂ ಸಹ ಮನುಷ್ಯರೆ, ನಿಮಗೆ ಇರುವಂತೆಯೇ ನಮಗೂ ಭಾವನೆಗಳಿವೆ' ಎಂದಿದ್ದಾರೆ ಕೃತಿ ಸೆನನ್.

ಖಾಸಗಿ ವಿಷಯಗಳಲ್ಲಿ ತಲೆಹಾಕಬಾರದು: ಕೃತಿ
ಜರ್ನಲಿಸಂ ನಿಯಮಗಳನ್ನು ಪಾಲಿಸಬೇಕು, ಯಾವುದು ಪತ್ರಿಕೋದ್ಯಮದ ಪರಿಧಿಗೆ ಬರುತ್ತದೆ ಮತ್ತು ಯಾವುದು ಪತ್ರಿಕೋದ್ಯಮದ ಪರಿದಿಗೆ ಬರುವುದಿಲ್ಲ ಎಂಬುದು ಸ್ಪಷ್ಟವಾಗಬೇಕು. ನೀವು ಬದುಕಿ ಮತ್ತು ಬೇರೆಯವರನ್ನೂ ಬದುಕಲು ಬಿಡಿ, ಪತ್ರಿಕೋದ್ಯಮಕ್ಕೆ ಸಂಬಂಧಿಸದ ಖಾಸಗಿ ವಿಷಯಗಳಿಗೆ ತಲೆ ಹಾಕಬೇಡಿ ಎಂದು ಖಾರವಾಗಿಯೇ ಹೇಳಿದ್ದಾರೆ ಕೃತಿ.

ಎದೆಯಲ್ಲಿ ಧಮ್ ಇರಬೇಕು: ಕೃತಿ ಸೆನನ್
ಗಾಳಿಸುದ್ದಿಗಳ ಬಗ್ಗೆ ಬರೆಯುವುದು ಬಂದ್ ಆಗಬೇಕು, ಗಾಳಿಸುದ್ದಿ ಬರೆಯುವುದು ಮಾನಸಿಕ ಹಿಂಸೆ ಅಡಿಯಲ್ಲಿ ಬರಬೇಕು. ಏನೇ ಬರೆದರು ಅದಕ್ಕೆ ಸೂಕ್ತ ಸಾಕ್ಷಿ ಇರಬೇಕು ಅಥವಾ ಎದೆಯಲ್ಲಿ ಧಮ್ ಇರಬೇಕು, ಇಲ್ಲವಾದರೆ ಬರೆಯಲು ಹೋಗಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ ಕೃತಿ.

'ನಿಮಗೆ ಎಲ್ಲಾ ಗೊತ್ತು ಎಂದುಕೊಳ್ಳುವುದು ಬಿಡಿ'
'ಬೇರೆಯವರ ಬಗ್ಗೆ ಕೆಟ್ಟದು ಯೋಚಿಸುವುದನ್ನು ಬಿಡಿ, ಗಾಳಿಸುದ್ದಿ ಹರಡಬೇಡಿ, ನಿಮಗೇ ಎಲ್ಲಾ ಗೊತ್ತಿದೆ ಎಂದುಕೊಳ್ಳುವುದನ್ನು ಬಿಡಿ, ನಿಮಗೆ ಅನಿಸಿದ್ದು ಸತ್ಯ ಎಂದುಕೊಳ್ಳುವುದನ್ನೂ ಬಿಡಿ. ನಿಮಗೆ ಏನೂ ಗೊತ್ತಿರದ ವಿಷಯದ ಬಗ್ಗೆ ಬೇರೆಯವರು ದೊಡ್ಡ ಹೋರಾಟದಲ್ಲಿಯೇ ತೊಡಗಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ನಿಮಗೇನೂ ಗೊತ್ತಿಲ್ಲ' ಎಂದು ಬಾಲಿವುಡ್ ಸಿನಿ ಪತ್ರಕರ್ತರನ್ನು ಜಾಡಿಸಿದ್ದಾರೆ ಕೃತಿ.


Click it and Unblock the Notifications











