ಕಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಮತ್ತೆ ಹಿಂದುಪರ ಸಂಘಟನೆಗಳ ಕಿರಿಕ್: ಶೋ ರದ್ದು
ಸ್ಟ್ಯಾಂಡ್ಅಪ್ ಕಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಮತ್ತೆ ಹಿಂದುಪರ ಸಂಘಟನೆಗಳು ಮುಗಿಬಿದ್ದಿದ್ದು, ಕುನಾಕ್ ಕಾಮ್ರಾರ ಶೋ ಅನ್ನು ರದ್ದು ಮಾಡಿಸಿವೆ.
ಹರ್ಯಾಣಾದ ಗುರುಗಾವ್ನ ಸ್ಟುಡಿಯೋ ಕ್ಸೋ ಬಾರ್ನಲ್ಲಿ ಕುನಾಲ್ ಕಾಮ್ರಾರ ಸ್ಟಾಂಡ್ಅಪ್ ಕಾಮಿಡಿ ಶೋ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಂದಿನ ವಾರಾಂತ್ಯಕ್ಕೆ ನಡೆಯಲಿತ್ತು. ಟಿಕೆಟ್ ಬುಕಿಂಗ್ ಈಗಾಗಲೆ ಆರಂಭವಾಗಿತ್ತು. ಆದರೆ ಹಿಂದುಪರ ಸಂಘಟನೆ ಸದಸ್ಯರು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಭಜರಂಗ ದಳ ಹಾಗೂ ವಿಶ್ವ ಪರಿಷದ್ ಸದಸ್ಯರು ಇದಕ್ಕೆ ಆಕ್ಷೇಪಣೆ ಎತ್ತಿದ್ದು, ಸ್ಟುಡಿಯೋ ಕ್ಸೋ ಬಾರ್ ಗೆ ತೆರಳಿ, ಕುನಾಲ್ ಕಾಮ್ರಾ ಕಾರ್ಯಕ್ರಮ ನಡೆದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗೂ ಡೆಪ್ಯೂಟಿ ಕಮಿಷನರ್ಗೂ ದೂರು ಸಲ್ಲಿಸಿರುವ ಹಿಂದುಪರ ಸಂಘಟನೆ ಸದಸ್ಯರು, ''ಕುನಾಲ್ ಕಾಮ್ರಾ ತನ್ನ ಶೋಗಳಲ್ಲಿ ಹಿಂದುಗಳಿಗೆ ಅಪಮಾನ ಮಾಡುತ್ತಾನೆ. ಇದು ಸಮಸ್ಯೆಗೆ ಕಾರಣವಾಗಬಹುದು ಹಾಗಾಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.

''ಕುನಾಲ್ ಕಾಮ್ರಾ ಹೆಸರಿನ ವ್ಯಕ್ತಿಯ ಶೋ ಗುರುಗ್ರಾಮದ ಸೆಕ್ಟರ್ 29, ಕ್ಸೋ ಬಾರ್ ನಲ್ಲಿ ಸೆಪ್ಟೆಂಬರ್ 17 ರಂದು ಆಯೋಜಿಸಲಾಗಿದೆ. ಈ ವ್ಯಕ್ತಿಯು ತನ್ನ ಶೋಗಳಲ್ಲಿ ಹಿಂದೆ ದೇವರನ್ನು ಅವಹೇಳನ ಮಾಡುತ್ತಾನೆ. ಇದೇ ಪ್ರಕರಣವಾಗಿ ಈಗಾಗಲೇ ಒಂದು ಎಫ್ಐಆರ್ ಈತನ ಮೇಲೆ ದಾಖಲಾಗಿದೆ. ಈತನ ಶೋ ಗುರುಗ್ರಾಮದಲ್ಲಿ ನಡೆದರೆ ನಗರದಲ್ಲಿ ಆತಂಕ ಸೃಷ್ಟಿಯಾಗುವ ಸಾಧ್ಯತೆ ಇದೆ. ಹಾಗಾಗಿ ಈಗಲೇ ಈತನ ಕಾರ್ಯಕ್ರಮವನ್ನು ರದ್ದು ಮಾಡಬೇಕು, ಇಲ್ಲವಾದರೆ ಭಜರಂಗದಳ ಹಾಗೂ ವಿಎಚ್ಪಿ ಸದಸ್ಯರು ಪ್ರತಿಭಟನೆ ನಡೆಸುತ್ತಾರೆ'' ಎಂದು ಹಿಂದುಪರ ಸಂಘಟನೆ ಸದಸ್ಯರು ಡೆಪ್ಯುಟಿ ಕಮೀಷನರ್ಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಹಿಂದುಪರ ಸಂಘಟನೆಯೊಂದರ ಸದಸ್ಯ ಪ್ರದೀಪ್ ಸೈನಿ ಮಾಧ್ಯಮದೊಟ್ಟಿಗೆ ಮಾತನಾಡಿ, 'ಸ್ಟುಡಿಯೋ ಕ್ಸೋ ಬಾರ್ ಗೆ ತೆರಳಿ ಕುನಾಲ್ ಕಾಮ್ರಾ ಶೋ ರದ್ದು ಮಾಡಬೇಕು ಎಂದು ನಾವು ಕೇಳಿದ್ದೇವೆ, ಕುನಾಲ್ ಕಾಮ್ರಾ ಹೇಗೆ ಹಿಂದು ದೇವತೆಗಳಿಗೆ ಅಮಾನ ಎಸಗುತ್ತಾನೆ ಎಂದು ಆತನ ಹಳೆಯ ವಿಡಿಯೋಗಳನ್ನು ತೋರಿಸಿ ವಿವರಿಸಿದ್ದೇವೆ. ಹಿಂದುಗಳ ನಂಬಿಕೆಗಳ ಮೇಲೆ ಹೀಗೆ ದಾಳಿ ಮಾಡುವವನ ಶೋ ಗುರುಗ್ರಾಮದಲ್ಲಿ ನಡೆಯುವುದಕ್ಕೆ ಬಿಡುವುದಿಲ್ಲ ಎಂಬುದನ್ನೂ ಅವರಿಗೆ ಮನದಟ್ಟು ಮಾಡಿದ್ದೇವೆ.
ಈ ಬಗ್ಗೆ ಮಾತನಾಡಿರುವ ಸ್ಟುಡಿಯೋ ಕ್ಸೋ ಬಾರ್ ನ ಮ್ಯಾನೇಜರ್ ಸಾಹಿಲ್ ದವ್ರಾ, ''ನಾವು ಶೋ ರದ್ದು ಮಾಡಿದ್ದೇವೆ. ನಮಗೆ ಒಲ್ಲದ ಸಮಸ್ಯೆಗಳು ಬೇಡ. ಭಜರಂಗ ದಳದ ಸದಸ್ಯರು ಇಬ್ಬರು ಬಂದಿದ್ದರು. ಶೋ ನಡೆಸಿದರೆ ಸಮಸ್ಯೆ ಮಾಡುವುದಾಗಿ ಬೆದರಿಕೆ ಹಾಕಿದರು. ಶೋಗೆ ವಿರೋಧ ವ್ಯಕ್ತಪಡಿಸಿದರು, ಶೋ ನಡೆಯಲು ಬಿಡುವುದಿಲ್ಲ ಎಂದರು. ನಾನು, ಸ್ಟುಡಿಯೋದ ಮಾಲೀಕರು, ಪೊಲೀಸರು ಹಾಗೂ ಕಮಿಡಿಯನ್ ಕುನಾಲ್ ಜೊತೆ ಮಾತನಾಡಿದೆ ಬಳಿಕ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದೆವು. ಟಿಕೆಟ್ ಮಾರಾಟ ಸಂಸ್ಥೆಗೂ ಸಹ ನಾವು ಈ ಬಗ್ಗೆ ಪತ್ರ ಬರೆದಿದ್ದೇವೆ'' ಎಂದಿದ್ದಾರೆ.
ಕುನಾಲ್ ಕಾಮ್ರಾ ಅವರು ತಮ್ಮ ಮೋದಿ ಜೋಕ್ಗಳಿಗೆ ಹಾಗೂ ಭಲಪಂಥೀಯ ರಾಜಕಾರಣದ ವಿರುದ್ಧದ ಜೋಕ್ಗಳಿಗೆ ಪ್ರಸಿದ್ಧರು. ಈ ಹಿಂದೆ ವಿಮಾನವೊಂದರಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಜೊತೆ ಜಗಳ ಮಾಡಿ ಸುದ್ದಿಯಾಗಿದ್ದರು. ಕೂಗುಮಾರಿ ಪತ್ರಿಕೋದ್ಯಮಕ್ಕೆ ಹೆಸರಾಗಿರುವ ಅರ್ನಬ್ ಅನ್ನು ಅವನದ್ದೇ ರೀತಿಯಲ್ಲಿ ಪ್ರಶ್ನೆ ಮಾಡಿದ್ದರು. ಬಳಿಕ ಕುನಾಲ್ ಅನ್ನು ಕೆಲವು ವಿಮಾನ ಯಾನ ಸಂಸ್ಥೆಗಳು ಬ್ಯಾನ್ ಮಾಡಿದವು.


Click it and Unblock the Notifications











