Breaking News: ಭಾರತೀಯ ಚಿತ್ರ ರಂಗದ ಅಪ್ರತಿಮ ನಿರ್ದೇಶಕ ಶ್ಯಾಮ್ ಬೆನಗಲ್ ಇನ್ನು ನೆನಪು ಮಾತ್ರ
ಅಂಕುರ್, ನಿಶಾಂತ್, ಮಂಥನ್, ಜುನೂನು, ಕಲಿಯುಗ್, ಹೀಗೆ ಒಂದಕ್ಕಿಂತೊಂದು ಶ್ರೇಷ್ಠ ಚಿತ್ರಗಳನ್ನು ನೀಡಿದ್ದ ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಿರ್ದೇಶಕ ಶ್ಯಾಮ್ ಬೆನಗಲ್ ಇಂದು ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದ ಬಳಲುತ್ತಿದ್ದ ಶ್ಯಾಮ್ ಬೆನಗಲ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಇನ್ನು ಎರಡು ಕಿಡ್ನಿ ಫೇಲಾದ ಹಿನ್ನೆಲೆ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಮನೆಯಲ್ಲಿಯೇ ಡಯಾಲಿಸಿಸ್ಗೆ ಶ್ಯಾಮ್ ಬೆನಗಲ್ ಒಳಗಾಗುತ್ತಿದ್ದರು.
2010ರಿಂದ ಚಿತ್ರರಂಗದಿಂದ ದೂರ ಇದ್ದ ಶ್ಯಾಮ್ ಬೆನಗಲ್ ನಾಸಿರುದ್ದೀನ್ ಶಾ, ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾಡ್ ಅವರಂತಹ ತಾರೆಯರನ್ನು ಚಿತ್ರರಂಗದಲ್ಲಿ ಬೆಳೆಸಿದರು. ಅನೇಕರ ಪಾಲಿಗೆ ಗುರುವಾದರು. ಇನ್ನು ಶ್ಯಾಮ್ ಬೆನಗಲ್ ನಿರ್ದೇಶನದ ಮೊದಲ ಚಿತ್ರ ಅಂಕುರ್ ದಲ್ಲಿ ಕನ್ನಡದ ಹೆಮ್ಮೆಯ ನಟ ಅನಂತ್ ನಾಗ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಶಬಾನಾ ಅಜ್ಮಿ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ವಿಶೇಷ ಅಂದರೆ ಇವರ ಈ ಮೊದಲ ಪ್ರಯತ್ನಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

ಡಿಸೆಂಬರ್ 14 1934ರಂದು ಹೈದ್ರಾಬಾದ್ನಲ್ಲಿ ಜನಿಸಿದ್ದ ಶ್ಯಾಮ್ ಬೆನಗಲ್, ಕಳೆದ ಡಿಸೆಂಬರ್ 14ರಂದು 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವಿಶೇಷ ಸಂದರ್ಭದಲ್ಲಿ ಶಬಾನಾ ಅಜ್ಮಿ ಸೇರಿ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು. ಶ್ಯಾಮ್ ಬೆನಗಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು. ಬಾಲಿವುಡ್ನ ಮತ್ತೊಬ್ಬ ದಂತಕಥೆ ಗುರುದತ್ ಅವರ ಸೋದರ ಸಂಬಂಧಿಯಾಗಿದ್ದ ಶ್ಯಾಮ್ ಬೆನಗಲ್ ಅವರಿಗೆ 1976ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. 1991ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಕೂಡ ಪಡೆದಿದ್ದ ಶ್ಯಾಮ್ ಬೆನಗಲ್ ಅವರಿಗೆ ಭಾರತದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿತ್ತು.
ಇನ್ನು ಶ್ಯಾಮ್ ಬೆನಗಲ್ ಕೇವಲ ಚಿತ್ರ ನಿರ್ದೇಶಕರು ಮಾತ್ರ ಆಗಿರಲಿಲ್ಲ, ಕಿರುಚಿತ್ರಗಳನ್ನು ಕೂಡ ನಿರ್ದೇಶಿಸಿದ್ದರು ಶ್ಯಾಮ್ ಬೆನಗಲ್. ಆ ಪೈಕಿ ಭಾರತದ ಸರ್ವಶ್ರೇಷ್ಠ ನಿರ್ದೇಶಕ ಸತ್ಯಜೀತ್ ರೇ ಅವರ ಕುರಿತು ಇವರು ಮಾಡಿದ್ದ ಜೀವನ ಚರಿತ್ರೆಯ ಕುರಿತು ಸಾಕ್ಷ್ಯ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ್ ಲಾಲ್ ಅವರ ಜೀವನಗಾಥೆಯನ್ನು ಡಾಕ್ಯೂಮೆಂಟರಿಯನ್ನಾಗಿಸಿದ್ದ ಶ್ಯಾಮ್ ಬೆನಗಲ್ ಈ ಸಾಕ್ಷ್ಯ ಚಿತ್ರಕ್ಕೂ ಕೂಡ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.


Click it and Unblock the Notifications











