ನಿಮ್ಮೆಲ್ಲರ ಹೆಸರು ಬರೆದೆ ನಾನು ಸಾಯೋದು, ಮಹಾಕುಂಭ ಮೇಳ ಮುಗಿದ ಬೆನ್ನಲ್ಲೇ ಗಳಗಳ ಅತ್ತ ಸುಂದರ ಸಾಧ್ವಿ!
ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು ಎಳೆಯಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಉದಾಹರಣೆಗೆ ಹರ್ಷ ರಿಚಾರಿಯಾ.
ಹೌದು, ಹರ್ಷ ರಿಚಾರಿಯಾ, ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್. ಕೇವಲ 30ರ ಹರೆಯದ ಈ ಚೆಲುವೆ ಯಾವ ಬಾಲಿವುಡ್ ನಾಯಕಿಗಿಂತ ಕಡಿಮೆ ಇಲ್ಲ. ಸೌಂದರ್ಯದ ಗಣಿಯಂತೆ ಇರುವ ಹರ್ಷ ನಿರೂಪಕಿ ಕೂಡ ಹೌದು. ಇಂಥಾ ಹರ್ಷಾ ಕುಂಭಮೇಳದಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಕಣ್ಣು ಕುಕ್ಕಿದ್ದರು. ಭಾರತದೆಲ್ಲೆಡೆ ಚರ್ಚೆಗೀಡಾಗಿದ್ದರು. ಅತ್ಯಂತ ಸುಂದರ ಸಾಧ್ವಿಯೆಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದರು. ಆದರೆ ಈಗ ಹರ್ಷ ಮೊಗದಲ್ಲಿ ಹರ್ಷ ಕಾಣುತ್ತಿಲ್ಲ. ನೆಮ್ಮದಿಗೆ ಸಂಪೂರ್ಣ ಕೊಳ್ಳಿ ಬಿದ್ದಿದೆ. ಹೀಗಾಗಿಯೇ ಸಾಯುವ ಮಾತುಗಳನ್ನಾಡಿದ್ದಾರೆ ಈ ಸುಂದರ ಸಾಧ್ವಿ.

ಹೌದು, ಅಸಲಿಗೆ ಕುಂಭಮೇಳದಲ್ಲಿ ಮೊದಲು ಎಲ್ಲರ ಕಣ್ಣಿಗೆ ಬಿದ್ದಾಗ ತಾವು ಎರಡು ವರ್ಷಗಳ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದಾರೆ ಎಂದು ಹರ್ಷ ರಿಚಾರಿಯಾ ಹೇಳಿದ್ದರು. ಆದರೆ, ಇವರ ಸೋಶಿಯಲ್ ಮೀಡಿಯಾದಲ್ಲಿನ ಭಾವಚಿತ್ರಗಳು ಹೇಳಿದ್ದ ಕಥೆ ಭಿನ್ನವಾಗಿದ್ದವು.ಹೀಗಾಗಿ ಅನೇಕರು ಇವರನ್ನು ಟ್ರೋಲ್ ಮಾಡಿದ್ದರು. ದೀಕ್ಷೆ ಪಡೆದ ನಂತರ ಚಿಕ್ಕ ಚಿಕ್ಕ ಬಟ್ಟೆಯನ್ನೆಲ್ಲ ಹಾಕಿ ದೇಶ ವಿದೇಶಗಳನ್ನೆಲ್ಲ ತಿರುಗಬಹುದಾ ಎಂದು ಪ್ರಶ್ನೆ ಮಾಡಿದ್ದರು. ಕಳ್ಳ ಸಾಧ್ವಿ ಎಂದೆಲ್ಲ ಹೀಯಾಳಿಸಲು ಶುರು ಮಾಡಿದ್ದರು.
ಇನ್ನು ಇದು 5G ಯುಗ. ನೋಡ, ನೋಡುತ್ತಾ, ಹರ್ಷ ರಿಚಾರಿಯಾ ಕುರಿತ ಈ ಸುದ್ದಿಗಳು ಕುಂಭಮೇಳದಲ್ಲಿರುವ ಸನ್ಯಾಸಿಗಳನ್ನು ಕೂಡ ತಲುಪಿದವು. ಇದಕ್ಕೆ ಪುರಾವೆ ಎನ್ನುವಂತೆ ಹರ್ಷ ರಿಚಾರಿಯಾ ಅವರಿಗೆ ಕುಂಭ ಮೇಳದಿಂದ ಹೊರ ಹೋಗುವಂತೆ ಅವರ ಗುರಗಳೇ ಆದೇಶವನ್ನು ನೀಡಿದ್ದರು. ನಿರಂಜನಿ ಅಖಾಡದ ಛಾವಣಿಯಲ್ಲಿ ಸಂತರ ಜೊತೆ ಹರ್ಷ ರಿಚಾರಿಯಾ ಕುಳಿತುಕೊಂಡಿದ್ದಕ್ಕೆ ಅನೇಕ ಸಂತ-ಋಷಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಕುಂಭಮೇಳ ಜಪ, ತಪ ಮತ್ತು ಜ್ಞಾನಕ್ಕಾಗಿ, ಅಖಾಡಗಳ ಮೋಜು ತೋರಿಸೋಕೆ ಅಲ್ಲ ಎಂದು ಕಾಳಿ ಸೇನೆಯ ಮುಖ್ಯಸ್ಥ ಸ್ವಾಮಿ ಆನಂದ ಸ್ವರೂಪ ಕಿಡಿ ಕಾರಿದ್ದರು. ಮಹಾಕುಂಭ ಮೇಳದಿಂದ ಹರ್ಷಾ ರಿಚಾರಿಯಾ ಅವರನ್ನು ಹೊರಗಡೆ ಕಳುಹಿಸಿದ್ದರು. ಇದರಿಂದ ಆಘಾತಕ್ಕೊಳಗಾಗಿದ್ದ ಹರ್ಷಾ ತಿಂಗಳ ಹಿಂದೆ ಕಣ್ಣೀರು ಹಾಕಿದ್ದರು. ಗಳಗಳನೆ ಅತ್ತು ತಮ್ಮ ಮನದ ನೋವು ಹೊರ ಹಾಕಿದ್ದರು. ಇಂಥಾ ಹರ್ಷಾ ರಿಚಾರಿಯಾ ಈಗ ಸಾಯುವ ಮಾತುಗಳನ್ನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನು ಕೂಡ ಹಾಕಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಹರ್ಷಾ ರಿಚಾರಿಯಾ ಹಿಂದುತ್ವ ನನ್ನ ಕಣ ಕಣದಲ್ಲಿತ್ತು. ಈ ಹಿನ್ನೆಲೆ ನಾನು ಸನಾತನ ಧರ್ಮದ ಉಳಿವಿಗಾಗಿ ಸಂಕಲ್ಪ ಮಾಡಿದ್ದೆ, ನಮ್ಮ ಧರ್ಮದ ಬಗ್ಗೆ ಅರಿವು ಮೂಡಿಸಲು ಪ್ರಯತ್ನವನ್ನು ಮಾಡಿದ್ದೆ ಆದರೆ ಕೆಲವು ಧಾರ್ಮಿಕ ವಿರೋಧಿಗಳು ನನ್ನನ್ನೂ ತಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನ ಹಳೆಯ ವಿಡಿಯೋ ಮತ್ತು ಫೋಟೊಗಳನ್ನು ಈಗ ಬಿಡುಗಡೆ ಮಾಡಿ ನನ್ನ ಹೀಯಾಳಿಸುತ್ತಿದ್ದಾರೆ, ನೀನು ಸಾಧ್ವಿಯಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ನಾನು ಸಾಧ್ವಿ ಎಂದು ಯಾವತ್ತೂ ಹೇಳಿಕೊಂಡಿಲ್ಲ ಎಂದು ಕಣ್ಣೀರು ಸುರಿಸಿದ್ದಾರೆ.
ಮುಂದುವರೆದು ಇದು ಎಐ ಕಾಲ. ಈ ಕಾಲದಲ್ಲಿ ಎಐ ಮೂಲಕ ಕೆಲ ವಿಡಿಯೋಗಳನ್ನು ಸೃಷ್ಟಿಸಲಾಗುತ್ತಿದೆ, ಈ ಮೂಲಕ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದಿರುವ ಹರ್ಷ ರಿಚಾರಿಯಾ ದಿನಕ್ಕೆ ನನಗೆ 15 ರಿಂದ 20 ಮೆಸೆಜ್ಗಳು ಬರುತ್ತಿವೆ, ಈ ವಿಡಿಯೋದಲ್ಲಿರುವುದು ನೀವೇನಾ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ನನಗೆ ಕಿರುಕುಳ ನೀಡುತ್ತಿರುವವರ ಎಲ್ಲರ ಹೆಸರನ್ನು ನಾನು ಬರೆದು ಇಟ್ಟಿದ್ದೇನೆ, ಮುಂದೊಂದು ದಿನ ನಾನು ಆತ್ಮಹತ್ಯೆ ಮಾಡಿಕೊಂಡರೆ ಅವರೆಲ್ಲ ಕಾರಣ ಎಂದಿದ್ದಾರೆ. ಪತ್ರದಲ್ಲಿ ಎಲ್ಲರ ಹೆಸರನ್ನು ಬರೆದೇ ಸಾಯುವುದಾಗಿ ಹೇಳಿರುವ ಹರ್ಷಾ ಆ ಭಗವಂತ ನೀಡಿರುವ ಧೈರ್ಯದಿಂದ ಎಷ್ಟು ಸಾಧ್ಯವೋ ಅಷ್ಟು ಹೋರಾಡುತ್ತೇನೆ ಎಂದು ಹೇಳಿದ್ಧಾರೆ. ಸದ್ಯ ಹರ್ಷಾ ರಿಚಾರಿಯಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











