ತೈಲಬೆಲೆ ಏರಿಕೆ ಬಗ್ಗೆ ಅಮಿತಾಬ್-ಅಕ್ಷಯ್ ಮೌನ; ಚಿತ್ರೀಕರಣಕ್ಕೆ ಅವಕಾಶ ನೀಡಲ್ಲವೆಂದು ಕಾಂಗ್ರೆಸ್ ಬೆದರಿಕೆ
ಗಗನಕ್ಕೇರಿರುವ ತೈಲ ಬೆಲೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವ ಬಾಲಿವುಡ್ ನ ಖ್ಯಾತ ನಟರಾದ ಅಕ್ಷಯ್ ಕುಮಾರ್ ಮತ್ತು ಅಮಿತಾಬ್ ಬಚ್ಚನ್ ಅವರ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಪ್ರದರ್ಶನಕ್ಕೂ ಅನುಮತಿ ನೀಡಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಸಮತಿ ಅಧ್ಯಕ್ಷ ನಾನಾ ಪಟೋಲೆ ಬೆದರಿಕೆ ಹಾಕಿದ್ದಾರೆ.
ಈ ಹಿಂದೆ ಅಂದರೆ ಮನಮೋಹನ್ ಸಿಂಗ್ ಪ್ರಧಾನಿಯಾದ ಸಮಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾದಾಗ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಟೀಕಿಸಿದ್ದ ಅಮಿತಾಬ್ ಮತ್ತು ಅಕ್ಷಯ್ ಇಂದು ಮೌನವಾಗಿರುವುದೇಕೆ ಎಂದು ನಾನಾ ಪಟೋಲೆ ಪ್ರಶ್ನಿಸಿದ್ದಾರೆ.
ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಹಾಗಾಗಿ ಆಗಿನ ಸರ್ಕಾರದ ನಿಲುವಿನ ವಿರುದ್ಧ ಖ್ಯಾತನಾಮರು ಅಂಜಿಕೆ ಇಲ್ಲದೆ ಧ್ವನಿ ಎತ್ತುತ್ತಿದ್ದರು. ಆದರೆ ಇಂದು ಬಿಜೆಪಿ ಸರ್ಕಾರದ ಕೈಗೊಂಬೆಗಳಾಗಿದ್ದಾರೆ ಎಂದು ನಾನಾ ಪಟೋಲೆ ಹೇಳಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಅಮಿತಾಬ್ ಜನರು ಮತ್ತು ನ್ಯಾಯದ ಪರವಾಗಿ ಮಾತನಾಡದಿದ್ದರೆ, ಮಹಾರಾಷ್ಟ್ರ ಸರ್ಕಾರ ಅವರ ಸಿನಿಮಾಗಳನ್ನು ರಾಜ್ಯದಲ್ಲಿ ಚಿತ್ರೀಕರಿಸಲು ಅನುಮತಿ ನೀಡುವುದಿಲ್ಲ ಎಂದು ಗುಡುಗಿದ್ದಾರೆ.
ಪಟೋಲೆ ಮಾತಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರಾಮ್ ಕದಮ್ ಬಾಲಿವುಡ್ ನಟರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ದೇಶದ ಪರವಾಗಿ ಟ್ವೀಟ್ ಮಾಡಿರುವ ಅಕ್ಷಯ್ ಮತ್ತು ಅಮಿತಾಬ್ ಪರವಾಗಿ ರಾಷ್ಟ್ರ ನಿಂತಿದೆ ಎಂದು ತಿರುಗೇಟು ನೀಡಿದ್ದಾರೆ.


Click it and Unblock the Notifications











