ಮಾಹಿತಿಗಳು ಸಿಕ್ಕಿವೆ; ಸುಶಾಂತ್ ಸಾವಿನ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಕೊಟ್ಟ ಮಹಾರಾಷ್ಟ್ರ ಡಿಸಿಎಂ ಹೇಳಿಕೆ!
ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ ಚಿತ್ರರಂಗದಲ್ಲಿ ಅತಿ ವಿಭಿನ್ನವಾದ ಕಥೆಗಳನ್ನು ಆರಿಸಿಕೊಂಡು ಹಿಟ್ ಚಿತ್ರಗಳನ್ನು ಸಾಲು ಸಾಲಾಗಿ ನೀಡಲು ಆರಂಭಿಸಿದ್ದ ನಟ. ಮಹೇಂದ್ರ ಸಿಂಗ್ ದ ಅನ್ಟೋಲ್ಡ್ ಸ್ಟೋರಿ ಚಿತ್ರದ ಮೂಲಕ ಅಪಾರವಾದ ಫೇಮ್ ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ನ ನೆಕ್ಸ್ಟ್ ಬಿಗ್ ಥಿಂಗ್ ಎನ್ನುವಾಗಲೇ ಸಾವಿಗೀಡಾಗಿದ್ದರು.
ಹೌದು, 2020ರ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಇಡೀ ದೇಶಕ್ಕೆ ಶಾಕ್ ನೀಡಿತ್ತು. ಮುಂಬೈನ ಬಾಂದ್ರಾದಲ್ಲಿನ ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತಿಳಿದುಬಂದರೂ ಸುಶಾಂತ್ ಸಿಂಗ್ ರಜಪೂತ್ ಕುಟುಂಬಸ್ಥರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಗಂಭೀರವಾದ ಅನುಮಾನ ದೊಡ್ಡ ಮಟ್ಟದಲ್ಲಿ ವ್ಯಕ್ತವಾಯಿತು. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಟ್ವೀಟ್ ಮಾಡಿದ್ದ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿಂದಿನ ಅಸಲಿಯತ್ತೇನು ಎಂಬುದನ್ನು ಪತ್ತೆ ಹಚ್ಚಬೇಕೆಂದು ಪಟ್ಟು ಹಿಡಿದಿದ್ದರು.
ಅದರಂತೆ ಈ ಪ್ರಕರಣವನ್ನು ಸಿಬಿಐಗೂ ಸಹ ವರ್ಗಾಯಿಸಲಾಗಿತ್ತು. ಹೀಗೆ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಮೂರು ವರ್ಷಗಳು ಕಳೆದರೂ ಸಹ ಯಾವುದೇ ರೀತಿಯ ಬೆಳವಣಿಗೆಗಳು ಕಂಡುಬಂದಿರಲಿಲ್ಲ. ಸಿಬಿಐಯಾಗಲಿ ಅಥವಾ ಸಂಬಂಧಪಟ್ಟ ವ್ಯಕ್ತಿಗಳಾಗಲಿ ಈ ಕುರಿತು ಮಾತನಾಡಿರಲಿಲ್ಲ. ಆದರೆ ಈಗ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ನೀಡಿರುವ ಹೇಳಿಕೆಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಹೆಚ್ಚಿಸಿದೆ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳಲ್ಲಿ ತುಸು ಸಮಾಧಾನವನ್ನೂ ಸಹ ತಂದಿದೆ.
ರಿಪಬ್ಲಿಕ್ ಚಾನೆಲ್ ಜತೆ ನಡೆದ ಸಂದರ್ಶನದಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮಾತನಾಡಿದ ದೇವೇಂದ್ರ ಫಡ್ನಾವಿಸ್ "ಕೆಲವು ವ್ಯಕ್ತಿಗಳು ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ಪ್ರತಿಪಾದಿಸಿದರು. ಅಂತಹವರನ್ನು ನಾವು ಅವರನ್ನು ಸಂಪರ್ಕಿಸಿದೆವು ಮತ್ತು ಸಾಕ್ಷ್ಯವನ್ನು ಪೊಲೀಸರಿಗೆ ಸಲ್ಲಿಸುವಂತೆ ವಿನಂತಿಸಿದೆವು" ಎಂದು ಹೇಳಿಕೊಂಡರು.
ಇನ್ನೂ ಮುಂದುವರೆದು ಮಾತಾನಾಡಿದ ದೇವೇಂದ್ರ ಫಡ್ನಾವಿಸ್ "ಸದ್ಯ ನಾವು ಪ್ರಸ್ತುತಪಡಿಸಿದ ಪುರಾವೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ ಮತ್ತು ಈ ಹಂತದಲ್ಲಿ ಪ್ರಕರಣದ ಅಂತಿಮ ಫಲಿತಾಂಶದ ಕುರಿತು ಯಾವುದೇ ಕಾಮೆಂಟ್ಗಳನ್ನು ನೀಡುವುದು ಸರಿಯಲ್ಲ" ಎಂದು ಹೇಳಿದ್ದಾರೆ. ಈ ಮೂಲಕ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬೀಳಲಿದೆ ಎಂಬ ಸುಳಿವನ್ನು ದೇವೇಂದ್ರ ಫಡ್ನಾವಿಸ್ ನೀಡಿದ್ದಾರೆ.


Click it and Unblock the Notifications











